Last Updated:
Chikkanna Marriage: ‘ಉಪಾಧ್ಯಕ್ಷ’ ಸಿನಿಮಾದಲ್ಲಿ ಹೀರೋ ಆಗಿ ಪ್ರಮೋಶನ್ ಪಡೆದ ಚಿಕ್ಕಣ್ಣ, ಬಳಿಕ ‘ಲಕ್ಷ್ಮಿಪುತ್ರ’ದ ಮೂಲಕ ಮತ್ತೊಮ್ಮೆ ನಾಯಕ ನಟರಾಗಿದ್ದಾರೆ. ಇದೇ ಹೊತ್ತಲ್ಲೇ ಮದುವೆಯಾಗುವ ಮೂಲಕ ‘ಗಂಡನ ಸ್ಥಾನ’ಕ್ಕೆ ‘ಬಡ್ತಿ’ ಪಡೆಯಲು ಸಜ್ಜಾಗಿದ್ದಾರೆ. ಈಗಾಗಲೇ ಚಿಕ್ಕಣ್ಣ ಎಂಗೇಜ್ ಆಗಿದ್ದು, ಇದೀಗ ಮದುವೆಗೂ ಮುಹೂರ್ತ ಫಿಕ್ಸ್ ಆಗಿದೆ.
ಮೈಸೂರು: ಚಂದನವನದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಅದು ಹಾಸ್ಯನಟ ಚಿಕ್ಕಣ್ಣ (Chikkanna) ಅವರ ಮದುವೆ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಹಾಸ್ಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ಚಿಕ್ಕಣ್ಣ, ಬಳಿಕ ನಟರಾಗಿ ಬಡ್ತಿ ಪಡೆದರು. ಉಪಾಧ್ಯಕ್ಷ (Uapadhyaksha) ಸಿನಿಮಾದಲ್ಲಿ ಹೀರೋ ಆಗಿ ಪ್ರಮೋಶನ್ ಪಡೆದ ಚಿಕ್ಕಣ್ಣ, ಬಳಿಕ ಲಕ್ಷ್ಮಿಪುತ್ರದ (Lakshmiputra) ಮೂಲಕ ಮತ್ತೊಮ್ಮೆ ನಾಯಕ ನಟರಾಗಿದ್ದಾರೆ. ಇದೇ ಹೊತ್ತಲ್ಲೇ ಮದುವೆಯಾಗುವ ಮೂಲಕ ಗಂಡನ ಸ್ಥಾನಕ್ಕೆ ಬಡ್ತಿ ಪಡೆಯಲು ಸಜ್ಜಾಗಿದ್ದಾರೆ. ಈಗಾಗಲೇ ಚಿಕ್ಕಣ್ಣ ಎಂಗೇಜ್ ಆಗಿದ್ದು, ಇದೀಗ ಮದುವೆಗೂ ಮುಹೂರ್ತ ಫಿಕ್ಸ್ ಆಗಿದೆ.
ನಟ ಚಿಕ್ಕಣ್ಣ ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮಂಡ್ಯ ಮೂಲದ ಪಾವನಾ ಎಂಬುವರ ಜೊತೆ ಚಿಕ್ಕಣ್ಣ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ತಿಂಗಳು ಆಗಸ್ಟ್ 29ಕ್ಕೆ ರಿಸೆಪ್ಷನ್ ನಡೆಯಲಿದೆ. ಮರುದಿನ ಅಂದರೆ ಆಗಸ್ಟ್ 30ಕ್ಕೆ ಚಿಕ್ಕಣ್ಣ ಹಾಗೂ ಪಾವನಾ ಮದುವೆ ನಡೆಯಲಿದೆ. ಮೈಸೂರಿನ Spectrum ಹಾಲ್ ನಲ್ಲಿ ನಡೆಯಲಿದೆ ಅದ್ದೂರಿ ಮದುವೆ ಸಮಾರಂಭ ನಡೆಯಲಿದ್ದು, ಸ್ಯಾಂಡಲ್ವುಡ್ನ ನಟ, ನಟಿಯರು, ತಂತ್ರಜ್ಞರು, ನಿರ್ದೇಶಕ ನಿರ್ಮಾಪಕರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಚಿಕ್ಕಣ್ಣ ಈಗಾಗಲೇ ಮದುವೆ ಪತ್ರಿಕೆ ಕೊಡೋ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮಿಗೆ ಈಗಾಗಲೇ ಚಿಕ್ಕಣ್ಣ ಆಹ್ವಾನ ಪತ್ರಿಕೆ ನೀಡಿ, ಮದುವೆಗೆ ಆಹ್ವಾನ ನೀಡಿದ್ದಾರೆ. ಇನ್ನು ಸ್ಯಾಂಡಲ್ವುಡ್ನ ತಮ್ಮ ಸ್ನೇಹಿತರು, ಆಪ್ತರಿಗೆ ಇನ್ವಿಟೇಷನ್ ಕೊಡುತ್ತಿದ್ದಾರೆ.
ಚಿಕ್ಕಣ್ಣನ ಕೈಹಿಡಿಯುತ್ತಿರೋ ಹುಡುಗಿ ಹೆಸರು ಪಾವನಾ ಗೌಡ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಎಂಬ ಗ್ರಾಮದ ಮೂಲದವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ ಪಾವನಾ, ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ ಎನ್ನಲಾಗಿದೆ.

ಮೈಸೂರು ಮೂಲದ ಚಿಕ್ಕಣ್ಣ ಕಡು ಬಡತನದ ಕುಟುಂಬದಿಂದ ಬಂದವರು. ಮೊದಲು ಗಾರೆ ಕೆಲಸ ಮಾಡ್ತಿದ್ದ ಚಿಕ್ಕಣ್ಣ, ಬಳಿಕ ಆರ್ಕೆಸ್ಟ್ರಾಗಳಲ್ಲಿ ಕಾಮಿಡಿ ಮಾಡುತ್ತಿದ್ದರಂತೆ. ಬಳಿಕ ಹಾಸ್ಯ ಕಲಾವಿದನಾಗಿ ಟಿವಿಗಳಲ್ಲಿ ಕಾಣಿಸಿಕೊಂಡರು. ಬಳಿಕ ಸಣ್ಣ ಪುಟ್ಟ ಸೀರಿಯಲ್ನಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಕನ್ನಡ ಚಿತ್ರರಂಗದ ಸಮಾರಂಭವೊಂದರಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಗಮನ ಸೆಳೆದ ಚಿಕ್ಕಣ್ಣ, 2011ರಲ್ಲಿ ಕಿರಾತಕ ಸಿನಿಮಾದಲ್ಲಿ ಯಶ್ ಸ್ನೇಹಿತನಾಗಿ ಅಭಿನಯಿಸಿದರು. ಈ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿಕ್ಕಣ್ಣ, ಅಲ್ಲಿಂದ ಇಲ್ಲಿವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದಾದ ಬಳಿಕ ಚಿಕ್ಕಣ್ಣ ಹಿಂತಿರುಗಿ ನೋಡಿದ್ದೇ ಇಲ್ಲ. ಕನ್ನಡದ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಹಾಸ್ಯನಟ ಅಂತ ಗುರುತಿಸಿಕೊಂಡರು. ಯಶ್ ಜೊತೆ ನಟಿಸಿದ ರಾಜಾಹುಲಿ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಹಾಸ್ಯನಟ ಸೈಮಾ ಅವಾರ್ಡ್ ಚಿಕ್ಕಣ್ಣ ಮುಡಿಗೇರಿತ್ತು. ಬಳಿಕ ಶರಣ್ ಜೊತೆ ನಟಿಸಿದ್ದ ಅಧ್ಯಕ್ಷ ಸಿನಿಮಾದ ಅಭಿನಯಕ್ಕಾಗಿಯೂ ಮತ್ತೊಂದು ಸೈಮಾ ಅವಾರ್ಡ್ ಚಿಕ್ಕಣ್ಣ ಕೈ ಸೇರಿತು.
ಉಪಾಧ್ಯಕ್ಷ ಸಿನಿಮಾ ಮೂಲಕ 2024ರಲ್ಲಿ ಚಿಕ್ಕಣ್ಣ ಹೀರೋ ಆಗಿ ಬಡ್ತಿ ಪಡೆದರು. ಇದೀಗ ಲಕ್ಷ್ಮೀಪುತ್ರ ಎಂಬ ಸಿನಿಮಾದಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸಿದ್ದು, ಸಿನಿಮಾ ಇನ್ನೇನು ತೆರೆಗೆ ಬರಬೇಕಿದೆ. ಈ ಸಂಭ್ರಮದಲ್ಲಿರುವ ಚಿಕ್ಕಣ್ಣಗೆ ಮದುವೆ ಸಂಭ್ರಮವೂ ಸೇರಿ, ಸಂಭ್ರಮ ಡಬಲ್ ಆಗಿದೆ.
Mysore,Karnataka
Jul 29, 2026 10:34 PM IST














