Last Updated:
Husband-Wife: ಹಿಂದೂ ವಿವಾಹದಲ್ಲಿ ಪ್ರಮುಖವಾಗಿದ್ದ ತಾಳಿ, ಮಂಗಳಸೂತ್ರ ಅಥವಾ ಕರಿಮಣಿಯ ಪ್ರಾಮುಖ್ಯತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ಗಂಡನಿಗೆ ವಿಚ್ಛೇದನ ನೀಡುವ ಆದೇಶವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್, ಹಿಂದೂ ಪತ್ನಿ ಮಂಗಳಸೂತ್ರ ತೆಗೆಯುವುದು ಪತಿಯ ಮೇಲೆ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ತಮಿಳುನಾಡು: ಹಿಂದೂ ವಿವಾಹದಲ್ಲಿ (Hindu marriages) ಪ್ರಮುಖವಾಗಿದ್ದ ತಾಳಿ (Tali), ಮಂಗಳಸೂತ್ರ (Mangalsutra) ಅಥವಾ ಕರಿಮಣಿಯ (Karimani) ಪ್ರಾಮುಖ್ಯತೆಯನ್ನು ಮದ್ರಾಸ್ ಹೈಕೋರ್ಟ್ (Madras High Court) ಎತ್ತಿ ಹಿಡಿದಿದೆ. ಗಂಡನಿಗೆ (Husband) ವಿಚ್ಛೇದನ (Divorce) ನೀಡುವ ಆದೇಶವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್, ಹಿಂದೂ ಪತ್ನಿ ಮಂಗಳಸೂತ್ರ ತೆಗೆಯುವುದು ಪತಿಯ ಮೇಲೆ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಗಂಡ ಒದಗಿಸಿದ ಸಾಕ್ಷ್ಯಗಳನ್ನು ಪರಿಗಣಿಸಿದ ನಂತರ, ಪತ್ನಿ (wife) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂಬ ಪತಿಯ ಆರೋಪವನ್ನು ಸಹ ತಳ್ಳಿಹಾಕಲಾಗುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ನಾನು ಬದುಕಿದ್ದಾಗಲೇ ನನ್ನ ಪತ್ನಿ ಕೊರಳಿಗೆ ತಾಳಿ ಧರಿಸೋದಿಲ್ಲ. ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ತನಗೆ ಮಾನಸಿಕ ನೋವನ್ನುಂಟುಮಾಡಿದ್ದಾಳೆ ಎಂದು ಪತಿ ವಾದಿಸಿದರು. ಪತ್ನಿ ಕೂಡ ತನ್ನನ್ನು ತೊರೆದು ಹೋಗಿದ್ದಾಳೆ ಮತ್ತು ಮತ್ತೆ ಒಂದಾಗುವ ಸಾಧ್ಯತೆಯಿಲ್ಲ ಎಂದು ಅವರು ಕೋರ್ಟ್ ಮುಂದೆ ಹೇಳಿದ್ದಾರೆ.
ಮತ್ತೊಂದೆಡೆ ಪತ್ನಿಯು ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ನನ್ನ ಗಂಡನಿಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿದೆ. ಇದನ್ನು ಪ್ರಶ್ನಿಸಿದಾಗ ನನಗೆ ಮತ್ತು ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದರು, ಇದಕ್ಕಾಗಿ ತಾನು ಪೊಲೀಸರಿಗೆ ದೂರು ನೀಡಿದ್ದೇನೆ ಅಂತ ವಾದಿಸಿದ್ದಾರೆ.
ಪತಿ ಇನ್ನೊಬ್ಬ ಮಹಿಳೆಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದಾನೆ ಮತ್ತು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಒಪ್ಪಿಗೆ ನೀಡುವಂತೆ ತನಗೆ ಕಿರುಕುಳ ನೀಡಿದ್ದಾನೆ ಎಂದು ಅವರು ವಾದಿಸಿದರು. ಮದುವೆಗೆ ಪತ್ನಿ ನಿರಾಕರಿಸಿದಾಗ, ಪತಿ ಆಕೆಯ ಬಲಗೈ ಹೆಬ್ಬೆರಳನ್ನು ಕತ್ತರಿಸಿದನು, ಇದಕ್ಕಾಗಿ ಮಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ ಮತ್ತು ಇದೇ ಕಾರಣಕ್ಕೆ ಆತನಿಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ ಅಂತ ಪತ್ನಿ ಆರೋಪಿಸಿದ್ದಾಳೆ.
ಹಿಂದೂ ವಿವಾಹಿತ ಮಹಿಳೆ ತನ್ನ ಗಂಡ ಜೀವಂತವಾಗ ಇರುವಾಗ ಆಕೆಯ ಕೊರಳಲ್ಲಿ ಇರುವ ಮಂಗಳಸೂತ್ರ ತೆಗೆಯುವುದು ಅತ್ಯಂತ ತೀವ್ರ ಮಾನಸಿಕ ಕ್ರೌರ್ಯವಾಗಿದೆ. ತಾಳಿ ವಿವಾಹ ಜೀವನದ ಸಂಕೇತವಾಗಿದೆ ಮತ್ತು ಅದನ್ನು ಸಾಮಾನ್ಯವಾಗಿ ಗಂಡನ ಸಾವಿನ ನಂತರವೇ ತೆಗೆಯುತ್ತಾರೆ ಅಂತ ಹೇಳಿದೆ.
ಅಧೀನ ನ್ಯಾಯಾಲಯವು ಪತಿಯ ಮನವಿಯನ್ನು ಪುರಸ್ಕರಿಸಿ ವಿಚ್ಛೇದನವನ್ನು ಮಂಜೂರು ಮಾಡಿತು. ಮೇಲ್ಮನವಿಯಲ್ಲಿ, ತೆಂಕಾಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ತ್ವರಿತ ನ್ಯಾಯಾಲಯ) ಈ ಆದೇಶವನ್ನು ಎತ್ತಿಹಿಡಿಯಿತು. ಆದ್ದರಿಂದ, ಪತ್ನಿ ಹೈಕೋರ್ಟ್ನಲ್ಲಿ ಎರಡನೇ ಮೇಲ್ಮನವಿ ಸಲ್ಲಿಸಿದ್ದರು. ಪತಿಗೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಹೇಳಲು ಪತ್ನಿ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಅದೇ ಸಮಯದಲ್ಲಿ, ಪತ್ನಿ ತನ್ನ ಸಾಕ್ಷ್ಯದಲ್ಲಿ ಪತಿಯ ಅಕ್ರಮ ಸಂಬಂಧದ ಬಗ್ಗೆ ಆತನ ಮೇಲಧಿಕಾರಿಗಳಿಗೆ ದೂರುಗಳನ್ನು ಬರೆದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸಂಗಾತಿಯು ತನ್ನ ಮೇಲಧಿಕಾರಿಗಳಿಗೆ ಮತ್ತೊಬ್ಬ ಸಂಗಾತಿಯ ಬಗ್ಗೆ ಮಾನನಷ್ಟಕರ ದೂರು ನೀಡಿದಾಗ ಅದು ವಿಚ್ಛೇದನ ಪಡೆಯಲು ಸಾಕಷ್ಟು ಸಮರ್ಥನೆಯಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ನ್ಯಾಯಾಲಯವು ಪತಿ ಪತ್ನಿಯಿಂದ ಕ್ರೌರ್ಯಕ್ಕೆ ಒಳಗಾಗಿದ್ದಾನೆ ಮತ್ತು ಕೆಳಗಿನ ನ್ಯಾಯಾಲಯಗಳು ಅರ್ಜಿಯನ್ನು ಸರಿಯಾಗಿ ತೀರ್ಮಾನಿಸಿವೆ ಎಂದು ತೀರ್ಮಾನಿಸಿತು. ಹೀಗಾಗಿ, ಹೆಂಡತಿ ತನ್ನ ಆರೋಪವನ್ನು ಸಾಬೀತುಪಡಿಸಿಲ್ಲ ಎಂದು ಗಮನಿಸಿದ ನ್ಯಾಯಾಲಯವು ಮೇಲ್ಮನವಿಯನ್ನು ವಜಾಗೊಳಿಸಿತು.













