ಹೌದು, ಲಾ ನಿನಾವು ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಮಾಲಯದಲ್ಲಿ ಈ ಬದಲಾವಣೆ ವಿಶೇಷವಾಗಿದ್ದು, ಇದು ಪರಿಸರಕ್ಕೆ ಉತ್ತಮ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಾ ನಿನಾದ ಪರಿಣಾಮವು ಒಂದು ವಾರದ ಹಿಂದೆ ಪ್ರಾರಂಭವಾಗಿದ್ದು, ಇದರ ಹಿಂದೆಯೇ ಹಿಮಾಲಯ ಪ್ರದೇಶದಲ್ಲಿ ಹಠಾತ್ತನೆ ಹವಾಮಾನ ಬದಲಾವಣೆ ಉಂಟಾಗಿದೆ. ವರ್ಷಾಂತ್ಯದಲ್ಲಿ ಉಂಟಾದ ಹಠಾತ್ ಹಿಮಪಾತವು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳನ್ನು ಹಿಮದಲ್ಲಿ ಮುಳುಗಿಸಿಬಿಟ್ಟಿದೆ.
ಕಳೆದ ವರ್ಷ ಲ್ ನಿನೋ, ಈ ವರ್ಷ ಲಾ ನಿನಾ!
ಲಾ ನಿನಾ ಎಂಬುದ ಸ್ಪಾನಿಷ್ ಶಬ್ದವಾಗಿದ್ದು, ಇದರರ್ಥ ಚಿಕ್ಕ ಹುಡುಗಿ ಎಂದು. ಆದರೆ, ಇಲ್ಲಿ ಈ ಹೆಸರುಗಳನ್ನು ಹವಾಮಾನಕ್ಕೆ ಸಂಬಂಧಿಸಿದಂತೆ ಇಡಲಾಗಿದೆ. ಇದನ್ನು ಎಲ್ ವಿಜೊ ಅಥವಾ ‘ಕೋಲ್ಡ್ ಈವೆಂಟ್’ ಎಂದೂ ಕರೆಯುತ್ತಾರೆ. ಫೆಸಿಫಿಕ್ ಮಹಾಸಾಗರವು ಸಾಮಾನ್ಯಕ್ಕಿಂತ ತಂಪಾಗಿರುವಾಗ ಅದನ್ನುಲಾ ನಿನಾಎಂದು ಕರೆಯಲಾಗುತ್ತದೆ.
ಕಳೆದ ವರ್ಷ ಎಲ್ ನಿನೋ ಪರಿಣಾಮದಿಂದಾಗಿ ಭಾರತದಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿ, ಜನಜೀವನ ಅಸ್ತವ್ಯಸ್ಥಗೊಂಡು ದೇಶ ಬಹಳಷ್ಟು ನಷ್ಟವನ್ನು ಅನುಭವಿಸುವಂತಾಗಿತ್ತು. ಕಳೆದ ವರ್ಷ ಮಳೆ ಕಡಿಮೆಯಾಗಲು ಕಾರಣವಾಗಿದ್ದ ಎಲ್ ನಿನೋ ಸದ್ಯ ದುರ್ಬಲಗೊಳ್ಳುತ್ತಿದ್ದು, ಲಾ ನಿನಾ ಆಗಮಿಸುತ್ತಿದೆ.
ನೈನಿತಾಲ್ನ ಆರ್ಯಭಟ ವಿಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ ನರೇಂದ್ರ ಅವರು “ಹವಾಮಾನ ಬದಲಾವಣೆ ಡಿಸೆಂಬರ್ನಲ್ಲಿಯೇ ಆರಂಭವಾಗಿದೆ. ದೇಶದಲ್ಲಿ ಲಾ ನಿನಾ ಪರಿಸ್ಥಿತಿಗಳಿಗೆ 60 ಪ್ರತಿಶತದಷ್ಟು ಅವಕಾಶವಿತ್ತು, ಅದು ಸಾಬೀತಾಗಿದೆ” ಎಂದು ಹೇಳಿದ್ದಾರೆ.
ಲಾ ನಿನಾದ ಪರಿಣಾಮವು ಮೂರು ತಿಂಗಳವರೆಗೆ ಇರುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಬೀರೇಂದ್ರ ಸಿಂಗ್ ಹೇಳಿದ್ದಾರೆ. “ಕಳೆದ ಕೆಲವು ವರ್ಷಗಳಲ್ಲಿ, ಕಡಿಮೆ ಹಿಮಪಾತವಾಗಿತ್ತು. ಆದರೆ, ಈ ಬಾರಿ ಲಾ ನಿನಾ ಪ್ರಭಾವದಿಂದ ಮೂರು ತಿಂಗಳವರೆಗೆ ಇರಲಿದೆ. ಹಾಗೆಯೇ, ಈ ಬಾರಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ” ಎಂದು ಅವರು ಸೇರಿಸಿದರು. ಜೊತೆಗೆ ಲಾ ನಿನಾದ ಪ್ರಭಾವವು ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲಕರವಾಗಿರಲಿದೆ. ಹಿಮದ ನಂತರ ಪರ್ವತಗಳಲ್ಲಿ ಚೆನ್ನಾಗಿ ಹಣ್ಣುಗಳು, ತರಕಾರಿಗಳು ಮತ್ತು ಇತರ ಬೆಳೆಗಳ ಉತ್ಪಾದನೆಯನ್ನು ಹೆಚ್ಚಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಹವಾಮಾನ ಕೇಂದ್ರದ ಪ್ರಕಾರ, ಲಾ ನಿನಾದ ಪರಿಣಾಮವು ಮಾನ್ಸೂನ್ ಸಮಯದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ದೇಶದಲ್ಲಿ ಅದರಲ್ಲೂ ಉತ್ತರಾಖಂಡದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವೂ ಹೆಚ್ಚಿರುತ್ತದೆ ಮತ್ತು ಜನರು ದೀರ್ಘಕಾಲದವರೆಗೆ ಶೀತದ ಹವಮಾನನ್ನು ಎದುರಿಸಬೇಕಾಗುತ್ತದೆ.
ಫೆಬ್ರವರಿ 2025ರ ನಂತರ ಲಾ ನಿನಾದ ತೀವ್ರತೆ ಹೆಚ್ಚಳ
ಫೆಬ್ರವರಿ 2025 ರ ವೇಳೆಗೆ ಲಾ ನಿನಾದ ತೀವ್ರತೆಯು ಶೇಕಡಾ 60 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಲಾ ನಿನಾ ಮಧ್ಯ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದಲ್ಲಿ ಭಾರಿ ಇಳಿಕೆಯನ್ನು ಸೂಚಿಸುತ್ತದೆ. ಇದು ಮುಖ್ಯವಾಗಿ ಮಾನ್ಸೂನ್ ಸಮಯದಲ್ಲಿ ತೀವ್ರವಾದ ಮತ್ತು ದೀರ್ಘಕಾಲದ ಮಳೆಗಾಲಕ್ಕೆ ಕಾರಣವಾಗಲಿದ್ದು, ಉತ್ತರ ಭಾರತದಲ್ಲಿ ಸಾಮಾನ್ಯ ಚಳಿಗಾಲಕ್ಕಿಂತ ತಂಪಾಗಿರುತ್ತದೆಯಂತೆ.












