Last Updated:
Annamalai: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿದೆ. ಯಾಕಂದ್ರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವಯವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ದೆಹಲಿ: ತಮಿಳುನಾಡು (Tamil Nadu) ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿದೆ. ಯಾಕಂದ್ರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ (Nitin Nabin) ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ (Amit Shah) ಅವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ದೆಹಲಿಗೆ ಭೇಟಿ ನೀಡಿರುವ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ನಿತಿನ್ ನಬೀನ್ ಅವರನ್ನ ಭೇಟಿಯಾಗಿ ಕೆಲ ಘಂಟೆಕಾಲ ಮಾತುಕತೆ ನಡೆಸಿದ್ದರು. ಈ ವೇಳೆ, ಅಣ್ಣಾಮಲೈ ಅವರು ನಿತಿನ್ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದ್ದವು. ಆದ್ರೆ, ಇದಾದ ಬೆನ್ನಲ್ಲೇ ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಶಾ ಅವರನ್ನ ಭೇಟಿಯಾದರು. ಇದಾದ ಮೇಲೆ ಕಥೆಯೇ ಉಲ್ಟಾ ಆದಂತೆ ಕಾಣುತ್ತಿದೆ.
ಹೌದು, ಅಮಿತ್ ಶಾ ಹಾಗೂ ಅಣ್ಣಾಮಲೈ ಭೇಟಿಯಾಗುತ್ತಿದ್ದಂತೆ, ಕೇಂದ್ರ ಬಿಜೆಪಿ ಘಟಕವು ತಮಿಳುನಾಡಿನ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ಗೆ ತುರ್ತು ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಅದರಂತೆ, ಸಮನ್ಸ್ನಲ್ಲಿ ನೇರವಾಗಿ ದೆಹಲಿಗೆ ಬಂದು ಅಧ್ಯಕ್ಷ ನಿತಿನ್ ನಬಿನ್ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ದಕ್ಷಿಣ ರಾಜ್ಯದಲ್ಲಿ ಪಕ್ಷದ ರಚನೆ, ಒಳಗಿನ ಬಣ ರಾಜಕೀಯ ಎಲ್ಲವೂ ಬದಲಾವಣೆಯ ಸನ್ನಿಹಿತವಾದಂತೆ ಕಾಣುತ್ತಿದೆ. ಅದರಲ್ಲೂ, ಈ ಹಠಾತ್ ಸಭೆ ದ್ರಾವಿಡ ನಾಡಿನ ಕಮಲದ ರಣತಂತ್ರವನ್ನೇ ಬದಲಾಯಿಸಬಹುದಾ ಅನ್ನೋ ಚರ್ಚೆ ಶುರುವಾಗಿದೆ.
ಬಿಜೆಪಿಗೆ ರಾಜೀನಾಮೆ ನೀಡಿದ್ರೆ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಕೆ. ಅಣ್ಣಾಮಲೈ ಅವರು ಸಾರ್ವಜನಿಕ ಆಂದೋಲನವೊಂದನ್ನು ಪ್ರಾರಂಭಿಸಬಹುದು ಎಂದು ಒಂದೆಡೆ ವರದಿಗಳು ಸೂಚಿಸಿವೆ. ಅದು ಅಂತಿಮವಾಗಿ ಪಕ್ಷವಾಗಿ ವಿಕಸನಗೊಳ್ಳುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಯಾಕಂದ್ರೆ, ತಮಿಳುನಾಡಿನಲ್ಲಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿಯಾಗಿ ಅಧಿಕಾರಕ್ಕೆ ಬಂದ ನಂತರ ಅದರ ಪ್ರಭಾವದಿಂದ ತಾವು ಕೂಡ ಹೊಸ ಪಕ್ಷ ಕಟ್ಟಲು ಯೋಚನೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಮುಂದುವರೆದು, ಅಣ್ಣಾಮಲೈ ಅವರ ಆಪ್ತ ಮೂಲಗಳ ಪ್ರಕಾರ, ನಟ ವಿಜಯ್ ರಾಜಕೀಯ ಶಕ್ತಿಯಾಗಿ ಉದಯಿಸಿದ ನಂತರ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವು ಗಮನಾರ್ಹ ಬದಲಾವಣೆಗೆ ಒಳಗಾಗಿದೆ ಎಂದು ಅವರು ನಂಬುತ್ತಾರೆ. ‘ಇಂದು ವಿಜಯ್ ವಿರುದ್ಧ ಹೋರಾಡಲು ಯಾವುದೇ ನಾಯಕ ಇಲ್ಲ. ದ್ರಾವಿಡ ಯುಗ ಮುಗಿದಿದೆ. ಭಾಷಾ ವಿಷಯಗಳ ಮೇಲೆ ಮಾತ್ರ ಕೇಂದ್ರೀಕೃತವಾದ ರಾಜಕೀಯ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ರಾಜ್ಯದ ರಾಜಕೀಯ ಬದಲಾಗಿದೆ’ ಎಂದು ಚರ್ಚೆಗಳ ಬಗ್ಗೆ ತಿಳಿದಿರುವ ಮೂಲವೊಂದು ತಿಳಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.













