Last Updated:
ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ಮಾನವ್ ಸುತಾರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಮಿಂಚಿದ ಯುವ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡಿ 7 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮಾನವ್ ಸುತಾರ್ (Manav Suthar) ಚೊಚ್ಚಲ ಪಂದ್ಯದಲ್ಲೇ ಹಲವು ದಾಖಲೆಗಳಿಗೆ ಪಾತ್ರರಾಗಿದ್ದರು. ಎರಡೂ ಇನ್ನಿಂಗ್ಸ್ ಸೇರಿ ಒಟ್ಟು ಏಳು ವಿಕೆಟ್ಗಳನ್ನು ಪಡೆಯುವ ಮೂಲಕ ಅಫ್ಘಾನ್ ಪತನಕ್ಕೆ ಕಾರಣರಾದ ಸುತಾರ್ ಅವರಿಗೆ ಬಂಪರ್ ಆಫರ್ ಬಂದಿದೆ. ಯುವ ಸ್ಪಿನ್ನರ್ಗೆ ಕೌಂಟಿ ಕ್ರಿಕೆಟ್ನಲ್ಲಿ (County Cricket) ಆಡಲು ಆಹ್ವಾನ ಬಂದಿದೆ. ಪ್ರಸಿದ್ಧ ವಾರ್ವಿಕ್ಷೈರ್ ತಂಡ ಅವರೊಂದಿಗೆ ಎರಡು ಪಂದ್ಯಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಅವಧಿಯು ಅವರ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಅವಕಾಶವಾಗಿದೆ. ವಿಶೇಷವಾಗಿ ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳು ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಆಡಲು ಅಮೂಲ್ಯವಾದ ಅನುಭವವನ್ನು ಒದಗಿಸುತ್ತವೆ.
ವಾರ್ವಿಕ್ಷೈರ್ ಆಡಳಿತ ಮಂಡಳಿಯು ಸುತಾರ್ ಜೊತೆಗಿನ ಒಪ್ಪಂದದ ವಿವರಗಳನ್ನು ಹೇಳಿಕೆಯಲ್ಲಿ ಪ್ರಕಟಿಸಿದೆ. “ಮಾನವ್ ಸುತಾರ್ ನಮ್ಮ ಬೌಲಿಂಗ್ ಘಟಕಕ್ಕೆ ವೈವಿಧ್ಯತೆಯನ್ನು ತರುತ್ತಾರೆ. ನಾವು ಕೌಂಟಿ ಚಾಂಪಿಯನ್ಶಿಪ್ ಗೆಲ್ಲುವ ಗುರಿಯನ್ನು ಹೊಂದಿದ್ದೇವೆ. ಈ ಸಮಯದಲ್ಲಿ ಸುತಾರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಕ್ಕೆ ನಮಗೆ ಸಂತೋಷವಾಗಿದೆ” ಎಂದು ಕ್ಲಬ್ ಹೇಳಿದೆ. ಇತ್ತ ಸುತಾರ್ ಕೂಡ ಕೌಂಟಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುವ ದೃಢಸಂಕಲ್ಪವನ್ನು ಸುತಾರ್ ವ್ಯಕ್ತಪಡಿಸಿದರು.
ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ಮಾನವ್ ಸುತಾರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಮಿಂಚಿದ ಯುವ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ಗಳನ್ನು ಕಬಳಿಸಿ ದಾಖಲೆ ಬರೆದಿದ್ದರು. ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ಗಳನ್ನು ಪಡೆದ ಹತ್ತನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಮಾನವ್ ಸುತಾರ್ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಭಾರತ ಈ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 300 ರನ್ಗಳ ಬೃಹತ್ ಗೆಲುವು ಸಾಧಿಸಿತು.
ಮಾನವ್ ಸುತಾರ್ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ 129 ವಿಕೆಟ್ಗಳನ್ನು ಕಬಳಿಸಿದ್ದಾರೆ, ಅವರ ಅತ್ಯುತ್ತಮ ಬೌಲಿಂಗ್ 62ಕ್ಕೆ11 ವಿಕೆಟ್. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರ ಸಾಮರ್ಥ್ಯವು ಅವರ ಆಯ್ಕೆಗೆ ಮತ್ತಷ್ಟು ಬಲ ನೀಡುತ್ತದೆ. ಸುತಾರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 950ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ.
ಮಾನವ್ ಸುತಾರ್ ಪಾಕಿಸ್ತಾನ ಗಡಿಯ ಬಳಿ ಇರುವ ರಾಜಸ್ಥಾನದ ಗಂಗಾನಗರ ಎಂಬ ಸಣ್ಣ ಪಟ್ಟಣದವರು. ಅವರ ತಂದೆ ಜಗದೀಶ್ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ. ಅವರು ತಮ್ಮ ಮಗನ ಕ್ರಿಕೆಟ್ನಲ್ಲಿ ಆಸಕ್ತಿಯನ್ನು ಕಂಡು ಚಿಕ್ಕಂದಿನಿಂದಲೂ ಪ್ರೋತ್ಸಾಹಿಸಿಕೊಂಡು ಬಂದಿದ್ದರು. ಸುತಾರ್ ಸ್ಪಿನ್ ಬೌಲಿಂಗ್ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ಪ್ರತಿಭೆಯನ್ನು ಪ್ರದರ್ಶಿಸಿ ಐಪಿಎಲ್ನಲ್ಲೂ ಸತತ ಮೂರು ಆವೃತ್ತಿಗಳಿಂದ ಗುಜರಾತ್ ಟೈಟನ್ಸ್ ಪರ ಆಡುತ್ತಿದ್ದಾರೆ.
2022-23ರ ರಣಜಿ ಟ್ರೋಫಿಯಲ್ಲಿ ಕೇವಲ ಆರು ಪಂದ್ಯಗಳಲ್ಲಿ 39 ವಿಕೆಟ್ಗಳನ್ನು ಪಡೆಯುವ ಮೂಲಕ ಅವರು ಆಯ್ಕೆದಾರರ ಗಮನ ಸೆಳೆದಿದ್ದರು. ಎಮರ್ಜಿಂಗ್ ಏಷ್ಯಾ ಕಪ್ನಲ್ಲಿ ಐದು ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಕಬಳಿಸಿದರು ಮತ್ತು 2024ರ ದುಲೀಪ್ ಟ್ರೋಫಿಯಲ್ಲಿ ಭಾರತ ಸಿ ಪರ ಏಳು ವಿಕೆಟ್ಗಳನ್ನು ಕಬಳಿಸಿದರು. ಈ ಪ್ರದರ್ಶನವೇ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ನೀಡಿದೆ.













