Karnataka
oi-Ravindra Gangal
ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಪ್ರಭಾವಿ ಖಾತೆಗಳ ಸಚಿವರಾಗಿ ನೇಮಕಗೊಂಡಿದ್ದಾರೆ. ಜಮೀರ್ ಹಾಗೂ ಸುರೇಶ್ ಅವರು ಸಿದ್ದರಾಮಯ್ಯನವರು ಹೋದ ಕಡೆಯೆಲ್ಲಾ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಸಕ್ತಿ ಕೆರಳಿಸುವಂತೆ ಮಾಡಿದೆ.
ಸಿದ್ದು ಆಪ್ತ ವಲಯದಲ್ಲಿ ಜಮೀರ್, ಸುರೇಶ್
ಈ ಇಬ್ಬರು ನಾಯಕರು ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಪ್ರಮುಖರು. ಇವರಿಗೆ ಪ್ರಬಲ ಸಚಿವಾಲಯಗಳನ್ನು ದೊರಕಿಸಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಜಮೀರ್ ಅವರಿಗೆ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ದೊರೆತಿದೆ. ಬೈರತಿ ಸುರೇಶ್ ಅವರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರು ಮುಸ್ಲಿಂ ಸಮುದಾಯದ ಪ್ರಬಲ ನಾಯಕ. ಬೈರತಿ ಸುರೇಶ್ ಅವರು ಕುರುಬ ಸಮುದಾಯಕ್ಕೆ ಸೇರಿದವರು.
ಸಂಪನ್ಮೂಲ ಹೊಂದಿರುವ ನಾಯಕರು
ಜಮೀರ್ ಅಹ್ಮದ್ ಖಾನ್ ಹಾಗೂ ಬೈರತಿ ಸುರೇಶ್ ಅವರು ಸಂಪನ್ಮೂಲ ಹೊಂದಿರುವ ನಾಯಕರು. ಅಷ್ಟೇ ಅಲ್ಲದೇ, ಜಮೀರ್ ಅವರು ಮುಸ್ಲಿಂ ಸಮುದಾಯದಲ್ಲಿ ಮಾಸ್ ನಾಯಕತ್ವವನ್ನು ಹೊಂದಿದ್ದಾರೆ. ಅವರು ಮುಸ್ಲಿಮರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರಲು ಸಹಾಯ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನು ಕುರುಬ ಸಮುದಾಯಕ್ಕೆ ಸೇರಿರುವ ಬೈರತಿ ಸುರೇಶ್ ಅವರು ಬೆಂಗಳೂರಿನಲ್ಲಿ ಪ್ರಭಾವವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರನ್ನು ಸಿದ್ದರಾಮಯ್ಯ ಬಲಗೈ ಹಾಗೂ ಎಡಗೈನಂತೆ ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯಗೆ ಹಲವು ಶಿಷ್ಯರು.. ಆದರೂ…
ಪ್ರಭಾವಿ ಸಚಿವರಾದ ಎಂಬಿ ಪಾಟೀಲ್, ಎಚ್ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್ ಅವರು ಸಿದ್ದರಾಮಯ್ಯನವರ ಅತ್ಯಾಪ್ತರೆಂದೇ ಪರಿಗಣಿಸಲ್ಪಟ್ಟಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲು ಇವರೆಲ್ಲರ ಶ್ರಮವಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನಡುವೆ ಪೈಪೋಟಿ ನಡೆದಾಗಿ ಇವರೆಲ್ಲರೂ ಸಿದ್ದರಾಮಯ್ಯ ಪರವಾಗಿ ಸಾರ್ವಜನಿಕವಾಗಿಯೇ ಬ್ಯಾಟ್ ಬೀಸಿದರು. ಆದರೂ, ಸಿದ್ದರಾಮಯ್ಯನವರು ತಮ್ಮ ಪಟ್ಟಾ ಶಿಷ್ಯರನ್ನಾಗಿ ಜಮೀರ್ ಹಾಗೂ ಸುರೇಶ್ ಅವರನ್ನು ಮಾಡಿಕೊಂಡಿರುವುದು ಆಸಕ್ತಿದಾಯಕವಾಗಿದೆ.
ದೆಹಲಿಯಲ್ಲಿಯೂ ಸಿದ್ದು ಜೊತೆ ಕಾಣಿಸಿಕೊಳ್ಳುತ್ತಿರುವ ಇಬ್ಬರು ನಾಯಕರು
ಮುಖ್ಯಮಂತ್ರಿ ಆದಾಗಿನಿಂದ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸಕ್ಕೆ ಹಲವು ಬಾರಿ ತೆರಳಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿಯೂ ಜಮೀರ್ ಹಾಗೂ ಸುರೇಶ್ ಅವರು ಜೊತೆಗಿರುವುದನ್ನು ನಾವು ಗಮನಿಸಬಹುದು. ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿದ್ದ ಪೈಪೋಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಸಿದ್ದು ಜೊತೆ ಈ ಇಬ್ಬರು ನಾಯಕರು ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಗಾಂಧಿ ಅವರ ನಿವಾಸದಲ್ಲಿ ನಡೆದ ಔತನಕೂಟದಲ್ಲಿಯೂ ಈ ಇಬ್ಬರು ನಾಯಕರು ಸಿದ್ದು ಜೊತೆ ಭಾಗಿಯಾದ್ದರು. ನಿನ್ನೆ ರಾಷ್ಟ್ರಪತಿ ಮರ್ಮು ಅವರ ಭೇಟಿ ಸಂದರ್ಭದಲ್ಲಿಯೂ ಈ ಇಬ್ಬರು ಸಚಿವರ ಜೊತೆಗಿದ್ದರು. ಈ ಬೆಳವಣಿಗೆಗಳೀಗ ಆಸಕ್ತಿಕರ ಚರ್ಚೆಗೆ ಮುನ್ನುಡಿ ಬರೆದಿದೆ.
English summary
Siddaramaiah’s New Battalion: Why didn’t we see Siddu’s old allies with him, Are Byrathi Suresh and Zameer Ahmed Khan the new right hand left hand for Siddaramaiah | Know more at Oneindia Kannada
Story first published: Thursday, June 22, 2023, 12:47 [IST]