Last Updated:
EAM S Jaishankar Mark Rubio Talks: ಹಡಗುಗಳ ಮೇಲಿನ ದಾಳಿ ಮತ್ತು ಸಮುದ್ರದಲ್ಲಿ ಭಾರತೀಯರ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ನೇರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರ ಜೊತೆ ಈ ವಿಷಯವನ್ನು ಖಂಡಿಸಿದ್ದಾರೆ.
ನವದೆಹಲಿ: ಪಶ್ಚಿಮ ಏಷ್ಯಾ ಇನ್ನೂ (Middle East Crisis) ಯುದ್ಧದ ಬೆಂಕಿಯಲ್ಲಿ ಉರಿಯುತ್ತಿದೆ. ಇರಾನ್ ಅಮೆರಿಕಾ ನಡುವಿನ ಯುದ್ಧದಿಂದಾಗಿ ಹಾರ್ಮುಜ್ನಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದೆ. ಹಾರ್ಮುಜ್ನಲ್ಲಿರುವ ಹಡಗುಗಳು ಅಪಾಯದಲ್ಲಿವೆ. ಭಾರತೀಯ ನಾವಿಕರನ್ನು ಕರೆದೊಯ್ಯುತ್ತಿದ್ದ ಹಡಗಿನ ಮೇಲಿನ ದಾಳಿ (S Jaishankar-Mark Rubio) ಇದಕ್ಕೆ ಉದಾಹರಣೆಯಾಗಿದೆ.
ಇತ್ತೀಚೆಗೆ, ಓಮನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರನ್ನು ಕರೆದೊಯ್ಯುತ್ತಿದ್ದ ತೈಲ ಟ್ಯಾಂಕರ್ ಮೇಲೆ ಅಮೆರಿಕ ದಾಳಿ ಮಾಡಿತ್ತು. ಯುಎಸ್ ನೌಕಾಪಡೆಯ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ಈ ಘಟನೆಯ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಭಾರತ ಅಮೆರಿಕವನ್ನು ಖಂಡಿಸಿದ್ದಲ್ಲದೆ, ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಹಡಗುಗಳ ಮೇಲಿನ ದಾಳಿ ಮತ್ತು ಸಮುದ್ರದಲ್ಲಿ ಭಾರತೀಯರ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ನೇರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರ ಜೊತೆ ಈ ವಿಷಯವನ್ನು ಖಂಡಿಸಿದ್ದಾರೆ ಎಂದು ನ್ಯೂಸ್ 18 ಹಿಂದಿ ವರದಿ ಮಾಡಿದೆ.
ಓಮನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್ ಮೇಲೆ ಅಮೆರಿಕ ನೌಕಾಪಡೆ ದಾಳಿ ನಡೆಸಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ನಂತರ ಭಾರತ ಅಮೆರಿಕದೊಂದಿಗೆ ಬಲವಾದ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯವನ್ನು ನೇರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಪ್ರಸ್ತಾಪಿಸಿದ್ರು. ಶನಿವಾರ ಮುಂಜಾನೆ ದೂರವಾಣಿ ಕರೆಯಲ್ಲಿ, ಜೈಶಂಕರ್ ಮಾರ್ಕೊ ರುಬಿಯೊ ಅವರಿಗೆ ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇಂತಹ ಮಾರಕ ದಾಳಿಗಳು ನ್ಯಾಯಸಮ್ಮತವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮೂವರು ಭಾರತೀಯ ನಾವಿಕರ ಸಾವಿನ ವಿಷಯವನ್ನು ಅಮೆರಿಕದೊಂದಿಗೆ ಪ್ರಸ್ತಾಪಿಸಿದರು. ಈ ಬಗ್ಗೆ ಅವರು ಎಕ್ಸ್ನಲ್ಲಿ ಮಾರ್ಕೊ ರೂಬಿಯೊ ಅವರ ಹೆಸರನ್ನು ಉಲ್ಲೇಖಿಸಿ, ‘ಇಂದು ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡಿದೆ. ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ದಾಳಿಯಲ್ಲಿ ಮೂವರು ಭಾರತೀಯ ನಾವಿಕರ ಸಾವಿಗೆ ಭಾರತದ ಬಲವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದೇವೆ. ವಾಣಿಜ್ಯ ಹಡಗುಗಳ ಮೇಲೆ ಇಂತಹ ಮಾರಕ ದಾಳಿಗಳು ನ್ಯಾಯಸಮ್ಮತವಲ್ಲ’ ಎಂದು ಬರೆದಿದ್ದಾರೆ. ಈ ಘಟನೆಗಳು ಸ್ವೀಕಾರಾರ್ಹವಲ್ಲ ಎಂದು ಕರೆದ ಜೈಶಂಕರ್, ವಾಣಿಜ್ಯ ಸಾಗಣೆಯನ್ನು ಅಂತಹ ಕ್ರಮಗಳಿಗೆ ಒಳಪಡಿಸಬಾರದು ಎಂದು ಹೇಳಿದರು.
ದಾಳಿಯ ನಂತರ ಕಾಣೆಯಾದ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ದೃಢಪಡಿಸಿದ ನಂತರ ಎಸ್. ಜೈಶಂಕರ್ ಅವರು ಅಮೆರಿಕಾದ ದಾಳಿಯನ್ನು ಖಂಡಿಸಿದ್ದಾರೆ. ಹಡಗು ಸಚಿವ ಸರ್ಬಾನಂದ ಸೋನೋವಾಲ್ ಸಾವುಗಳನ್ನು ದೃಢಪಡಿಸಿದರು. ಅವರು ಸಾವುಗಳನ್ನು ‘ದುರಂತ’ ನಷ್ಟ ಎಂದು ಕರೆದರು.
ಕಾಣೆಯಾದ ನಾವಿಕರ ಶವಗಳನ್ನು ಪತ್ತೆಹಚ್ಚಲಾಗಿದೆ. ಮೃತರನ್ನು ಡೆಕ್ ಕೆಡೆಟ್ ಆದಿತ್ಯ ಶರ್ಮಾ, ಎಂಜಿನ್ ಫಿಟ್ಟರ್ ಶಿವಾನಂದ್ ಚೌರಾಸಿಯಾ ಮತ್ತು ಮುಖ್ಯ ಎಂಜಿನಿಯರ್ ಪಟ್ನಾಲ ಸುರೇಶ್ ಎಂದು ಗುರುತಿಸಲಾಗಿದೆ.
ಓಮನ್ ಕೊಲ್ಲಿಯಲ್ಲಿ ಅಮೆರಿಕ ದಾಳಿ ಮಾಡಿದ ಹಡಗು ಪಲಾವ್ ಧ್ವಜ ಹೊತ್ತ ತೈಲ ಟ್ಯಾಂಕರ್ ಆಗಿತ್ತು. ದಾಳಿಯ ಸಮಯದಲ್ಲಿ ಪಲಾವ್ ಧ್ವಜ ಹೊತ್ತ ತೈಲ ಟ್ಯಾಂಕರ್, ಸೆಟ್ಟೆಬೆಲ್ಲೊದಲ್ಲಿ 28 ಸದಸ್ಯರ ಸಿಬ್ಬಂದಿ ಇದ್ದರು. ಇದರಲ್ಲಿ 24 ಭಾರತೀಯರು ಮತ್ತು ಇಬ್ಬರು ಪಾಕಿಸ್ತಾನಿಗಳು, ಒಬ್ಬ ಉಕ್ರೇನಿಯನ್ ಮತ್ತು ಒಬ್ಬ ರಷ್ಯನ್ ಸೇರಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದ್ದಾರೆ. ಘಟನೆಯ ನಂತರ, 21 ಭಾರತೀಯ ನಾವಿಕರನ್ನು ರಕ್ಷಿಸಲಾಯಿತು, ಆದರೆ ಕಾಣೆಯಾದ ಸಿಬ್ಬಂದಿಗಾಗಿ ಹುಡುಕಾಟ ಮುಂದುವರೆಯಿತು ಮತ್ತು ಅವರ ಸಾವುಗಳನ್ನು ನಂತರ ದೃಢಪಡಿಸಲಾಯಿತು.
ಈತನ್ಮಧ್ಯೆ, ಟ್ಯಾಂಕರ್ ಮೇಲೆ ದಾಳಿ ಮಾಡಿದ್ದಾಗಿ ಅಮೆರಿಕ ಸೇನೆ ಒಪ್ಪಿಕೊಂಡಿದೆ. ಅಮೆರಿಕ ಸೆಂಟ್ರಲ್ ಕಮಾಂಡ್ ಪ್ರಕಾರ, ಅಮೆರಿಕದ ನೌಕಾ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದ ಕಾರಣ ಮತ್ತು ಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್ನಿಂದ ತೈಲ ಸಾಗಿಸಲು ಪ್ರಯತ್ನಿಸುತ್ತಿದ್ದ ಕಾರಣ ಅಮೆರಿಕ ಪಡೆಗಳು ಟ್ಯಾಂಕರ್ ಅನ್ನು ಗುರಿಯಾಗಿಸಿಕೊಂಡಿವೆ. ಅಮೆರಿಕದ ಪಡೆಗಳ ಸೂಚನೆಗಳನ್ನು ಸಿಬ್ಬಂದಿ ಪದೇ ಪದೇ ಪಾಲಿಸದ ಕಾರಣ ತನ್ನ ವಿಮಾನವೊಂದು ಒಮಾನ್ ಕೊಲ್ಲಿಯಲ್ಲಿ ಹಡಗಿನ ಮೇಲೆ ದಾಳಿ ಮಾಡಿದೆ ಎಂದು ಕೇಂದ್ರ ಕಮಾಂಡ್ ಹೇಳಿಕೆ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ವಿಧಿಸಲಾದ ವಿವಿಧ ಸಮುದ್ರ ನಿರ್ಬಂಧಗಳಿಂದಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ವಾಣಿಜ್ಯ ಸಾಗಣೆಗೆ ತೀವ್ರ ತೊಂದರೆಯಾಗಿರುವ ಸಮಯದಲ್ಲಿ ಈ ದಾಳಿ ನಡೆದಿದೆ.
New Delhi,Delhi
Jun 13, 2026 10:27 AM IST













