Last Updated:
ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 5 ರಿಂದ 11 ರವರೆಗೆ ಅತಿ ಭಾರಿ ಮಳೆ, ಗುಡುಗು ಮಿಂಚು, ಬಿರುಗಾಳಿ, ದಿಢೀರ್ ಪ್ರವಾಹ ಎಚ್ಚರಿಕೆ
ಬೆಂಗಳೂರು: ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಈಗಾಗಲೇ ಕರುನಾಡು ಬೆಂಕಿಯ ನಿಗಿ ನಿಗಿ ಕೆಂಡ ಹಾದ ಬಾಣಲೆಯಲ್ಲಿ ಬೇಯ್ದ ಹಾಗಿನ ಬಿಸಿಲನ್ನು (Summer) ನೋಡಿದೆ. ಇನ್ನು ಮುಂಗಾರು ತಡ, ಮಳೆ ಕಮ್ಮಿ ಅನ್ನೋ ವರದಿಗಳೂ ಕೂಡ ರೈತರ ದಿಗಿಲು ಹೆಚ್ಚು ಮಾಡುತ್ತಿವೆ. ಇಷ್ಟರ ನಡುವೆ ಕರ್ನಾಟಕದ (Karnataka) ಮೂರೂ ಪ್ರಮುಖ ಹವಾಮಾನ ವಿಭಾಗಗಳಲ್ಲಿ ಜೂನ್ 5 ರಿಂದ ಜೂನ್ 11 ರವರೆಗೆ ಮುಂದಿನ ಏಳು ದಿನಗಳ (One Week) ಕಾಲ ತೀವ್ರ ಸ್ವರೂಪದ ಮಳೆ, ಗುಡುಗು-ಮಿಂಚು ಮತ್ತು ಬಿರುಗಾಳಿಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕೃತ ಎಚ್ಚರಿಕೆ ನೀಡಿದೆ. ಮುಂದಿನ 2-3 ದಿನಗಳಲ್ಲಿ ನೈರುತ್ಯ ಮುಂಗಾರು (South-Western Monsoon) ರಾಜ್ಯದ ಇನ್ನಷ್ಟು ಭಾಗಗಳಿಗೆ ಪ್ರವೇಶಿಸಲು ವಾತಾವರಣ ಸಂಪೂರ್ಣ ಅನುಕೂಲಕರವಾಗಿದ್ದು, ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ರಭಸವಾಗಿ ಅಪ್ಪಳಿಸಲಿದೆ ಎಂಬ ಭೀತಿ ಮನೆ ಮಾಡಿದೆ.
ಕರಾವಳಿ ಕರ್ನಾಟಕದಲ್ಲಿ ಅತ್ಯಂತ ತೀವ್ರವಾದ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಜೂನ್ 5 ರಿಂದ ಜೂನ್ 8 ರವರೆಗೆ ಸತತ ನಾಲ್ಕು ದಿನಗಳ ಕಾಲ ಅತಿ ಭಾರಿ ಮಳೆ (Very Heavy Rain) ಗುಡುಗು, ಮಿಂಚು ಮತ್ತು ಬಿರುಗಾಳಿಯ ಜೊತೆ ಅಪ್ಪಳಿಸಲಿದೆ. ಜೂನ್ 9 ರಿಂದ 11 ರವರೆಗೆ ಬಿರುಗಾಳಿ ತಗ್ಗಿದರೂ ಅತಿ ಭಾರಿ ಮಳೆ ಮಾತ್ರ ಮುಂದುವರೆಯಲಿದೆ. ಕರಾವಳಿ ಭಾಗದಲ್ಲಿ ಜೂನ್ 5 ರಿಂದ 10 ರವರೆಗೆ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದ್ದು, ಕೆಲವು ಕಡೆ ದಿಢೀರ್ ಪ್ರವಾಹ (Flash Floods) ಉಂಟಾಗಬಹುದು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲಬಹುದು ಎಂದು ಇಲಾಖೆ ಎಚ್ಚರಿಸಿದೆ.
ಹವಾಮಾನ ಇಲಾಖೆ ಕರಾವಳಿ ಮತ್ತು ಮಲೆನಾಡು ನಿವಾಸಿಗಳನ್ನು ಅನಗತ್ಯ ಪ್ರಯಾಣ ತಪ್ಪಿಸಿ, ತಗ್ಗು ಪ್ರದೇಶಗಳಿಂದ ದೂರ ಇರುವಂತೆ ಮತ್ತು ಆಪತ್ತಿನ ಸಮಯದಲ್ಲಿ ಜಿಲ್ಲಾ ಆಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಒತ್ತಾಯಿಸಿದೆ. ಮುನ್ಸೂಚನೆಯ ದಿನಾಂಕ ದೂರವಾದಂತೆ ಅದರ ನಿಖರತೆ ಕೊಂಚ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ, ನಿರಂತರವಾಗಿ ಹವಾಮಾನ ಇಲಾಖೆಯ ಅಧಿಕೃತ ಮಾಹಿತಿ ಗಮನಿಸುತ್ತಿರಿ.
ಜಿಲ್ಲಾವಾರು ಪಟ್ಟಿ ಇಲ್ಲಿದೆ ಗಮನಿಸಿ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಗುಡುಗು-ಮಿಂಚು, ಬಿರುಗಾಳಿ ಮತ್ತು ದಿಢೀರ್ ಪ್ರವಾಹ ಸಾಧ್ಯತೆ ಇದೆ; ಜೂನ್ 5 ರಿಂದ 8 ರವರೆಗೆ ಅತ್ಯಂತ ತೀವ್ರವಾಗಿ ಮತ್ತು ನಂತರವೂ ಮುಂದುವರೆಯಲಿದೆ. ಮಲೆನಾಡು ಪ್ರದೇಶದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯೊಂದಿಗೆ ಕೆಲವು ಕಡೆ ಭಾರಿ ಮಳೆಯ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಜೂನ್ 5 ರಂದು ಅತಿ ಭಾರಿ ಮಳೆಯೊಂದಿಗೆ ಗುಡುಗು-ಮಿಂಚು ಮತ್ತು ಬಿರುಗಾಳಿ ಉಂಟಾಗಬಹುದು, ನಂತರ ಜೂನ್ 9-11 ರಂದು ಭಾರಿ ಮಳೆಯ ಸಾಧ್ಯತೆ ಇದೆ (ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು, ಬೆಳಗಾವಿ, ಧಾರವಾಡ, ಗದಗ ಸೇರಿದಂತೆ). ದಕ್ಷಿಣ ಒಳನಾಡಿನಲ್ಲಿ ಇಡೀ ವಾರ ಭಾರಿ ಮಳೆ ಎಡೆಬಿಡದೆ ಸುರಿಯುವ ಸಾಧ್ಯತೆಯಿದ್ದು, ಬೆಂಗಳೂರು, ಮೈಸೂರು, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಜೂನ್ 6-8 ರ ನಡುವೆ ಬಲವಾದ ಗಾಳಿಯೊಂದಿಗೆ ಮಳೆಯ ಅಬ್ಬರ ತೀವ್ರವಾಗಲಿದೆ.
Bangalore [Bangalore],Bangalore,Karnataka













