Last Updated:
Padma Awards 2026: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ನೇ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀಯನ್ನ ಮೊದಲ ಹಂತದಲ್ಲಿ ವಿವಿಧ ಕ್ಷೇತ್ರದ 66 ಮಹಾನ್ ಸಾಧಕರಿಗೆ ಪ್ರದಾನ ಮಾಡಿ ಗೌರವಿಸಿದರು. ಆ ಕುರಿತ ವರದಿ ಇಲ್ಲಿದೆ.
Padma Awards 2026: ಸಾಧನೆ ಅಂದ್ರೆ ಕ್ರಿಕೆಟ್ ಸೆಂಚುರಿ ಅಲ್ಲ, ಸಿನಿಮಾ 100 ಕೋಟಿ ಕ್ಲಬ್ ಅಲ್ಲ. ಸಾಧನೆ ಅಂದ್ರೆ ಕ್ಯಾಮೆರಾ, ಲೈಕ್, ಶೇರ್ ಇಲ್ಲದೇ ಮೂಲೆಗುಂಪಾದ ಹಳ್ಳಿಯಲ್ಲಿ, ಕಾಡಿನ ನಡುವೆ, ಬೀದಿಯೊಂದರಲ್ಲಿ ಸಮಾಜಕ್ಕಾಗಿ ಸದ್ದಿಲ್ಲದೆ ದುಡಿಯುವುದು. ಅಂತಹ ಸದ್ದಿಲ್ಲದ ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮ ಪ್ರಶಸ್ತಿ (Padma Awards) ಸಿಕ್ಕಿದೆ. ಅದರಂತೆ, ದೆಹಲಿಯ (Delhi) ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ರಾಷ್ಟ್ರಪತಿ (Rashtrapati) ದ್ರೌಪದಿ ಮುರ್ಮು (Draupadi Murmu) ಅವರು 2026ನೇ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀಯನ್ನ ಮೊದಲ ಹಂತದಲ್ಲಿ ವಿವಿಧ ಕ್ಷೇತ್ರದ 66 ಮಹಾನ್ ಸಾಧಕರಿಗೆ ಪ್ರದಾನ ಮಾಡಿ ಗೌರವಿಸಿದರು. ಆ ಕುರಿತ ವರದಿ ಇಲ್ಲಿದೆ.
ಕೇಂದ್ರ ಸರ್ಕಾರ 2026ನೇ ಸಾಲಿಗೆ ಘೋಷಿಸಿದ್ದ ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಮೇ 25ರಂದು ನಡೆದ ಮೊದಲ ಹಂತದ ಸಮಾರಂಭದಲ್ಲಿ 66 ಮಂದಿಗೆ ಪ್ರಶಸ್ತಿ ವಿತರಿಸಲಾಯಿತು. ಇದರಲ್ಲಿ 2 ಪದ್ಮವಿಭೂಷಣ, 6 ಪದ್ಮಭೂಷಣ ಮತ್ತು 58 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಉಳಿದ ಪ್ರಶಸ್ತಿಗಳನ್ನು ಮುಂದಿನ ಹಂತದಲ್ಲಿ ನೀಡಲಾಗುವುದು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಬಾಲಿವುಡ್ ದಂತಕಥೆ ದಿವಂಗತ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಅವರ ಪರವಾಗಿ ಪತ್ನಿ ಹಾಗೂ ಸಂಸದೆ ಹೇಮಾ ಮಾಲಿನಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಧರ್ಮೇಂದ್ರ ಅವರ ದಶಕಗಳ ಚಿತ್ರರಂಗದ ಕೊಡುಗೆ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಅತ್ಯುನ್ನತ ಗೌರವ ನೀಡಲಾಗಿದೆ.
ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮಮ್ಮುಟ್ಟಿ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಅವರಿಗೆ ಕಲಾ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದರೊಂದಿಗೆ, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್, ಗ್ಯಾಸ್ಟೋಎಂಟರಾಲಜಿಸ್ಟ್ ಕಳ್ಳಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ ಅವರಿಗೆ ಪದ್ಮಭೂಷಣ ಪ್ರದಾನ ಮಾಡಿದರು. ಇನ್ನೂ, ಜಾಹೀರಾತು ಲೋಕಕ್ಕೆ ವಿಶೇಷ ಮೆರಗು ತುಂಬಿದ್ದ ಪದ್ಮಶ್ರೀ ಪಿಯೂಷ್ ಪಾಂಡೆ ಮತ್ತು ಮಾಹಿ ಸಂಸದ ವಿಜಯ್ ಕುಮಾರ್ ಮಲ್ಲೋತ್ರಾ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಯಿತು. ಪಾಂಡೆ ಅವರ ಪತ್ನಿ ಮತ್ತು ಮಲ್ನೋತ್ರಾ ಅವರ ಮಗ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕದ ಶತಾವಧಾನಿ ಆರ್. ಗಣೇಶ್ ಅವರಿಗೆ ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಶ್ರೇಷ್ಠ ಕೊಡುಗೆಗಳಿಗಾಗಿ ಪದ್ಮಭೂಷಣ ಪ್ರಶಸ್ತಿ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಅಂಕೇ ಗೌಡ ಎಂ, ಸಮಾಜ ಸೇವೆ ಕ್ಷೇತ್ರದಲ್ಲಿ ಎಸ್. ಜಿ. ಸುಶೀಲಮ್ಮ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಟಿ. ಟಿ. ಜಗನ್ನಾಥನ್ (ಮರಣೋತ್ತರ) ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಂದುವರೆದು, ಈ ಪ್ರತಿಷ್ಠಿತ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಹಲವಾರು ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಏತನ್ಮಧ್ಯೆ, 2026ನೇ ಸಾಲಿನಲ್ಲಿ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಎರಡು ಪ್ರತ್ಯೇಕ ಸಮಾರಂಭಗಳಲ್ಲಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ ಐವರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮ ಭೂಷಣ ಮತ್ತು 113 ಮಂದಿಗೆ ಪದ್ಮಶ್ರೀ ಘೋಷಣೆಯಾಗಿದೆ.
New Delhi,Delhi













