Last Updated:
ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂನ ಅಬ್ದುಲ್ ರಹೀಮ್ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಅಷ್ಟಕ್ಕೂ, 20 ವರ್ಷಗಳ ಹಿಂದೆ ದುಬೈನಲ್ಲಿ ಏನಾಯಿತು ಗೊತ್ತಾ?
ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾ (Saudi Arabia) ದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂ (Keralam) ನ ಕೋಝಿಕ್ಕೋಡ್ (Kozhikode) ನಿವಾಸಿ ಅಬ್ದುಲ್ ರಹೀಮ್ (Abdul Rahim) ಕೊನೆಗೂ ಸುರಕ್ಷಿತವಾಗಿ ಭಾರತ (India) ಕ್ಕೆ ಮರಳಿದ್ದಾರೆ. ಗುರುವಾರ (ಮೇ 28) ಕೋಝಿಕ್ಕೋಡ್ನ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Airport) ಕ್ಕೆ ಆಗಮಿಸಿದ ಅಬ್ದುಲ್ ರಹೀಮ್ ಅವರಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು.ಒಬ್ಬ ಸಾಮಾನ್ಯ ಮನುಷ್ಯನ ಜೀವ ಉಳಿಸಲು ಪ್ರಪಂಚದಾದ್ಯಂತ ಮಾನವೀಯತೆ (Humanity) ಯೊಂದಿಗಿನ ವೀರೋಚಿತ ಹೋರಾಟವು ಇಂದು ಅಬ್ದುಲ್ ರಹೀಮ್ ಅವರನ್ನು ಅವರ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಿದೆ.
ಅಬ್ದುಲ್ ರಹೀಮ್ ಆಗಮನದ ಸುದ್ದಿ ಕೇಳಿ ವಿಮಾನ ನಿಲ್ದಾಣವು ಜನರಿಂದ ತುಂಬಿತ್ತು. ಅವರನ್ನು ನೋಡಲು ಮತ್ತು ಸ್ವಾಗತಿಸಲು ಕುಟುಂಬಸ್ಥರು, ಸ್ನೇಹಿತರು, ಸ್ಥಳೀಯರು ಮತ್ತು ಮಾಧ್ಯಮದವರು ಸೇರಿದಂತೆ ನೂರಾರು ಜನರು ಜಮಾಯಿಸಿದರು. ಪ್ರಮುಖ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಬಾಬಿ ಚೆಮ್ಮನೂರು ವಿಮಾನ ನಿಲ್ದಾಣದಲ್ಲಿ ರಹೀಮ್ ಅವರನ್ನು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದರು.
ದೀರ್ಘ ಜೈಲು ಶಿಕ್ಷೆಯ ನಂತರ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದ ರಹೀಮ್, ತನಗಾಗಿ ನೆರೆದಿದ್ದ ಜನಸಮೂಹವನ್ನು ನೋಡಿ ತೀವ್ರ ಭಾವುಕರಾದರು. ಅವರು ಎಲ್ಲರಿಗೂ ಕೈ ಜೋಡಿಸಿ ಧನ್ಯವಾದ ಹೇಳಿದರು. ಹೆಬ್ಬೆರಳುಗಳನ್ನು ಮೇಲಕ್ಕೆತ್ತಿ ತಮ್ಮ ಸಂತೋಷವನ್ನು ಹಂಚಿಕೊಂಡರು. “ನನ್ನನ್ನು ಉಳಿಸಿದ ಮತ್ತು ನನ್ನ ಕುಟುಂಬಕ್ಕೆ ಮರಳಲು ಸಹಾಯ ಮಾಡಿದ ಎಲ್ಲರಿಗೂ ನಾನು ನನ್ನ ಜೀವನದುದ್ದಕ್ಕೂ ಋಣಿಯಾಗಿರುತ್ತೇನೆ” ಎಂದು ರಹೀಮ್ ಕಣ್ಣೀರು ಸುರಿಸುತ್ತಾ ಮಾಧ್ಯಮಗಳಿಗೆ ತಿಳಿಸಿದರು.
ಅಬ್ದುಲ್ ರಹೀಮ್ ಕೇರಳಂನಲ್ಲಿ ಶಾಲಾ ಬಸ್ ಮತ್ತು ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಉತ್ತಮ ಅವಕಾಶಗಳನ್ನು ಹುಡುಕುತ್ತಾ ರಹೀಮ್ ನವೆಂಬರ್ 28, 2006 ರಂದು ಸೌದಿ ಅರೇಬಿಯಾದ ರಿಯಾದ್ಗೆ ಚಾಲಕನ ಕೆಲಸಕ್ಕಾಗಿ ತೆರೆಳಿದ್ದರು. ಕೆಲಸಕ್ಕೆ ಸೇರಿದ ಕೇವಲ 28 ದಿನಗಳಲ್ಲಿ (ಡಿಸೆಂಬರ್ 24, 2006) ಅವರ ಜೀವನದಲ್ಲಿ ಎಂದು ಮರೆಯದ ಘಟನೆಯೊಂದು ನಡೆದಿತ್ತು.
ರಹೀಮ್ ತನ್ನ ಮಾಲೀಕ ಅಬ್ದುಲ್ ರಹಮಾನ್ ಅಲ್ ಶಹ್ರಿಯವರ 17 ವರ್ಷದ ಪಾರ್ಶ್ವವಾಯು ಪೀಡಿತ ಮಗ ಮಗ ಅನಸ್ ಅಲ್ ಶಹ್ರಿನನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಆ ಬಾಲಕ ಉಸಿರಾಟದ ಯಂತ್ರದ ಸಹಾಯದಿಂದ ಬದುಕುತ್ತಿದ್ದ. ಆಕಸ್ಮಿಕವಾಗಿ ಕಾರಿನಲ್ಲಿ ಆ ಯಂತ್ರವು ಕಳಚಿಕೊಂಡ ಪರಿಣಾಮ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದನು. ಆಕಸ್ಮಿಕವಾಗಿ ನಡೆದ ಬಾಲಕನ ಸಾವಿನ ಪ್ರಕರಣದಲ್ಲಿ ರಹೀಮ್ ಅವರನ್ನೇ ಹೊಣೆಗಾಗಿಸಿ ಸೌದಿ ಪೊಲೀಸರು ಬಂಧಿಸಿದ್ದರು.
ಬಾಲಕನ ಸಾವಿನ ಪ್ರಕರಣದ ವಿಚಾರಣೆ ನಡೆಸಿದ್ದ ಸೌದಿ ನ್ಯಾಯಾಲಯವು ರಹೀಮ್ ಆರೋಪಿ ಎಂದು 2010 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ರಹೀಮ್ ಕುಟುಂಬವು ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತು, ಆದರೆ ಅಲ್ಲಿಯೂ ಅದೇ ಶಿಕ್ಷೆಯನ್ನು ಎತ್ತಿಹಿಡಿಯಲಾಯಿತು. ಇತ್ತ ಕೇರಳಂನಲ್ಲಿರುವ ಅವರ ಕುಟುಂಬವು ತಮ್ಮ ಮಗನ ಮರಣದಂಡನೆಯ ನಿರಂತರ ಭಯದಲ್ಲಿ ವಾಸಿಸುತ್ತಿತ್ತು.
ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಅಬ್ದುಲ್ ರಹೀಮ್ ಅವರನ್ನು ಉಳಿಸಿಕೊಳ್ಳಲು ಮೃತ ಬಾಲಕನ ಕುಟುಂಬವು ಒಂದು ಷರತ್ತು ವಿಧಿಸಿತು. ಅಬ್ದುಲ್ ರಹೀಮ್ 15 ಮಿಲಿಯನ್ ಸೌದಿ ರಿಯಾಲ್ಗಳು (ಸುಮಾರು 34 ಕೋಟಿ ರೂ.) ತಾಯ್ತನದ ಪರಿಹಾರ ಧನವನ್ನು ನೀಡಿದರೆ ಅವರನ್ನು ಕ್ಷಮಿಸಲು ಒಪ್ಪಿಕೊಂಡರು. ಬಡ ಚಾಲಕನ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ಅಸಾಧ್ಯವಾದ ಕೆಲಸವಾಗಿತ್ತು.
ರಹೀಮ್ ಜೀವ ಉಳಿಸಲು ಪ್ರಪಂಚದಾದ್ಯಂತದ ಇರುವ ಮಲಯಾಳಿಗಳು ಒಂದಾದರು. ಪ್ರಪಂಚದಾದ್ಯಂತ ಕ್ರೌಡ್ಫಂಡಿಂಗ್ ಮೂಲಕ ದೇಣಿಗೆ ಸಂಗ್ರಹಿಸಲಾಯಿತು. ಕೆಲವೇ ದಿನಗಳಲ್ಲಿ ಸಾಮಾನ್ಯ ಕೂಲಿ ಕಾರ್ಮಿಕರು, ಅನಿವಾಸಿ ಭಾರತೀಯರು, ಸಾಮಾಜಿಕ ಸಂಸ್ಥೆಗಳು ಮತ್ತು ರಾಜಕಾರಣಿಗಳು ಕೈಜೋಡಿಸಿ ಸೋಶಿಯಲ್ ಮೀಡಿಯಾ ಮೂಲಕ ದಾಖಲೆಯ 34 ಕೋಟಿ ರೂ.ಗಳನ್ನು ಸಂಗ್ರಹಿಸಿ ಸೌದಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ಈ ಅದ್ಭುತ ಮಾನವೀಯ ಪ್ರಯತ್ನದಿಂದಾಗಿ ಸೌದಿ ನ್ಯಾಯಾಲಯವು ಮರಣದಂಡನೆಯನ್ನು ರದ್ದುಗೊಳಿಸಿ ರಹೀಮ್ ಅನ್ನು ಬಿಡುಗಡೆ ಮಾಡಿತು. ರಹೀಮ್ ಅವರ ಕಥೆ ಮಾನವೀಯತೆ ಇನ್ನೂ ಜೀವಂತವಾಗಿದೆ ಮತ್ತು ನಾವು ಪರಸ್ಪರ ಬೆಂಬಲಿಸಿದರೆ, ಯಾವುದೇ ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಬಹುದು ಎಂಬುದನ್ನು ಸಾಬೀತುಪಡಿಸಿತು.













