Last Updated:
Yogaraj Bhat: ಈ ಬಾರಿ ಹಿಂಗಾರು ಮಳೆಯೂ ಇಲ್ಲ, ಮುಂಗಾರು ಮಳೆಯೂ ಇಲ್ಲ, ಇತ್ತ ಯೋಗರಾಜ್ ಭಟ್ರದ್ದೂ ಸದ್ದು ಸುದ್ದಿಯಿಲ್ಲ! ಹೀಗೆ ಅಂದುಕೊಳ್ಳುತ್ತಿರುವಾಗಲೇ ಭಟ್ರ ಮನೆಯಿಂದ ಮತ್ತೊಂದು ನ್ಯೂಸ್ ಬಂದಿದೆ. ಭಟ್ರು ಮನೆಯಲ್ಲಿಲ್ಲ, ಆಗಾಗ ಮುಂಬೈಗೆ ಹೋಗ್ತಾರೆ ಎನ್ನಲಾಗ್ತಿದ್ಯಂತೆ!
ಪ್ರತೀ ಸಲ ಮುಂಗಾರು ಮಳೆ (Mansoon) ಬಂದಾಗಲೂ ನೆನಪಾಗೋದು ಕನ್ನಡದ ಮುಂಗಾರುಮಳೆ (Mungarumale) ಸಿನಿಮಾ, ಅದರ ಡೈಲಾಗ್, ಹಾಡುಗಳು, ಕಥೆ, ಗಣೇಶ್, ಪೂಜಾಗಾಂಧಿ, ಅನಂತ್ ನಾಗ್, ಜಯಂತ್ ಕಾಯ್ಕಿಣಿ, ಸೋನು ನಿಗಮ್… ಒಟ್ಟಾರೆ ಇಡೀ ಸಿನಿಮಾ, ಸಿನಿಮಾ ತಂಡ ನೆನಪಾಗುತ್ತೆ. ಇದ್ರ ಜೊತೆ ಅದರ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಕೂಡ ನೆನಪಾಗದೇ ಇರೋದಿಲ್ಲ. ಈ ಬಾರಿ ಹಿಂಗಾರು ಮಳೆಯೂ ಇಲ್ಲ, ಮುಂಗಾರು ಮಳೆಯೂ ಇಲ್ಲ, ಇತ್ತ ಯೋಗರಾಜ್ ಭಟ್ರದ್ದೂ ಸದ್ದು ಸುದ್ದಿಯಿಲ್ಲ! ಹೀಗೆ ಅಂದುಕೊಳ್ಳುತ್ತಿರುವಾಗಲೇ ಭಟ್ರ ಮನೆಯಿಂದ ಮತ್ತೊಂದು ನ್ಯೂಸ್ ಬಂದಿದೆ. ಭಟ್ರು ಮನೆಯಲ್ಲಿಲ್ಲ, ಆಗಾಗ ಮುಂಬೈಗೆ ಹೋಗ್ತಾರೆ ಎನ್ನಲಾಗ್ತಿದ್ಯಂತೆ! ಅಂದ್ರೆ ಸ್ಯಾಂಡಲ್ವುಡ್ ಭಟ್ರು, ಬಾಲಿವುಡ್ (Bollywood) ಅಂಗಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಎಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಕೇಳಿ ಬರ್ತಿದೆ.
ಯೋಗರಾಜ್ ಭಟ್.. ಹೀಗಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಭಟ್ರು ಅಂತ ಕನ್ನಡಿಗರು ಪ್ರೀತಿಯಿಂದ ಕರೆಯೋ ಯೋಗರಾಜ್ ಭಟ್, ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಿರ್ದೇಶಕ. ಮಣಿ ಹಾಗೂ ರಂಗ ಎಸ್ಎಸ್ಎಲ್ಸಿ ಅಂತ ಸಿನಿಮಾ ಮಾಡಿದ್ದ ಭಟ್ರು, ಸೋಲಿನ ಸುಳಿಯಲ್ಲಿ ಸಿಕ್ಕಿದ್ರು. ಅದಾದ ಮೇಲೆ ಚಿತ್ರರಂಗವನ್ನೇ ಬಿಟ್ಟು ಹೋಗೋ ಹಂತದಲ್ಲಿದ್ರು. ಆಗ ಅವರ ಯೋಗವನ್ನೇ ಬದಲಿಸಿದ್ದು ಮುಂಗಾರುಮಳೆ ಸಿನಿಮಾ!
ಮುಂಗಾರುಮಳೆ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಯೋಗರಾಜ್ ಭಟ್, ಗಣೇಶ್, ಪೂಜಾಗಾಂಧಿ, ಜಯಂತ್ ಕಾಯ್ಕಿಣಿ, ಕ್ಯಾಮೆರಾಮೆನ್ ಕೃಷ್ಣ, ಅನಂತ್ ನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ ಸೇರಿದಂತೆ ಇಡೀ ಚಿತ್ರತಂಡದ ಭವಿಷ್ಯವನ್ನೇ ಬದಲಿಸಿತ್ತು ಮುಂಗಾರುಮಳೆ ಸಿನಿಮಾ. ಇದಾದ ಮೇಲೆ ಯೋಗರಾಜ್ ಭಟ್ ಚಿತ್ರರಂಗದಲ್ಲೇ ಉಳಿಯೋ ಮನಸ್ಸು ಮಾಡಿದ್ರು. ಬಳಿಕ ಗಾಳಿಪಟ, ಡ್ರಾಮಾದಂತಹ ಹಿಟ್ ಸಿನಿಮಾ ಮಾಡಿದ್ದು ಇದೀಗ ಇತಿಹಾಸ.
ಮುಂಗಾರುಮಳೆ ಕ್ರೇಜ್ ಎಷ್ಟಿತ್ತು ಅಂದರೆ ಸ್ಯಾಂಡಲ್ವುಡ್ನಿಂದ ದೂರದ ಮುಂಬೈನ ಬಾಲಿವುಡ್ನವರೆಗೂ ಯೋಗರಾಜ್ ಭಟ್ ಹೆಸರು ತಲುಪಿತ್ತು. ಮುಂಗಾರು ಮಳೆ ಯಶಸ್ಸಿನಲ್ಲಿದ್ದ ಯೋಗರಾಜ್ ಭಟ್ಟರಿಗೆ ಮುಂಬೈನಿಂದ ಸಿನಿಮಾ ನಿರ್ದೇಶನದ ಆಫರ್ ಬಂದಿತ್ತಂತೆ.
ಹೌದು, ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಶನ್ ಬ್ಯಾನರ್ನಲ್ಲಿ ಕೆಲಸ ಮಾಡೋ ಅವಕಾಶ ಯೋಗರಾಜ್ ಭಟ್ಗೆ ಸಿಕ್ಕಿತ್ತಂತೆ. ಹೃತಿಕ್ ರೋಶನ್ ಚಿಕ್ಕಪ್ಪ ಅಂದ್ರೆ ರಾಕೇಶ್ ರೋಶನ್ ಸಹೋದರ ರಾಜೇಶ್ ರೋಶನ್ ಯೋಗರಾಜ್ ಭಟ್ಟರಿಗೆ ಆಫರ್ ಮಾಡಿದ್ರಂತೆ. ಆದರೆ ಮುಂಗಾರು ಮಳೆಯ ಯಶಸ್ಸಿನಲ್ಲಿದ್ದ ಯೋಗರಾಜ್ ಭಟ್ಟರು ಇತ್ತ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾದ್ರು. ಬರೀ ಡೈರೆಕ್ಷನ್ ಅಷ್ಟೇ ಅಲ್ಲ, ಹಲವು ಸಿನಿಮಾಗಳಿಗೆ ಭಟ್ಟರು ಹಾಡು ಬರೆದ್ರು, ಕೆಲ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ್ರು.

ಇದೀಗ ಯೋಗರಾಜ್ ಭಟ್ಟರು ಮತ್ತೆ ಮುಂಬೈ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಭಟ್ಟರ ನಿರ್ದೇಶನದ ಸಿನಿಮಾ ಸದ್ದು, ಸುದ್ದಿ ಎರಡೂ ಮಾಡ್ತಿಲ್ಲ. ಹೀಗಾಗಿ ಹಾಡು ಬರೆಯೋದ್ರಲ್ಲೇ ಭಟ್ರು ಬ್ಯುಸಿಯಾದ್ರು. ಇದೀಗ ಮತ್ತೆ ಬಾಲಿವುಡ್ನಿಂದ ಯೋಗರಾಜ್ ಭಟ್ಟರಿಗೆ ಆಫರ್ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬಾಲಿವುಡ್ನಲ್ಲಿ ಯಶಸ್ವಿಯಾಗಿರುವ ಪಂಚಾಯತ್ ವೆಬ್ ಸೀರಿಸ್ನ ಹೀರೋ ಜೀತೆಂದ್ರ ಕುಮಾರ್ಗೆ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಭಟ್ಟರು ಬಾಲಿವುಡ್ಗೆ ಹಾರೋ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಯೋಗರಾಜ್ ಭಟ್ ಇದುವರೆಗೂ ಏನೂ ಹೇಳಿಲ್ಲ.
Bangalore,Karnataka














