Last Updated:
ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸಿದ ಶಿಕ್ಷಕಿ ಇದೀಗ ಇಹಲೋಕ ತ್ಯಜಿಸಿದ್ದಾರೆ. ಶಿಕ್ಷಕಿ ಮರಣದಿಂದ ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಎಲ್ಲಾ ಮಕ್ಕಳು ಕಣ್ಣೀರಾಕಿದ್ದಾರೆ.
ಒಬ್ಬ ವ್ಯಕ್ತಿ ಸತ್ತಾಗ (Death) ಅವರ ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಬಂಧುಗಳು ಅಳುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಶಿಕ್ಷಕಿ (Teacher) ಸಾವಿನಿಂದ ಇಡೀ ಗ್ರಾಮ ಬಿಕ್ಕಿ ಬಿಕ್ಕಿ ಅಳುತ್ತಿದೆ. ಹೌದು, ತಮಿಳುನಾಡಿದ (Tamil nadu) ನಾಗೈ ಜಿಲ್ಲೆಯ ಒಂದು ಸಣ್ಣ ಹಳ್ಳಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸುಮಾರು 30 ವರ್ಷಗಳ ಕಾಲ ಮಕ್ಕಳ ಕನಸುಗಳನ್ನು ಬೆಳಗಿಸಿದ ಒಬ್ಬ ಸರಳ, ಮಮತೆಯ ಶಿಕ್ಷಕಿಯೇ ಈ ವಸಂತಿ ಟೀಚರ್. ಇತ್ತೀಚಿಗೆ ಮೃತಪಟ್ಟಿದ್ದು, ಈ ಸುದ್ದಿ ತಿಳಿದು ಇಡೀ ಹಳ್ಳಿ ಶೋಕಸಾಗರದಲ್ಲಿ ಮುಳುಗಿದೆ.
ಹೌದು, 55 ವರ್ಷದ ವಸಂತಿ, ನಾಗಪಟ್ಟಣಂ ಜಿಲ್ಲೆಯ ತಿರುತುರೈಪೂಂಡಿ ಬಳಿಯ ಮನಾಲಿ ಗ್ರಾಮದವರು. ಆದರೆ ಥೇಥಿ ಗ್ರಾಮದ ಮಕ್ಕಳಿಗೆ ಅವರು ಶಿಕ್ಷಕಿಯಷ್ಟೇ ಅಲ್ಲ, ಅಮ್ಮನಂತೆ ಆಗಿದ್ದರು. ಕಳೆದ 30 ವರ್ಷಗಳಿಂದ ಅಲ್ಲಿನ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು.
ಈ ಶಿಕ್ಷಕಿ ವಸಂತಿ ಸುಮಾರು 30 ವರ್ಷದಿಂದ ತಮ್ಮ ವಿದ್ಯಾರ್ಥಿಗಳನ್ನು ಅವರು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಬಡ ಕುಟುಂಬಗಳ ಮಕ್ಕಳು ಪುಸ್ತಕ, ಪೆನ್, ಯೂನಿಫಾರ್ಮ್ ಬೇಕಾದಾಗ, ವಸಂತಿ ಟೀಚರ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡುತ್ತಿದ್ದರು. ಆ ಹಳ್ಳಿಯಲ್ಲಿ ವಸಂತಿ ಟೀಚರ್ ಅನ್ನು ತಿಳಿಯದವರು ಯಾರೂ ಇಲ್ಲ. ಹಳ್ಳಿಯ ಅನೇಕ ಯುವಕರು, ಕುಟುಂಬಸ್ಥರು ಎಲ್ಲರೂ ಅವರ ಹಳೆಯ ವಿದ್ಯಾರ್ಥಿಗಳೇ. ಯಾಕಂದರೆ ಅಷ್ಟು ವರ್ಷ ಈ ವಸಂತಿ ಟೀಚರ್ ಇಲ್ಲಿ ಕೆಲಸ ಮಾಡಿದ್ದಾರೆ.
ಶಾಲೆಯಲ್ಲಿ ಯಾವಾಗ ನೋಡಿದರೂ ವಸಂತಿ ಅವರ ಮುಖದಲ್ಲಿ ನಗು, ಮಾತಿನಲ್ಲಿ ಮೃದುತ್ವ, ಹೃದಯದಲ್ಲಿ ಮಕ್ಕಳಿಗಾಗಿ ಕಾಳಜಿ ಇದನ್ನೇ ಎಲ್ಲರು ನೋಡುತ್ತಿದ್ದರು. ಆದರೆ ಆ ನಗುವಿನ ಹಿಂದೆ ಅವರು ಹೊತ್ತುಕೊಂಡಿದ್ದ ನೋವು ಎಷ್ಟು ಆಳವಾಗಿತ್ತು ಎಂಬುದು ಬಹುತೇಕ ಯಾರಿಗೂ ಗೊತ್ತಿರಲಿಲ್ಲ. 5 ವರ್ಷಗಳ ಹಿಂದೆ ಅವರ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದರು. ಆ ದುಃಖದಿಂದ ಇವರು ಇನ್ನೂ ಹೊರಬಂದಿರಲಿಲ್ಲ, ಆದರೂ ಬದುಕನ್ನು ಮಕ್ಕಳ ಮುಖ ನೋಡಿ ಹೇಗೋ ಮುಂದುವರಿಸುತ್ತಿದ್ದರು. ಆದರೆ ದಿಢೀರ್ ಅಂತ ವಿಧಿ ಇನ್ನೊಂದು ದೊಡ್ಡ ಹೊಡೆತ ಕೊಡ್ತು. ಅವರು ಅತೀ ಹೆಚ್ಚಾಗಿ ಪ್ರೀತಿಸುತ್ತಿದ್ದ 31 ವರ್ಷದ ಮಗಳು ನಂದಿನಿ ಕೂಡ ನಿಧನರಾದರು.
ಈ ಎರಡೂ ಆಘಾತಗಳು ವಸಂತಿ ಟೀಚರ್ ಹೃದಯವನ್ನು ಸಂಪೂರ್ಣವಾಗಿ ಛಿದ್ರಛಿದ್ರ ಮಾಡಿತ್ತು. ಸದಾ ಇತರರಿಗೆ ಧೈರ್ಯ ಹೇಳುತ್ತಿದ್ದ ಈ ಮಹಿಳೆ, ತಮ್ಮ ನೋವಿಗೆ ತಾನೇ ಸೋಲುತ್ತ, ಆತ್ಮಹತ್ಯೆಗೆ ಯತ್ನಿಸಿದರು. ಇದನ್ನು ಗಮನಿಸಿದ ಗ್ರಾಮಸ್ಥರು ಓಡಿ ಬಂದು ಅವರನ್ನು ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರ ನಿಗಾ ಘಟಕದಲ್ಲಿ ಹಲವು ದಿನಗಳು ಚಿಕಿತ್ಸೆ ನೀಡಲಾಯಿತು, ಆದರೂ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ತಮ್ಮ ಗ್ರಾಮದ ಶೈಕ್ಷಣಿಕ ದೀಪವಾಗಿದ್ದ ವಸಂತಿ ಟೀಚರ್ ಶಾಂತವಾಗಿ ಈ ಲೋಕವನ್ನೇ ಬಿಟ್ಟುಹೊರಟೋದ್ರು.
ಅವರ ಅಂತ್ಯಕ್ರಿಯೆಯ ದಿನ ಇಡೀ ಹಳ್ಳಿ ಕಣ್ಣೀರ ಕಡಲಲ್ಲಿ ತೇಲುತ್ತಿತ್ತು. 500 ಕ್ಕೂ ಹೆಚ್ಚು ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಸಹ ಶಿಕ್ಷಕರು, ಪೋಷಕರು ಎಲ್ಲರೂ ಒಂದೇ ಕಡೆ ಸೇರಿಕೊಂಡು ಕಂಬನಿ ಮಿಡಿದಿದ್ದಾರೆ. ಶಾಲಾ ಮಕ್ಕಳು ಕಣ್ಣೀರು ತಡೆಯಲಾಗದೇ ಆ ಪುಟ್ಟ ಕೈಗಳಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತ, ‘ಟೀಚರ್… ಟೀಚರ್…’ ಎಂದು ಅಳುವ ಅವರ ಧ್ವನಿ ನೋಡಿದವರ ಕಣ್ಣಾಲೆಯಲ್ಲೂ ನೀರು ತರಿಸಿತ್ತು. ಶಿಕ್ಷಕಿ ವಸಂತಿ ಅವರ ಅಂತ್ಯಕ್ರಿಯೆಗೆ ಇಡೀ ಹಳ್ಳಿಯೇ ಇಷ್ಟು ಭಾವನಾತ್ಮಕವಾಗಿ ಸೇರಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಇದು ವಸಂತಿ ಟೀಚರ್ ಅವರ ಬದುಕಿನ ನಿಜವಾದ ಗೌರವ. ಅವರು ಬೋಧಿಸಿದ ಪಾಠಗಳು, ನೀಡಿದ ಮಮತೆ, ತೋರಿದ ಮಾನವೀಯತೆ ಇವೆಲ್ಲವೂ ಆ ಜನರ ಹೃದಯದಲ್ಲಿ ಬೇರು ಬಿಟ್ಟಿವೆ.
ವಸಂತಿ ಟೀಚರ್ ಇನ್ನು ನಮ್ಮೊಂದಿಗಿಲ್ಲ. ಆದರೆ ಅವರ ನಗುವಿನ ನೆನಪು, ‘ಓದಿ ದೊಡ್ಡವರು ಆಗಬೇಕು’ ಎಂದು ಹೇಳಿದ ಧ್ವನಿ, ಬಡ ಮಕ್ಕಳ ಕೈ ಹಿಡಿದು ಶಾಲೆಗೆ ಕರೆದುಕೊಂಡು ಹೋದ ಕ್ಷಣಗಳು ಇವೆಲ್ಲವೂ ಆ ಹಳ್ಳಿಯಲ್ಲಿ ಎಂದಿಗೂ ಮಸುಕಾಗುವುದಿಲ್ಲ. ಈ ಕಣ್ಣೀರಿನ ವಿದಾಯ ಒಂದು ಸತ್ಯವನ್ನು ಮತ್ತೆ ನೆನಪಿಸಿದೆ, ನಿಜವಾದ ಪ್ರೀತಿ, ನಿಸ್ವಾರ್ಥ ಸೇವೆ ಎಂದಿಗೂ ಸಾಯುವುದಿಲ್ಲ. ವಸಂತಿ ಟೀಚರ್ ಅವರ ಹೆಸರು, ಅವರ ನೆನಪು, ಅವರ ಪ್ರೀತಿ ಆ ಹಳ್ಳಿಯ ಮಕ್ಕಳ ಮನದಲ್ಲಿ ಶಾಶ್ವತವಾಗಿ ಜೀವಂತವಾಗಿಯೇ ಇರುತ್ತದೆ.













