Last Updated:
ಏರ್ ಇಂಡಿಯಾ ಜೂನ್ 2026ರಿಂದ ಆಗಸ್ಟ್ 2026ರವರೆಗೆ ಅನೇಕ ಅಂತರಾಷ್ಟ್ರೀಯ ಹಾರಾಟ ಕಡಿತ, ದಿಲ್ಲಿ–ಚಿಕಾಗೊ, ಚೆನ್ನೈ–ಸಿಂಗಾಪುರ, ದಿಲ್ಲಿ–ಶಾಂಘೈ, ದಿಲ್ಲಿ–ಮಾಲೆ ಮುಂತಾದ ಸೇವೆಗಳು ತಾತ್ಕಾಲಿಕ ಸ್ಥಗಿತ
ಬೆಂಗಳೂರು: ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಇಂಡಿಯಾ, ಜೂನ್ನಿಂದ ಆಗಸ್ಟ್ 2026ರ ನಡುವೆ ತನ್ನ ಆಯ್ದ ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಕಡಿತ (Service Cancel) ಮಾಡಿರುವುದಾಗಿ ಇಂದು ಘೋಷಿಸಿದೆ. ಕೆಲವು ಭಾಗಗಳಲ್ಲಿ ಆಕಾಶಮಾರ್ಗ ನಿರ್ಬಂಧ (Restriction) ಮುಂದುವರಿದಿರುವುದು ಮತ್ತು ಜೆಟ್ ಇಂಧನ ಬೆಲೆ ದಾಖಲೆ ಮಟ್ಟಕ್ಕೆ ಏರಿರುವುದು, ಈ ಎರಡು ಅಂಶಗಳು ನಿರ್ದಿಷ್ಟ ಸೇವೆಗಳ ವ್ಯಾಪಾರಿ ಸಾಧ್ಯತೆಯ ಮೇಲೆ ತೀವ್ರ ಪ್ರಭಾವ ಬೀರಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಉತ್ತರ ಅಮೆರಿಕಾ ಮಾರ್ಗಗಳ ವಿಷಯಕ್ಕೆ ಬಂದರೆ, ದಿಲ್ಲಿ–ಚಿಕಾಗೊ ಸೇವೆಯನ್ನು ಸಂಪೂರ್ಣವಾಗಿ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ದಿಲ್ಲಿ–ನ್ಯೂಯಾರ್ಕ್ ಮತ್ತು ಮುಂಬೈ–ನ್ಯೂಯಾರ್ಕ್ (JFK) ಸೇವೆಗಳನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ದಿಲ್ಲಿ–ಸ್ಯಾನ್ ಫ್ರಾನ್ಸಿಸ್ಕೊ ಮಾರ್ಗದಲ್ಲಿ ಆಗಸ್ಟ್ ಅಂತ್ಯದ ವರೆಗೆ ವಾರಕ್ಕೆ 10ರಿಂದ 7 ಹಾರಾಟಕ್ಕೆ ಇಳಿಸಲಾಗಿದ್ದರೆ, ದಿಲ್ಲಿ–ಟೊರೊಂಟೊ ಸೇವೆ ಜುಲೈ ವರೆಗೆ ವಾರಕ್ಕೆ 10ರಿಂದ ಕೇವಲ 5ಕ್ಕೆ ಕುಸಿದಿದ್ದು, ಆಗಸ್ಟ್ನಿಂದ ಮಾತ್ರ ದಿನನಿತ್ಯ ಕಾರ್ಯಾಚರಣೆಗೆ ಮರಳಲಿದೆ. ದಿಲ್ಲಿ–ವ್ಯಾಂಕೂವರ್ ಕೂಡ ವಾರಕ್ಕೆ 7ರಿಂದ 5ಕ್ಕೆ ಇಳಿಯಲಿದೆ. ಆದರೆ, ಮುಂಬೈ–ನ್ಯೂಯಾರ್ಕ್ ಮಾರ್ಗ ವಾರಕ್ಕೆ 3ರಿಂದ 7ಕ್ಕೆ ಏರಿಕೆ ಕಾಣಲಿದ್ದು, ದಿಲ್ಲಿ–JFK ಸೇವೆ 7 ಹಾರಾಟದೊಂದಿಗೆ ಯಥಾಪ್ರಕಾರ ಮುಂದುವರಿಯಲಿದೆ.
ಏಷ್ಯಾ ಮಾರ್ಗಗಳಲ್ಲಿ ಅತ್ಯಂತ ಹೆಚ್ಚು ನಷ್ಟ ಅನುಭವಿಸಿದ್ದು ಸಿಂಗಾಪುರ ಮತ್ತು ಬ್ಯಾಂಕಾಕ್ ಸಂಪರ್ಕ. ದಿಲ್ಲಿ–ಸಿಂಗಾಪುರ ವಾರಕ್ಕೆ 24ರಿಂದ 14ಕ್ಕೆ, ಮುಂಬೈ–ಸಿಂಗಾಪುರ 14ರಿಂದ 7ಕ್ಕೆ ಕಡಿಮೆಯಾಗಿದ್ದು, ಚೆನ್ನೈ–ಸಿಂಗಾಪುರ ಸೇವೆ ಆಗಸ್ಟ್ ವರೆಗೆ ಸಂಪೂರ್ಣ ಸ್ಥಗಿತಗೊಂಡಿದೆ. ಅದೇ ರೀತಿ ದಿಲ್ಲಿ–ಬ್ಯಾಂಕಾಕ್ ಜುಲೈನಿಂದ 28 → 21ಕ್ಕೆ ಮತ್ತು ಮುಂಬೈ–ಬ್ಯಾಂಕಾಕ್ 13 → 7ಕ್ಕೆ ಇಳಿಯಲಿದೆ. ದಿಲ್ಲಿ–ಶಾಂಘೈ ಸೇವೆ ಆಗಸ್ಟ್ ವರೆಗೆ ಸ್ಥಗಿತಗೊಂಡಿದ್ದರೆ, ದಿಲ್ಲಿ–ಕೌಲಾಲಂಪುರ್ 10 → 5, ದಿಲ್ಲಿ–ಹೊ ಚಿ ಮಿನ್ಹ್ ಸಿಟಿ ಜುಲೈ–ಆಗಸ್ಟ್ನಲ್ಲಿ 7 → 4, ದಿಲ್ಲಿ–ಹಾನೋಯ್ ಸಂಚಾರ ಅವಧಿಯಲ್ಲಿ 5 → 4 ಇಳಿದಿದೆ.
ಈ ಎಲ್ಲ ಕಡಿತಗಳ ನಡುವೆಯೂ ಏರ್ ಇಂಡಿಯಾ ತಿಂಗಳಿಗೆ 1,200ಕ್ಕೂ ಹೆಚ್ಚು ಅಂತರಾಷ್ಟ್ರೀಯ ಹಾರಾಟ ನಡೆಸಲಿದ್ದು, ಐದು ಖಂಡಗಳಿಗೆ ಸಂಪರ್ಕ ಮುಂದುವರಿಸಲಿದೆ ಎಂದು ಘೋಷಿಸಿದೆ. ಉತ್ತರ ಅಮೆರಿಕಾಕ್ಕೆ ವಾರಕ್ಕೆ 33, ಯೂರೋಪ್ಗೆ 47, UK ಗೆ 57, ಆಸ್ಟ್ರೇಲಿಯಾಕ್ಕೆ 8, ದೂರ ಪೂರ್ವ–ಆಗ್ನೇಯ ಏಷ್ಯಾ–ಸಾರ್ಕ್ ಪ್ರದೇಶಕ್ಕೆ 158, ಮತ್ತು ಮಾರಿಷಸ್ (ಆಫ್ರಿಕಾ)ಗೆ 7 ಹಾರಾಟಗಳು ಮುಂದುವರಿಯಲಿವೆ.

ಈಗಾಗಲೇ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಮಾಡಿರುವ ವ್ಯವಸ್ಥೆ ಏನು?
ಈಗಾಗಲೇ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಏರ್ ಇಂಡಿಯಾ ಬೇರೆ ವಿಮಾನದಲ್ಲಿ ಪ್ರಯಾಣ ವ್ಯವಸ್ಥೆ, ಉಚಿತ ದಿನಾಂಕ ಬದಲಾವಣೆ ಅಥವಾ ಸಂಪೂರ್ಣ ಹಣ ವಾಪಸ್ ನೀಡಲಿದ್ದು, 24×7 ಸಂಪರ್ಕ ಕೇಂದ್ರ ಮತ್ತು ಡಿಜಿಟಲ್ ಮಾಧ್ಯಮ ಮೂಲಕ ಸಹಾಯ ಲಭ್ಯವಿರಲಿದೆ. ಯುದ್ಧದ ಸ್ಥಿತಿ ಹಾಗೂ ತೈಲದ ಬೆಲೆ ಹೀಗೆ ಹೆಚ್ಚುತ್ತಾ ಹೋದರೆ ಮತ್ತಷ್ಟು ಬದಲಾವಣೆ ಸಾಧ್ಯ ಎಂದೂ ಸಂಸ್ಥೆ ಎಚ್ಚರಿಸಿದ್ದು, ಪರಿಸ್ಥಿತಿ ಅನುಕೂಲಕರವಾದ ತಕ್ಷಣ ಪೂರ್ಣ ಸಾಮರ್ಥ್ಯ ಮರಳಿಸಲು ನಿಯಂತ್ರಕ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ನಿಕಟ ಸಹಯೋಗ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇನ್ನೂ ಕೆಲವೆಡೆ ಜುಲೈವರೆಗೆ ಎಲ್ಲಾ ವಿಮಾನಯಾನ ರದ್ದು ಎಂಬ ಸುಳ್ಳುಸುದ್ದಿ ಪ್ರಕಟವಾಗಿದ್ದು ಅದನ್ನು ಖಡಾ ಖಂಡಿತವಾಗಿ ಏರ್ ಇಂಡಿಯಾ ತಿರಸ್ಕರಿಸಿದೆ. ಮುಂದುವರೆದು ಜೂನ್ ಇಂದ ಆಗಸ್ಟ್ ವರೆಗೆ ಮಾತ್ರ ಈ ತಾತ್ಕಾಲಿಕ ಬದಲಾವಣೆ, ಪ್ರಸ್ತುತ ಮೇಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಏರ್ ಇಂಡಿಯಾ ನ್ಯೂಸ್ ರೂಂ ಪೋಸ್ಟ್ ಮಾಡಿದೆ. ಈ ತಿಂಗಳು ಓಡಾಡುವವರಿಗೆ ವಿನಾಯಿತಿ ಇದ್ದು ಮುಂದಿನ ತಿಂಗಳಿಂದ ಮಾತ್ರ ಚೂರು ಅಡೆತಡೆ ಖಂಡಿತ
Bangalore [Bangalore],Bangalore,Karnataka













