Last Updated:
ಬೆಳ್ತಂಗಡಿ: ವಿಗ್ರೇಡ್ ಡಿಸೋಜಾ ಮನೆಗೆ ನುಗ್ಗಿದ 8 ಅಡಿ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕಿನ ನಾವೂರು ನಿವಾಸಿ ವಿಗ್ರೇಡ್ ಡಿಸೋಜಾ ಅವರ ಮನೆಗೆ ಅಪರೂಪದ ಅತಿಥಿಯೊಬ್ಬರು ಭಾನುವಾರದ ರಜಾದಿನದಂದು (Guest) ಭೇಟಿ ನೀಡಿದ್ದರು. ಬಂದವರು ಸೀದಾ ಮನೆಯ ಡೈನಿಂಗ್ ಟೇಬಲ್ ಪಕ್ಕದಲ್ಲೇ ನಿಂತು ಕಾದಿದ್ದಾರೆ. ಬಳಿಕ ಅವರನ್ನು ಸೇಫ್ ಆಗಿ ಅವರು ಬಂದ ಸ್ಥಳಕ್ಕೇ (King Cobra) ಕಳುಹಿಸಲಾಗಿದೆ.
ಹೌದು, ವಿಗ್ರೇಡ್ ಡಿಸೋಜಾ ಮನೆ ಮಂದಿಯನ್ನು ಆತಂಕಕ್ಕೀಡುಮಾಡಿದ ಈ ಅತಿಥಿ ದೊಡ್ಡ ಗಾತ್ರದ ಕಾಳಿಂಗ ಸರ್ಪವಾಗಿತ್ತು. ಏಕಾಏಕಿ ಇದು ಪ್ರತ್ಯಕ್ಷವಾಗಿ, ಮನೆಮಂದಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ್ ಅವರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್, ಡೈನಿಂಗ್ ಹಾಲ್ನಲ್ಲಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಗೋಣಿಚೀಲಕ್ಕೆ ತುಂಬಿದ್ದಾರೆ. ಬಳಿಕ ಸರ್ಪವನ್ನು ಸಮೀಪದ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಸಕಾಲದಲ್ಲಿ ಧಾವಿಸಿ ಬಂದು ರಕ್ಷಣೆ ಮಾಡಿದ ಸ್ನೇಕ್ ಅಶೋಕ್ ಅವರ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಮನೆಯವರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವುದೋ ಆಹಾರವನ್ನು ಬೆನ್ನಟ್ಟಿಕೊಂಡು ಈ ಕಾಳಿಂಗ ಸೀದಾ ಮನೆಯೊಳಗೆ ತಲುಪಿರುವ ಸಾಧ್ಯತೆಯಿದ್ದು, ಮಧ್ಯಾಹ್ನದ ಹೊತ್ತಾದ ಕಾರಣ ತಕ್ಷಣವೇ ಮನೆಯವರ ಕಣ್ಣಿಗೆ ಬಿದ್ದಿದೆ. ಇಲ್ಲದೇ ಹೋದಲ್ಲಿ ಮನೆಯೊಳಗೆ ನುಗ್ಗಿ ಇನ್ನೊಂದು ಅನಾಹುತಕ್ಕೂ ಈ ಹಾವು ಕಾರಣವಾಗುವ ಸಾಧ್ಯತೆಯಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ವಿಷಕಾರಿ ಹಾವುಗಳು, ಕೀಟಗಳು ಜನವಸತಿ ಪ್ರದೇಶಕ್ಕೆ ಆಗಮಿಸುವುದು ಸಾಮಾನ್ಯವಾಗಿ ಕಾಣುತ್ತೇವೆ. ಈ ರೀತಿ ಹಾವುಗಳು ಕಂಡುಬಂದರೇ ಕೂಡಲೇ ಉರಗ ರಕ್ಷಕರಿಗೆ ಕರೆ ಮಾಡಿ. ಹಾವುಗಳನ್ನು ಕೊಲ್ಲಲು ಹೋಗಬೇಡಿ. ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಉತ್ತಮ. ಸೆರೆ ಹಿಡಿದ ಹಾವುಗಳನ್ನು ಮಾರ್ಗಸೂಚಿಯಂತೆಯೇ ಸುರಕ್ಷಿತ ಪ್ರದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಉರಗ ತಜ್ಞ ಮಾಹಿತಿ ಹಂಚಿಕೊಂಡಿದ್ದಾರೆ.
Mangalore,Dakshina Kannada,Karnataka














