Last Updated:
1993ರ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಗಡಿಭಾಗದಲ್ಲಿ ಎರಡೂ ಕಡೆಯ ಸೇನೆಗಳು ಸೀಮಿತ ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜಿಸಬಹುದು. ಆದರೆ, ಮೇ ತಿಂಗಳಿನಿಂದ ಚೀನಾ ಈ ಒಪ್ಪಂದದ ನಿಯಮ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ತುಕಡಿಗಳನ್ನ ಜಮಾವಣೆ ಮಾಡಿದೆ ಎಂಬುದು ಭಾರತದ ಆರೋಪ.
ನವದೆಹಲಿ(ಜೂನ್ 25): ಮೇ ತಿಂಗಳಿನಿಂದಲೂ ಲಡಾಖ್ನ ಗಡಿಭಾಗದಲ್ಲಿ ಚೀನಾ ದೊಡ್ಡ ಸಂಖ್ಯೆಯಲ್ಲಿ ಸೇನಾ ತುಕಡಿಗಳನ್ನ ಸೇರಿಸಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ. ಇದರಿಂದ ಎರಡೂ ಸೇನೆಗಳ ಸೈನಿಕರ ಮಧ್ಯೆ ಘರ್ಷಣೆಯಾಗಿ 20 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿಕೆ ನೀಡಿದೆ.
ಇಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, 1993ರ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಗಡಿಭಾಗದಲ್ಲಿ ಎರಡೂ ಕಡೆಯ ಸೇನೆಗಳು ಸೀಮಿತ ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜಿಸಬಹುದು. ಆದರೆ, ಮೇ ತಿಂಗಳಿನಿಂದ ಚೀನಾ ಈ ಒಪ್ಪಂದದ ನಿಯಮ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ತುಕಡಿಗಳನ್ನ ಜಮಾವಣೆ ಮಾಡಿದೆ ಎಂದಿದ್ದಾರೆ.
ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತ ಮಾಮೂಲಿಯಾಗಿ ಮಾಡಿಕೊಂಡು ಬರುತ್ತಿದ್ದ ಗಸ್ತು ಪ್ರಕ್ರಿಯೆಗೆ ಚೀನಾ ಭಂಗ ಬರುವಂತ ಕಾರ್ಯಗಳನ್ನ ಮಾಡಿದೆ. ಮೇ ಮಧ್ಯಭಾಗದಲ್ಲಿ ಪಶ್ಚಿಮ ಸೆಕ್ಟರ್ನ ಇತರ ಪ್ರದೇಶಗಳಲ್ಲೂ ಗಡಿ ಸ್ಥಿತಿ ಬದಲಾವಣೆಗೆ ಪ್ರಯತ್ನಿಸಿದೆ. ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಚೀನಾವೇ ಜವಾಬ್ದಾರಿ ಎಂದು ವಿದೇಶಾಂಗ ಇಲಾಖೆ ಆರೋಪಿಸಿದೆ.
“ರಾಜತಾಂತ್ರಿಕ ಮತ್ತು ಮಿಲಿಟರಿ ವೇದಿಕೆಗಳ ಮೂಲಕ ನಾವು ಚೀನೀಯರ ಕ್ರಮಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದೆವು. ಇಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ನಾನು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆವು” ಎಂದು ಅನುರಾಗ್ ಶ್ರೀವಾಸ್ತವ ತಿಳಿಸಿದ್ಧಾರೆ.
Jun 25, 2020 10:39 PM IST













