Last Updated:
Twisha Sharma Case: ಕೋರ್ಟ್ನಲ್ಲಿ ಶರಣಾಗುವ ನಾಟಕವಾಡಿದ ಮೃತ ತ್ವಿಷಾ ಪತಿ; ಕೊನೆಗೂ ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್, ಬಂಧನದ ಬೆನ್ನಲ್ಲೇ ಬಾರ್ ಕೌನ್ಸಿಲ್ನಿಂದ ಸಮರ್ಥ ಲೈಸೆನ್ಸ್ ರದ್ದು, ತನಿಖೆ CBI ಹೆಗಲಿಗೆ.
ಜಬಲ್ಪುರ್ (ಮಧ್ಯಪ್ರದೇಶ): ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್ (Samarth Singh) ಇದ್ದಕ್ಕಿದ್ದಂತೆ ಜಬಲ್ಪುರ್ ನ್ಯಾಯಾಲಯದಲ್ಲಿ (Jabalpur Court) ಹಾಜರಾಗಿ ಶರಣಾಗುವ ನಾಟಕ ಸೃಷ್ಟಿಸಿದ್ದಾನೆ. ಮತ್ತೊಂದೆಡೆ, ಶರಣಾಗುವ ನಾಟಕವಾಡಿದ ಸಮರ್ಥ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council of India) ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ.
ಮೇ 12 ರಂದು ಭೋಪಾಲ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ ಶವ ಪತ್ತೆಯಾಗಿತ್ತು. ಇದಾದ ನಂತರ ಅಂದರೆ, ಕಳೆದ 10 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್ ಇದ್ದಕ್ಕಿದ್ದಂತೆ ಇಂದು ಜಬಲ್ಪುರ್ ನ್ಯಾಯಾಲಯದಲ್ಲಿ ಪ್ರತ್ಯಕ್ಷನಾಗಿದ್ದ. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ‘ಶರಣಾಗುವ ನಾಟಕ’ ಶುರುಮಾಡಿದ.
ಏತನ್ಮಧ್ಯೆ, ಈ ಪ್ರಕರಣವು ಕೇವಲ ಒಂದು ಆತ್ಮಹತ್ಯೆಯಾಗಿ ಉಳಿದಿಲ್ಲ. ಯಾಕಂದರೆ, ತ್ವಿಷಾ ಶರ್ಮಾ ಸಾವಿನ ಸುತ್ತ ಹಲವು ಅನುಮಾನಗಳಿದ್ದು, ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ಲೋಪದೋಷಗಳಿರಬಹುದೆಂಬ ಶಂಕೆಯಿಂದ ಮಧ್ಯಪ್ರದೇಶ ಹೈಕೋರ್ಟ್, ದೆಹಲಿಯ ಏಮ್ಸ್ ವೈದ್ಯರ ನೇತೃತ್ವದಲ್ಲಿ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಮತ್ತೊಂದೆಡೆ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ವೃತ್ತಿಯಲ್ಲಿ ವಕೀಲನಾಗಿರುವ ಸಮರ್ಥ್ ಸಿಂಗ್ ಪರ, ಯಾವುದೇ ವಕೀಲರು ವಾದ ಮಂಡಿಸಬಾರದು ಎಂದು ಜಬಲ್ಪುರದ ಜಿಲ್ಲಾ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ಮತ್ತೊಂದೆಡೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಸಮರ್ಥ್ ಸಿಂಗ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ತಕ್ಷಣದಿಂದ ಅನ್ವಯವಾಗುವಂತೆ ಅಮಾನತು ಆದೇಶ ಹೊರಡಿಸಿದೆ. ಅದರಂತೆ, ಅಮಾನತು ಅವಧಿಯಲ್ಲಿ ಸಮರ್ಥ್ ಸಿಂಗ್ ಅವರು ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ವಕೀಲರಾಗಿ ಹಾಜರಾಗುವಂತಿಲ್ಲ.
33 ವರ್ಷದ ತ್ವಿಷಾ ಶರ್ಮಾ ಮೇ 12ರಂದು ಭೋಪಾಲ್ನ ಅರೆರಾ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೃತರ ಕುಟುಂಬಸ್ಥರು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದು, ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ.
ಈ ಸಂಬಂಧ ಸಮರ್ಥ್ ಸಿಂಗ್ ಮತ್ತು ಆತನ ತಾಯಿ, ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೂ, ಘಟನೆಯ ನಂತರ ಸಮರ್ಥ್ ನಾಪತ್ತೆಯಾಗಿದ್ದರಿಂದ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಿದವರಿಗೆ 30,000 ರೂಪಾಯಿ ಬಹುಮಾನ ಘೋಷಿಸಿದ್ದರು. ಅಲ್ಲದೆ, ಆತ ವಿದೇಶಕ್ಕೆ ಪರಾರಿಯಾಗದಂತೆ ಪಾಸ್ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯನ್ನೂ ಸಹ ಆರಂಭಿಸಲಾಗಿತ್ತು.
Bhopal,Madhya Pradesh
May 22, 2026 10:12 PM IST













