Last Updated:
ಪೆದ್ದಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದ ಅನಿರೀಕ್ಷಿತ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯವಾಡದಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬ ರಾಮ್ ಚರಣ್ ಕಡೆಗೆ ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ (Peddi) ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಪ್ರಚಾರ ಚಟುವಟಿಕೆಗಳು ಭರ್ಜರಿಯಾಗಿ ಸಾಗುತ್ತಿವೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಹಾಗೂ ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆ್ಯಕ್ಷನ್ ಸಿನಿಮಾ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದ ಅನಿರೀಕ್ಷಿತ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯವಾಡದಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬ ರಾಮ್ ಚರಣ್ ಕಡೆಗೆ ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಜೂನ್ 1ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ‘ಪೆದ್ದಿ’ ಚಿತ್ರದ ಪ್ರಚಾರ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಹಾಗೂ ನಿರ್ದೇಶಕ ಬುಚ್ಚಿ ಬಾಬು ಸನಾ ಸೇರಿದಂತೆ ಚಿತ್ರತಂಡದ ಪ್ರಮುಖ ಸದಸ್ಯರು ಭಾಗವಹಿಸಿದ್ದರು. ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಅಭಿಮಾನಿಯ ಈ ಅನಿರೀಕ್ಷಿತ ನಡೆ ವೇದಿಕೆಯ ಮೇಲಿದ್ದ ಜಾನ್ವಿ ಕಪೂರ್ ಅವರನ್ನು ಒಂದು ಕ್ಷಣ ಬೆಚ್ಚಿಬೀಳುವಂತೆ ಮಾಡಿತು. ಅವರ ಮುಖಭಾವದಲ್ಲೇ ಆತಂಕ ಸ್ಪಷ್ಟವಾಗಿ ಗೋಚರಿಸಿತು. ವೇದಿಕೆಯಲ್ಲಿ ನಡೆದ ಈ ಬೆಳವಣಿಗೆ ಕೆಲ ಸೆಕೆಂಡುಗಳ ಕಾಲ ಗೊಂದಲದ ವಾತಾವರಣವನ್ನು ಸೃಷ್ಟಿಸಿತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭದ್ರತಾ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು. ರಾಮ್ ಚರಣ್ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯಾಗಿರುವ ಅಂತಾರಾಷ್ಟ್ರೀಯ ಎಂಎಂಎ ಫೈಟರ್ ಕೆವಿನ್ ಕುಂಟ ಕೂಡ ತಕ್ಷಣವೇ ಮಧ್ಯಪ್ರವೇಶಿಸಿದರು. ವೇದಿಕೆಗೆ ನುಗ್ಗಿದ ಅಭಿಮಾನಿಯನ್ನು ನಿಯಂತ್ರಿಸಿ ಹಿಂದಕ್ಕೆ ಕರೆದೊಯ್ಯುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.
ಈ ವೈರಲ್ ಘಟನೆಯ ನಡುವೆಯೇ ‘ಪೆದ್ದಿ’ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬೋಮನ್ ಇರಾನಿ, ಶಿವ ರಾಜ್ಕುಮಾರ್, ದಿವ್ಯೇಂದು ಶರ್ಮಾ ಹಾಗೂ ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವೆಂಕಟ ಸತೀಶ್ ಕಿಲಾರು ನಿರ್ಮಿಸಿರುವ ಈ ಸಿನಿಮಾ ಜೂನ್ 4, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ವಿಭಿನ್ನ ಮತ್ತು ಸವಾಲಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕ್ರಿಕೆಟಿಗ, ಕುಸ್ತಿಪಟು ಹಾಗೂ ಓಟಗಾರನ ಪಾತ್ರಗಳನ್ನು ಒಂದೇ ವ್ಯಕ್ತಿತ್ವದಲ್ಲಿ ನಿರ್ವಹಿಸುತ್ತಿದ್ದು, ಅಪರೂಪದ ಕ್ರಾಸ್ಒವರ್ ಕ್ರೀಡಾಪಟುವಿನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆಂಧ್ರಪ್ರದೇಶದ ವಿಜಯನಗರ ಹಿನ್ನೆಲೆಯ ಕಥೆಯಲ್ಲಿ ಪೆದ್ದಿ ಎಂಬ ಪ್ರತಿಭಾವಂತ ಕ್ರೀಡಾಪಟು ತನ್ನ ಕ್ರೀಡಾ ಸಾಮರ್ಥ್ಯದ ಮೂಲಕ ಬದುಕಿನಲ್ಲಿ ಮುಂದೆ ಸಾಗುವ ಪ್ರಯತ್ನವನ್ನು ಚಿತ್ರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಟ್ರೇಲರ್ ಬಿಡುಗಡೆಯಾದ ಬಳಿಕ ‘ಪೆದ್ದಿ’ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಕ್ರೀಡೆ, ಭಾವನೆ, ಹೋರಾಟ ಮತ್ತು ಯಶಸ್ಸಿನ ಕಥೆಯನ್ನು ಒಳಗೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರದ ಕುರಿತು ಚರ್ಚೆಗಳು ಮತ್ತಷ್ಟು ಜೋರಾಗುತ್ತಿದ್ದು, ಈಗ ವೈರಲ್ ಆಗಿರುವ ವಿಜಯವಾಡ ಘಟನೆಯೂ ಚಿತ್ರದ ಪ್ರಚಾರಕ್ಕೆ ಹೆಚ್ಚುವರಿ ಗಮನ ಸೆಳೆದಿದೆ.
Bangalore [Bangalore],Bangalore,Karnataka













