Last Updated:
2013 ರ ಐಪಿಎಲ್ ಋತುವಿನಲ್ಲಿ ಇಬ್ಬರು ಆಟಗಾರರು ಮೈದಾನದಲ್ಲಿಯೇ ವಾಗ್ವಾದ ನಡೆಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿತ್ತು. ಅದಕ್ಕೆ ಕಾರಣವೇನು ಎಂದು ಅಂದಿನ ಅಂಪೈರ್ ಬಹಿರಂಗಪಡಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli ಮತ್ತು ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ನಡುವಿನ ಜಗಳದ ಬಗ್ಗೆ ತಿಳಿದಿಲ್ಲದ ಒಬ್ಬ ಕ್ರಿಕೆಟ್ ಅಭಿಮಾನಿಯೂ ಇರಲು ಸಾಧ್ಯವಿಲ್ಲ. 13 ವರ್ಷಗಳ ಹಿಂದೆ ಐಪಿಎಲ್ನಲ್ಲಿ ಪ್ರಾರಂಭವಾದ ಅವರ ನಡುವಿನ ವೈಮನಸ್ಸು, 2023 ರ ಋತುವಿನವರೆಗೂ ಒಂದಲ್ಲ ಒಂದು ರೂಪದಲ್ಲಿ ಮುಂದುವರೆಯುತ್ತಲೇ ಇದೆ. 2013 ರ ಐಪಿಎಲ್ ಋತುವಿನಲ್ಲಿ ಇಬ್ಬರು ಆಟಗಾರರು ಮೈದಾನದಲ್ಲಿಯೇ ವಾಗ್ವಾದ ನಡೆಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿತ್ತು.
ಆ ಸಮಯದಲ್ಲಿ, ಗಂಭೀರ್ ಕೆಕೆಆರ್ ತಂಡದ ನಾಯಕರಾಗಿದ್ದರು, ಅದೇ ರೀತಿ ಕೊಹ್ಲಿ ಆರ್ಸಿಬಿಯನ್ನು ಮುನ್ನಡೆಸುತ್ತಿದ್ದರು. ಪಂದ್ಯದ ಸಮಯದಲ್ಲಿ, ಕೊಹ್ಲಿ ಔಟಾದ ತಕ್ಷಣ ಗಂಭೀರ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಆ ಕ್ಷಣದ ಗಂಭೀರ್ ಬಾಯಿಯಿಂದ ಕೆಲವು ಮಾತುಗಳು ಕೊಹ್ಲಿಯನ್ನು ಕೆರಳಿಸಿತು. ಕೊಹ್ಲಿ ಪೆವಿಲಿಯನ್ ಕಡೆಗೆ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ವಾಪಸ್ ಬಂದು ಗಂಭೀರ್ ಜೊತೆ ತೀವ್ರ ವಾಗ್ವಾದ ನಡೆಸಿದರು. ಆ ಸಮಯದಲ್ಲಿ ದೆಹಲಿ ಆಟಗಾರ ರಜತ್ ಭಾಟಿಯಾ ಇಬ್ಬರನ್ನು ಬೇರ್ಪಡಿಸಲು ಮುಂದಾದರು. ಈ ಘಟನೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಕ್ಷಣಗಳಲ್ಲಿ ಒಂದಾಗಿದೆ.
ಆ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಅನಿಲ್ ಚೌಧರಿ ಇತ್ತೀಚೆಗೆ ಈ ಘಟನೆಯನ್ನು ನೆನಪಿಸಿಕೊಂಡರು. ಜಿಯೋಸ್ಟಾರ್ ಶೋ ‘ಚೀಕಿ ಸಿಂಗಲ್ಸ್’ ನಲ್ಲಿ ಮಾತನಾಡುತ್ತಾ, ಅವರು ವಾಗ್ವಾದದ ಬಗ್ಗೆ ಕೆಲವು ಇಂಟರೆಸ್ಟಿಂಗ್ ಕಮೆಂಟ್ಗಳನ್ನು ಮಾಡಿದರು. ಪಂದ್ಯದ ವೇಳೆ ಅಂತಹ ಘಟನೆಗಳಿಲ್ಲದೆ ಆಟದಲ್ಲಿ ಎಂಜಾಯ್ ಇರುವುದಿಲ್ಲ ಎಂದು ಚೌಧರಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿಯಾಗಿದ್ದರೂ, ಅವರು ಯಾವುದೇ ದುರುದ್ದೇಶವನ್ನು ಹೊಂದಿರಲಿಲ್ಲ ಮತ್ತು ಅವರು ತಪ್ಪು ಮಾಡಿದ್ದಾರೆಂದು ಅರಿತುಕೊಂಡರೆ ಸ್ವತಃ ಹಿಂದೆ ಸರಿಯುತ್ತಾರೆ ಎಂದು ತಿಳಿಸಿದ್ದಾರೆ.
” ಕೊಹ್ಲಿ-ಗಂಭೀರ್ ಜಗಳದಂತಹ ಘಟನೆ ಕ್ರಿಕೆಟ್ನಲ್ಲಿ ಖಂಡಿತ ಸಂಭವಿಸುತ್ತದೆ ಎಂದು ನನಗೆ ತಿಳಿದಿತ್ತು, ಏಕೆಂದರೆ ಉತ್ತರ ಭಾರತದ ಆಟಗಾರರು ಆಕ್ರಮಣಕಾರಿಗಳಾಗಿರುತ್ತಾರೆ. ನಾನು ಸ್ಥಳೀಯ ಕ್ರಿಕೆಟ್ ಆಡಿದ್ದೇನೆ ಮತ್ತು ನನ್ನ ತಂಡದ ಸದಸ್ಯರು ಕೂಡ ಹಾಗೆಯೇ ಇದ್ದರು. ಅವರು ಆಕ್ರಮಣಕಾರಿಯಾಗಿ ಆಡದಿದ್ದರೆ, ಅವರ ನಿಜವಾದ ಪ್ರತಿಭೆ ಸಂಪೂರ್ಣವಾಗಿ ಹೊರಬರಲ್ಲ. ನೀವು ಆಟಗಾರರನ್ನು ಹೆಚ್ಚು ನಿಯಂತ್ರಿಸಿದರೆ, ಆಟವು ತನ್ನ ಮೋಜನ್ನು ಕಳೆದುಕೊಳ್ಳುತ್ತದೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇದೆ. ಯಾರೇ ಆದರೂ ಆ ಗಡಿಯನ್ನ ದಾಟಬಾರದು ಎಂದರು.
ವಿರಾಟ್ ಕೊಹ್ಲಿಯನ್ನು ನಾನು ಬಾಲ್ಯದಿಂದಲೂ ಬಲ್ಲೆ, ಅವರು ಚಿಕ್ಕವನಿದ್ದಾಗ ಅವರ ಪಂದ್ಯಗಳನ್ನು ಅಂಪೈರ್ ಮಾಡಿದ್ದೇನೆ, ಆದ್ದರಿಂದ ನಾನು ಅವರನ್ನು ಚೆನ್ನಾಗಿ ಬಲ್ಲೆ. ಅವರು ಎಂದಿಗೂ ಯಾವುದೇ ದುರುದ್ದೇಶವನ್ನು ಹೊಂದಿರಲಿಲ್ಲ. ಕೆಲವೊಮ್ಮೆ ಅವರು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಾರೆ, ಆದರೆ ಅವರು ತಪ್ಪು ಮಾಡಿದ್ದಾರೆಂದು ಅರಿತುಕೊಂಡರೆ, ಅವರು ಹಿಂದೆ ಸರಿಯುತ್ತಾರೆ. ಓವರ್ಗಳ ನಡುವೆ, ಅವರು ಬಂದು ಭುಜದ ಮೇಲೆ ಕೈ ಹಾಕಿ ಸಲುಗೆಯಿಂದ ಮಾತನಾಡುತ್ತಾರೆ. ಅವರು ಯಾವಾಗಲೂ ಎನರ್ಜಿಯಿಂದ ತುಂಬಿರುತ್ತಾರೆ. ಅವರಂತಹ ಆಟಗಾರರಿಲ್ಲದೆ ಆಟ ನೀರಸವಾಗಿರುತ್ತದೆ ” ಎಂದು ಅನಿಲ್ ಚೌಧರಿ ಹೇಳಿದ್ದಾರೆ.
2013ರ ಘಟನೆ ನಡೆದ ನಂತರ ಐಪಿಎಲ್ 2023 ರ ಋತುವಿನಲ್ಲಿ ಆರ್ಸಿಬಿ ಲಖನೌ ಸೂಪರ್ ಜೈಂಟ್ಸ್ ಪಂದ್ಯದ ಈ ಘಟನೆ ಮರುಕಳಿಸಿತ್ತು. ಆ ಪಂದ್ಯದ ನಂತರ, ಕೊಹ್ಲಿ ಲಖನೌ ವೇಗಿ ನವೀನ್-ಉಲ್-ಹಕ್ ಅವರೊಂದಿಗೆ ಕೈಕುಲುಕಲಿಲ್ಲ. ಪಂದ್ಯದ ನಂತರ, ಕೊಹ್ಲಿ ಲಖನೌದ ಮತ್ತೊಬ್ಬ ಆಟಗಾರನೊಂದಿಗೆ ಮಾತನಾಡುತ್ತಿರುವಾಗ, ತಂಡದ ಮೆಂಟರ್ ಗಂಭೀರ್ ಅವರನ್ನು ದೂರವಿಡಲು ಪ್ರಯತ್ನಿಸಿದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಲಖನೌ ನಾಯಕರಾಗಿದ್ದ ಕೆಎಲ್ ರಾಹುಲ್ ಅವರನ್ನು ಬೇರ್ಪಡಿಸಲು ಮಧ್ಯಪ್ರವೇಶಿಸಿದರು. ಆಗ ಈ ಘಟನೆ ತೀವ್ರ ಚರ್ಚೆಗೆ ನಾಂದಿ ಹಾಡಿತ್ತು. ಪ್ರಸ್ತುತ, ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವುದರಿಂದ, ಅವರ ಮತ್ತು ಕೊಹ್ಲಿ ನಡುವೆ ಬಿರುಕು ಉಂಟಾಗಿದೆ ಎಂದು ಸೂಚಿಸುವ ಇತ್ತೀಚಿನ ವರದಿಗಳು ಹರಡುತ್ತಲೇ ಇವೆ. ಆದರೆ ಇಬ್ಬರೂ ಇದುವರೆಗೂ ಅದನ್ನ ಬಹಿರಂಗವಾಗಿ ಹೊರ ಹಾಕಿಲ್ಲ.
Aug 03, 2026 10:55 PM IST














