Last Updated:
Priyanka Gandhi: ಮದ್ರಾಸ್ ಐಐಟಿ ಮುಖ್ಯಸ್ಥ, ಪದ್ಮಶ್ರೀ ಪ್ರೊ. ವಿ ಕಾಮಕೋಟಿಯವರನ್ನು ‘ಗೋಮೂತ್ರ ತಜ್ಞ’ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪ್ರಿಯಾಂಕಾ ಗಾಂಧಿಯವರಿಗೆ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 215ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಕ್ಲಾಸ್ ತೆಗೆದುಕೊಂಡಿದ್ದಾರಂತೆ!
ದೆಹಲಿ: ಮದ್ರಾಸ್ ಐಐಟಿ ಮುಖ್ಯಸ್ಥ (IIT Madras chief), ಪದ್ಮಶ್ರೀ ಪುರಸ್ಕೃತ (Padmashree) ಪ್ರೊ. ವಿ ಕಾಮಕೋಟಿಯವರ (Prof. V Kamakoti) ಬಗ್ಗೆ ‘ಗೋಮೂತ್ರ ತಜ್ಞ’ ಅಂತ ಟೀಕಿಸಿದ್ದ ಕಾಂಗ್ರೆಸ್ ಸಂಸದೆ (Congress MP) ಪ್ರಿಯಾಂಕಾ ಗಾಂಧಿ (Priyanka Gandhi) ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರ (BJP Leaders)ಜೊತೆ ಸಾರ್ವಜನಿಕರು ಸೋಶಿಯಲ್ ಮೀಡಿಯಾಗಳಲ್ಲಿ ಹಿಗ್ಗಾಮುಗ್ಗ ಜಾಡಿಸುತ್ತಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿಯವರಿಗೆ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 215ಕ್ಕೂ ಹೆಚ್ಚು ಶಿಕ್ಷಣ ತಜ್ಞರು (academicians) ಕ್ಲಾಸ್ ತೆಗೆದುಕೊಂಡಿದ್ದಾರಂತೆ!
ಜುಲೈ 28ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ ಪ್ರೊ. ವಿ. ಕಾಮಕೋಟಿಯವರ ವಿರುದ್ಧ ಲಘುವಾಗಿ ಮಾತನಾಡಿದ್ದರು. ತಮ್ಮ ಭಾಷಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್ಟಿಎ) ಸುಧಾರಿಸಲು ಸರ್ಕಾರ ಹೊಸದಾಗಿ ರಚಿಸಿರುವ ಉನ್ನತಾಧಿಕಾರದ ಕಾರ್ಯಪಡೆಯನ್ನು ಟೀಕಿಸಿದ್ರು. “ಈ ಸಮಿತಿಯಲ್ಲಿ ಗೋಮೂತ್ರ ತಜ್ಞರೂ ಇದ್ದಾರೆ. ಅಂತಹ ಜನರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಏನು ಗೊತ್ತು?” ಎಂದು ಅವರು ಪ್ರಶ್ನಿಸಿದ್ದರು.
ವಿ. ಕಾಮಕೋಟಿಯವರನ್ನು “ಗೋಮೂತ್ರ ತಜ್ಞ” ಎಂದು ಕರೆದ ಪ್ರಿಯಾಂಕಾ ಗಾಂಧಿಗೆ ಶಿಕ್ಷಣ ತಜ್ಞರು ಕ್ಲಾಸ್ ತೆಗೆದುಕೊಂಡಿದ್ದಾರೆ. 215ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಸಹಿ ಮಾಡಿದ್ದು, ಸುದೀರ್ಘ ಮುಕ್ತ ಪತ್ರವೊಂದನ್ನು ಪ್ರಿಯಾಂಕಾ ಗಾಂಧಿಗೆ ಕಳಿಸಿದ್ದಾರೆ. ಒಬ್ಬ ವಿದ್ವಾಂಸನನ್ನು ಅವರ ಅಭಿಪ್ರಾಯಗಳ ಸಾರದೊಂದಿಗೆ ನೋಡುವ ಬದಲು ಒಂದು ಹಣೆಪಟ್ಟಿ ಕಟ್ಟಿ ಅವರನ್ನು ತಳ್ಳಿಹಾಕುವುದು, ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನು ಬೆಳೆಸಿಕೊಳ್ಳಬೇಕಾದ ವೈಜ್ಞಾನಿಕ ಮನೋಭಾವವನ್ನೇ ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಅಂತ ತಜ್ಞರು ತಮ್ಮ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
215 ಶಿಕ್ಷಣ ತಜ್ಞರು ಸಹಿ ಮಾಡಿರುವ ಪತ್ರದಲ್ಲಿ ಪ್ರಿಯಾಂಕಾ ಗಾಂಧಿಗೆ ಹೀಗೆ ಬರೆಯಲಾಗಿದೆ… ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರನ್ನು ‘ಗೋಮೂತ್ರ ತಜ್ಞ’ ಎಂದು ಬಣ್ಣಿಸಿರುವ ನಿಮ್ಮ ವರದಿಯಿಂದ ನಮ್ಮ ನಿರಾಶೆಯನ್ನು ವ್ಯಕ್ತಪಡಿಸಲು ನಾವು ಬರೆಯುತ್ತಿದ್ದೇವೆ. ವ್ಯಂಗ್ಯವಾಡುವ ಉದ್ದೇಶವಿರಲಿ ಅಥವಾ ರಾಜಕೀಯ ವಾಕ್ಚಾತುರ್ಯವಾಗಿರಲಿ, ಅಂತಹ ಗುಣಲಕ್ಷಣವು ಒಬ್ಬ ವ್ಯಕ್ತಿಯ ಆಚೆಗಿನ ಕಳವಳಗಳನ್ನು ಹುಟ್ಟುಹಾಕುತ್ತದೆ” ಅಂತ ಬರೆಯಲಾಗಿದೆ.
ಪತ್ರದಲ್ಲಿ ಪ್ರೊಫೆಸರ್ ಕಾಮಕೋಟಿ ಅವರನ್ನು ದೇಶದ ಉನ್ನತ ತಂತ್ರಜ್ಞಾನ ಮೆದುಳುಗಳಲ್ಲಿ ಒಬ್ಬರು ಎಂದು ಉಲ್ಲೇಖಿಸಿದ್ದಾರೆ. ಒಂದು ಕಾಲದಲ್ಲಿ ನಂಬಲಾಗದು ಎಂದು ಪರಿಗಣಿಸಲಾಗಿದ್ದ ಅನೇಕ ವಿಚಾರಗಳು ಅಂತಿಮವಾಗಿ ವೈಜ್ಞಾನಿಕವಾಗಿ ದೃಢೀಕರಣವನ್ನು ಕಂಡುಕೊಂಡವು, ಆದರೆ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಅನೇಕ ನಂಬಿಕೆಗಳನ್ನು ನಂತರ ತಿರಸ್ಕರಿಸಲಾಯಿತು ಎಂದು ಇತಿಹಾಸವು ನಮಗೆ ನೆನಪಿಸುತ್ತದೆ ಎಂದು ಪತ್ರದಲ್ಲಿ ಸೇರಿಸಲಾಗಿದೆ.
ನಮ್ಮ ವಿಜ್ಞಾನಿಗಳು, ವಿದ್ವಾಂಸರು ಮತ್ತು ಶಿಕ್ಷಕರು ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅರ್ಹರು, ಅವರು ವಜಾಗೊಳಿಸುವ ಹಣೆಪಟ್ಟಿಗಳಿಗೆ ಸೀಮಿತರಾಗುವ ಭಯವಿಲ್ಲದೆ ಭಾಗವಹಿಸಬಹುದು. ಅವರ ವಾದಗಳನ್ನು ಟೀಕಿಸಿ, ಅವರ ಪುರಾವೆಗಳನ್ನು ಪ್ರಶ್ನಿಸಿ, ಉನ್ನತ ಗುಣಮಟ್ಟದ ಪುರಾವೆಗಳನ್ನು ಬೇಡಿಕೊಳ್ಳಿ, ಆದರೆ ಪಾಂಡಿತ್ಯವನ್ನೇ ಕುಗ್ಗಿಸಬೇಡಿ” ಎಂದು ಪತ್ರದಲ್ಲಿ ಸೇರಿಸಲಾಗಿದೆ. ಇಂತಹ ಹೇಳಿಕೆಗಳು ಶೈಕ್ಷಣಿಕ ಸಮುದಾಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಿಕ್ಷಣ ತಜ್ಞರು, ವಿದ್ವಾಂಸರು ತಿರಸ್ಕಾರದ ಹಣೆಪಟ್ಟಿಗಳಿಗೆ ಒಳಗಾಗದೆ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಲು ಮುಕ್ತರಾಗಿರಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಮಾಜಿ ಮಹಾನಿರ್ದೇಶಕ ಡಾ. ಸಿಎಸ್ಆರ್ ಪ್ರಭು; ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಅಪ್ಪಾ ರಾವ್ ಪೊಡಿಲ್ಲೆ; ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಡಾ. ಶಾಂತಿಶ್ರೀ ಧುಲಿಪುಡಿ ಪಂಡಿತ್; ಮುಂಬೈ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್ಡಿ ಕುಲಕರ್ಣಿ; ಐಐಟಿ ಧಾರವಾಡದ ನಿರ್ದೇಶಕ ಡಾ. ವಿಆರ್ ದೇಸಾಯಿ; ಐಐಎಂ ಕಲ್ಕತ್ತಾದ ನಿರ್ದೇಶಕ ಡಾ. ಅಲೋಕ್ ಕೆ. ರೈ ಸೇರಿದಂತೆ ಒಟ್ಟು 215ಕ್ಕೂ ಹೆಚ್ಚು ತಜ್ಞರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.














