Last Updated:
ಟಾಸ್ ಗೆದ್ದಿದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 12 ಅಥವಾ 13ನೇ ಓವರ್ ವರೆಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿತ್ತು. ಆರ್ಸಿಬಿಯನ್ನ 200ರೊಳಗೆ ಕಟ್ಟಿ ಹಾಕುವ ಅವಕಾಶವೂ ಇತ್ತು. ಆದರೆ ಫೀಲ್ಡರ್ ಮಾಡಿದ ತಪ್ಪಿನಿಂದ 250ರ ಗಡಿ ದಾಟುವಂತೆ ಮಾಡಿತು.
ಐಪಿಎಲ್ 2026ರ (IPL) ಕ್ವಾಲಿಫೈಯರ್ 1 (Qualifiers) ಪಂದ್ಯದಲ್ಲಿ ಆರ್ಸಿಬಿ 92 ರನ್ಗಳ ಭಾರೀ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಆರ್ಸಿಬಿ 254 ರನ್ಗಳಿಸಿದರೆ, ಗುಜರಾತ್ ಟೈಟನ್ಸ್ (Gujarat Titans) ಕೇವಲ 162 ರನ್ಗಳಿಸಿ ಹೀನಾಯ ಸೋಲು ಕಂಡಿತು. ಆದರೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ (Shubman gill) ತಮ್ಮ ತಂಡ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು, ಇದಕ್ಕೆ ಕಾರಣ ಕಳಪೆ ಫೀಲ್ಡಿಂಗ್ ಎಂದು ಹೇಳಿದ್ದಾರೆ.
ಟಾಸ್ ಗೆದ್ದಿದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 12 ಅಥವಾ 13ನೇ ಓವರ್ ವರೆಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿತ್ತು. ಆರ್ಸಿಬಿಯನ್ನ 200ರೊಳಗೆ ಕಟ್ಟಿ ಹಾಕುವ ಅವಕಾಶವೂ ಇತ್ತು. ಆದರೆ ನಿರ್ಣಾಯಕ ಹಂತದಲ್ಲಿ ಕ್ಯಾಚ್ಗಳನ್ನು ಕೈಬಿಟ್ಟಿದ್ದಕ್ಕಾಗಿ ಸರಿಯಾದ ಬೆಲೆಯನ್ನೇ ತೆತ್ತಿತು. ರಜತ್ ಪಾಟೀದಾರ್ ಕೇವಲ 21 ರನ್ಗಳಿಸಿದ್ದ ವೇಳೆ ಗುಜರಾತ್ ತಂಡ ಒಂದೇ ಓವರ್ನಲ್ಲಿ 2 ಕ್ಯಾಚ್ ಕೈಚೆಲ್ಲಿತು. ಇದರ ಲಾಭ ಪಡೆದ ರಜತ್ ಅಜೇಯ 93 ರನ್ ಚಚ್ಚಿದರು. ಪಾಟೀದಾರ್ ಜೀವದಾನ ಪಡೆದ ನಂತರ ಮುಂದಿನ 20 ಎಸೆತಗಳಲ್ಲಿ 72 ರನ್ ಚಚ್ಚಿದರು. ಹಾಗಾಗಿ ಶುಭ್ಮನ್ ಗಿಲ್ ತಮ್ಮ ತಂಡದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ ನಂತರ ಸೋಲಿನ ಬಗ್ಗೆ ಮಾತನಾಡಿದ ಶುಭ್ಮನ್ ಗಿಲ್, ದುರದೃಷ್ಟವಶಾತ್, ಈ ದಿನ ನಮಗೆ ಏನೂ ಸರಿಬರಲಿಲ್ಲ. ಈ ಸೋಲನ್ನ ಸಾಧ್ಯವಾದಷ್ಟು ಮರೆತು, ಕ್ವಾಲಿಫೈಯರ್ 2ಕ್ಕೆ ಸಿದ್ಧರಾಗಲು ಎದುರು ನೋಡುತ್ತೇವೆ. ತಂಡ ಆಡಿದ ರೀತಿ ನಮಗೆ ಆಶ್ಚರ್ಯವಾಗಲಿಲ್ಲ. ನಾವು 12 ಅಥವಾ 13 ನೇ ಓವರ್ ವರೆಗೆ ಚೆನ್ನಾಗಿ ಬೌಲಿಂಗ್ ಮಾಡಿದೆವು. ಆದರೆ ಇಂದು ನಮ್ಮ ಫೀಲ್ಡಿಂಗ್ ನಿರೀಕ್ಷಿತ ಗುಣಮಟ್ಟಕ್ಕೆ ಹತ್ತಿರವಾಗಲಿಲ್ಲ. ನಾವು ಕೆಲವು ಕ್ಯಾಚ್ಗಳನ್ನು ಬಿಟ್ಟೆವು. ಅಲ್ಲದೆ ಜೊತೆಗೆ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಹಲವಾರು ಬಾರಿ ಸುಲಭವಾಗಿ ರನ್ಗಳನ್ನ ಬಿಟ್ಟುಕೊಟ್ಟೆವು.
ಗುಜರಾತ್ ಟೈಟನ್ಸ್ ಆಟಗಾರರು ರಜತ್ ಪಾಟಿದಾರ್ 14 ಮತ್ತು 20 ರನ್ಗಳ ವೈಯಕ್ತಿಕ ಸ್ಕೋರ್ಗಳಲ್ಲಿದ್ದಾಗ ನೀಡಿದ ಎರಡು ಕ್ಯಾಚ್ಗಳನ್ನು ಕೈಬಿಟ್ಟರು. ಈ ಡ್ರಾಪ್ ಕ್ಯಾಚ್ಗಳು ಪ್ರಸಿದ್ಧ್ ಕೃಷ್ಣ ಬೌಲಿಂಗ್ ಮಾಡಿದ 14 ನೇ ಓವರ್ನಲ್ಲಿ ಸಂಭವಿಸಿದವು. ಆ ಓವರ್ನ ಮೊದಲ ಎಸೆತದಲ್ಲಿಯೇ, ರಜತ್ ಪಾಟೀದಾರ್ ನೀಡಿದ ಕಠಿಣ ಕ್ಯಾಚ್ ಅನ್ನು ಕುಲ್ವಂತ್ ಕೈಬಿಟ್ಟರು, ಆದರೆ ಮೂರನೇ ಎಸೆತದಲ್ಲಿ – ಇದು ತುಂಬಾ ಸುಲಭವಾದ ಅವಕಾಶವನ್ನ ರಬಾಡ ಕ್ಯಾಚ್ ಹಿಡಿಯಲು ವಿಫಲರಾದರು. ಈ ಅವಕಾಶಗಳನ್ನ ಪಾಟಿದಾರ್ ಎರಡೂ ಕೈಗಳಿಂದ ಬಾಚಿಕೊಂಡು ವಿಧ್ವಂಸ ಸೃಷ್ಟಿಸಿದರು.
” ಈ ಪಂದ್ಯದಿಂದ ನಾವು ಕಲಿಯಬೇಕಾದ ಪಾಠಗಳು ಹಲವಾರಿವೆ. ನಾವು ಈ ಸೋಲನ್ನು ಸಾಧ್ಯವಾದಷ್ಟು ಬೇಗ ಮರೆತು ಕ್ವಾಲಿಫೈಯರ್ 2 ಪಂದ್ಯಕ್ಕೆ ಸಿದ್ಧರಾಗುತ್ತೇವೆ. ತಂಡದ ಸಭೆಯಲ್ಲಿ ನಮ್ಮ ದೋಷಗಳನ್ನು ಚರ್ಚಿಸುತ್ತೇವೆ ಮತ್ತು ನಮ್ಮ ಅಭ್ಯಾಸ ಅವಧಿಗಳಲ್ಲಿಯೂ ನಾವು ಅವುಗಳನ್ನು ಪರಿಹರಿಸಿಕೊಳ್ಳುತ್ತೇವೆ. ಇಂದು ನಮ್ಮ ದಿನವಾಗಿರಲಿಲ್ಲ. ನಮ್ಮ ಉದ್ದೇಶ ಉತ್ತಮವಾಗಿದ್ದರೂ, ಒತ್ತಡವು ನಮ್ಮ ನಿರೀಕ್ಷಿತ ಗುಣಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡದಂತೆ ತಡೆಯಿತು.” ಎಂದರು.
ಇಂತಹ ಹೈಸ್ಕೋರಿಂಗ್ ಪಂದ್ಯಗಳಲ್ಲಿ, ಉತ್ತಮ ಆರಂಭ ಪಡೆಯುವುದು ಬಹಳ ಮುಖ್ಯ. ಪವರ್ಪ್ಲೇ ಸಮಯದಲ್ಲಿ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾದರೆ, ನೀವು ಈ ರೀತಿಯ ಸಣ್ಣ ಮೈದಾನದಲ್ಲಿ ಎಂತಹ ಗುರಿಯನ್ನು ಬೆನ್ನಟ್ಟಬಹುದು. ಚೆಂಡು ಉತ್ತಮವಾಗಿ ಬ್ಯಾಟ್ಗೆ ಬರುತ್ತಿತ್ತು ಮತ್ತು ಔಟ್ಫೀಲ್ಡ್ ಕೂಡ ತುಂಬಾ ವೇಗವಾಗಿತ್ತು. ಪವರ್ಪ್ಲೇನಲ್ಲಿ ನಾವು ಉತ್ತಮ ಆರಂಭವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ನಾವು ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುತ್ತಿದ್ದೆವು. ಸಾಯಿ ಸುದರ್ಸನ್ ಹಿಟ್-ವಿಕೆಟ್ ಆಗಿ ಔಟಾಗುವುದು ಅತ್ಯಂತ ದುರದೃಷ್ಟಕರ; ಇದು ನಾವು ಬಹಳ ವಿರಳವಾಗಿ ನೋಡುವ ಔಟ್ ಆಗಿದೆ” ಎಂದು ಗಿಲ್ ಹೇಳಿದರು.
ಆರ್ಸಿಬಿ 255 ರನ್ಗಳ ಅದ್ಭುತ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಕೇವಲ 19.3 ಓವರ್ಗಳಲ್ಲಿ 162 ರನ್ಗಳಿಗೆ ಕುಸಿದು, ಹೀನಾಯ ಸೋಲನ್ನು ಅನುಭವಿಸಿತು. ರಾಹುಲ್ ತೆವಾಟಿಯಾ (43 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದಂತೆ 68 ರನ್ ಗಳಿಸಿದ) ಹೊರತುಪಡಿಸಿದರೆ, ಬಟ್ಲರ್ (29) ಮಾತ್ರ 20ರ ಗಡಿ ದಾಟಿದ ಏಕೈಕ ಬ್ಯಾಟರ್ ಆದರು.













