Last Updated:
ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಲೋಹಗಢ ಕೋಟೆಯ ಸಿಬ್ಬಂದಿಯೊಬ್ಬ ಕೇತನ್ ಭಾವಿ ಪತ್ನಿ ಸಿಯಾ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಸಾವು ಈಗ ಕೇವಲ ಅಪಘಾತವಲ್ಲ ಇದು ಕೊಲೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಇದು ಪಕ್ಕಾ ಪ್ಲಾನ್ (Planned Murder) ಮಾಡಿ ಮಾಡಿರುವ ಕೊಲೆ ಎನ್ನಲಾಗಿದ್ದು ತನಿಖೆ ನಡೆಯುತ್ತಿದೆ. ಕೇತನ್ ಭಾವಿ ಪತ್ನಿ ಸಿಯಾ (Siya) ಮತ್ತು ಆಕೆಯ ಪ್ರಿಯಕರ ಚೇತನ್ನನ್ನು (Chethan) ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಲೋಹಗಢ ಕೋಟೆಯಲ್ಲಿ ನಡೆದ ಘಟನೆಯಲ್ಲಿ ಹೊಸ ಮತ್ತು ಮುಖ್ಯ ಸಾಕ್ಷಿ ಬೆಳಕಿಗೆ ಬಂದಿದೆ.
ಕೇತನ್ ಸಾವಿನ ಕೇಸ್ನ ಈ ಸಾಕ್ಷಿ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ. ಜೂನ್ 18 ರಂದು ಲೋಹಗಢ ಕೋಟೆಯ ಬಳಿ ಕೇತನ್ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾಗ ಅಲ್ಲಿದ್ದ ಸಿಬ್ಬಂದಿ ಸಿಯಾ ಬಗ್ಗೆ ಕೆಲವು ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.
ಕೇತನ್ ಕಂದಕಕ್ಕೆ ಬಿದ್ದಾಗ ಆ ಸಮಯದಲ್ಲಿ ಅವರ ಭಾವಿ ಪತ್ನಿ ಸಿಯಾ ಗೋಯಲ್ ಜೊತೆಗಿದ್ದರು. 26 ವರ್ಷದ ಕೇತನ್ ಮತ್ತು 20 ವರ್ಷದ ಸಿಯಾ ಫೋಟೋ ತೆಗೆಯುತ್ತಿದ್ದಾಗ ಅಪಘಾತ ಸಂಭವಿಸಿತು ಎಂದು ಸಿಯಾ ಪೊಲೀಸರಿಗೆ ಹೇಳಿದ್ದರು. ಆದರೆ ಈಗ ಈ ಕಥೆ ಬೇರೆಯಾಗಿದೆ. ಕೋಟೆಯ ಸಿಬ್ಬಂದಿ ರಾಹುಲ್ ಪೊಲೀಸರಿಗೆ ನೀಡಿದ ಹೇಳಿಕೆಯು ತನಿಖೆಯಲ್ಲಿ ತಿರುವು ಕೊಟ್ಟಿದೆ. ಕೇತನ್ ಬಿದ್ದ ನಂತರ ಸಿಯಾ ಕಿರುಚಾಡಿದ್ದನ್ನು ಕೇಳಿ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಾಹುಲ್ ಮತ್ತು ಇತರರು ಕಂದಕದ ಕೆಳಗೆ ಹೋಗಿ ನೋಡಿದಾಗ ಕೇತನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಗಲೇ ಕೇತನ್ ಸತ್ತಿದ್ದಾರೆ ಎಂದು ರಾಹುಲ್ಗೆ ತಕ್ಷಣ ಅರಿವಾದರೂ,ಸಿಯಾ ಆಘಾತಗೊಳ್ಳಬಹುದು ಎಂದು ಭಯದಿಂದ ಅವರು ಸಿಯಾಗೆ ‘ಕೇತನ್ ಜೀವಂತವಾಗಿದ್ದಾರೆ’ ಎಂದು ಹೇಳಿದ್ದರಂತೆ.
ಆದರೆ ಆ ವೇಳೆ ಸಿಯಾ ಪ್ರತಿಕ್ರಿಯೆ ತುಂಬಾ ವಿಚಿತ್ರವಾಗಿತ್ತು ಎಂದು ರಾಹುಲ್ ಹೇಳಿದ್ದಾರೆ. ಸಾಮಾನ್ಯವಾಗಿ ತಾವು ಇಷ್ಟ ಪಟ್ಟವರು ಜೀವಂತವಾಗಿದ್ದಾರೆ ಎಂದು ಕೇಳಿದರೆ ಖುಷಿಯಾಗುತ್ತಾರೆ ಅಥವಾ ಸಮಾಧಾನವಾಗುತ್ತಾರೆ. ಆದರೆ ಸಿಯಾ ಮುಖದಲ್ಲಿ ಭಯ ಮತ್ತು ಗಾಬರಿ ಹೆಚ್ಚಾಯಿತು. ನಿರಾಳತೆಯ ಬದಲು ಆತಂಕ ಕಾಣಿಸಿತು. ಕಣ್ಣಲ್ಲಿ ಕೂಡ ನೀರು ಬರಲಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಈ ಹೇಳಿಕೆಯು ಪೊಲೀಸರ ಅನುಮಾನವನ್ನು ಇನ್ನಷ್ಟು ಬಲಪಡಿಸಿದೆ. ಇದು ಅಪಘಾತವಲ್ಲ, ಟ್ರೆಕ್ಕಿಂಗ್ ಅಪಘಾತ ಎಂದು ಮರೆಮಾಚುವ ಪ್ಲಾನ್ ಮಾಡಿದ ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೇತನ್ ಕುಟುಂಬ ಸಿಯಾ ನಡವಳಿಕೆಯನ್ನು ಪ್ರಶ್ನಿಸಿದೆ. ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ಅವರು ಮಾಧ್ಯಮಗಳಿಗೆ ಹೇಳಿದಂತೆ, ಮಗ ಸತ್ತ ನಂತರ ಸಿಯಾಳಲ್ಲಿ ದುಃಖ ಕಾಣಲಿಲ್ಲ. ಶವವನ್ನು ಮನೆಗೆ ತಂದಾಗಲೂ ಅವಳು ಶಾಂತವಾಗಿದ್ದಳು ಎಂದು ಆರೋಪಿಸಿದ್ದಾರೆ.
ಪೊಲೀಸ್ ತನಿಖೆ ಪ್ರಕಾರ ಇದು ಒಂದು ದಿನದ ಸಂಚು ಅಲ್ಲ. ಹಲವು ತಿಂಗಳುಗಳಿಂದ ಯೋಜನೆ ರೂಪುಗೊಂಡಿತ್ತು. ಸಿಯಾ ಕೇತನ್ನ್ನು ಲೋಹಗಢ ಕೋಟೆಗೆ ಹಲವು ಬಾರಿ ಕರೆದೊಯ್ದಿದ್ದಳು. ಕೊಲ್ಲುವ ಪ್ರಯತ್ನ ಕನಿಷ್ಠ ಮೂರು ಬಾರಿ ವಿಫಲವಾಗಿತ್ತು. ಒಮ್ಮೆ ಕೇತನ್ ಪೊದೆ ಹಿಡಿದು ಬದುಕುಳಿದಿದ್ದ ಎಂದು ವರದಿಯಾಗಿದೆ. ಪ್ರಮುಖ ಸುಳಿವು ಕೋಟೆಯ ಸಿಸಿಟಿವಿ ದೃಶ್ಯಗಳಿಂದ ಬಂದಿದೆ. ಕೇತನ್ ಮತ್ತು ಸಿಯಾ ಹಿಂದೆ ಒಬ್ಬ ವ್ಯಕ್ತಿ ಹೂಡಿ ಧರಿಸಿ ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಬಿಸಿಲಿನಲ್ಲಿ ಕೂಡ ಹೂಡಿ ಧರಿಸಿದ್ದ ಅವನನ್ನು ಸಿಯಾ ಪ್ರೇಮಿ ಚೇತನ್ ಚೌಧರಿ ಎಂದು ಗುರುತಿಸಲಾಗಿದೆ.
ತನಿಖೆಯಲ್ಲಿ ಸಿಯಾ ಮತ್ತು ಚೇತನ್ ನಡುವೆ ಹಲವು ತಿಂಗಳುಗಳಿಂದ ಪ್ರಣಯ ಸಂಬಂಧವಿದ್ದ ಬಗ್ಗೆ ಎಂದು ತಿಳಿದುಬಂದಿದೆ. ನವೆಂಬರ್ನಲ್ಲಿ ಕೇತನ್ ಮತ್ತು ಸಿಯಾ ವಿವಾಹಕ್ಕೆ ಸಿದ್ಧತೆ ನಡೆಯುತ್ತಿತ್ತು. ಸಿಯಾ ಮದುವೆಯ ಬಗ್ಗೆ ಅಸಮಾಧಾನಗೊಂಡಿದ್ದಳು ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರೇಮಿಯೊಂದಿಗೆ ಸೇರಿ ಕೇತನ್ನ್ನು ಕೊಲ್ಲುವ ಸಂಚು ರೂಪಿಸಿದ್ದಾಳೆ ಎನ್ನಲಾಗುತ್ತಿದೆ. ಪ್ರಸ್ತುತ ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರನ್ನೂ ಬಂಧಿಸಿದ್ದಾರೆ. ಪುಣೆ ಗ್ರಾಮೀಣ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದೆ. ಹೆಚ್ಚಿನ ಸುಳಿವುಗಳು ಬೆಳಕಿಗೆ ಬರಲಿವೆ.
Pune,Maharashtra













