Last Updated:
ರಾಜೀವ್ ಅವರ ಪ್ರಕಾರ, ಚಿತ್ರದಲ್ಲಿ ಜಾರ್ಜ್ಕುಟ್ಟಿ ಬಳಸುವ ವಾಹನಕ್ಕೆ ಕೆಎಲ್ 69 ಡಿ 2772 ಎಂಬ ನೋಂದಣಿ ಸಂಖ್ಯೆ ನೀಡಲಾಗಿದೆ. ಇದೇ ಸಂಖ್ಯೆ ತಮ್ಮ ವಾಹನಕ್ಕೆ ಸೇರಿದ್ದು, ತಮ್ಮ ಅನುಮತಿಯಿಲ್ಲದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ದೃಶ್ಯಂ’ (Drishyam) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದ್ರೆ ಈ ಬಾರಿ ಸಿನಿಮಾದ ಯಶಸ್ಸು ಅಥವಾ ಕಥೆಯ ಸಲುವಾಗಿ ಅಲ್ಲ . ಬದಲಾಗಿ ಚಿತ್ರದಲ್ಲಿ ಬಳಸಿದ ವಾಹನದ ನೋಂದಣಿ ಸಂಖ್ಯೆಗೆ ಸಂಬಂಧಿಸಿದ ವಿವಾದದಿಂದ ಚಿತ್ರ ಚರ್ಚೆಗೆ ಗ್ರಾಸವಾಗಿದೆ. ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದಿರುವ ದೃಶ್ಯಂ 3 ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ.
ಮೋಹನ್ ಲಾಲ್ (Mohanlal) ಅಭಿನಯದ ದೃಶ್ಯಂ 3 ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಮಲಯಾಳಂ ಚಿತ್ರರಂಗದ ದೊಡ್ಡ ಹಿಟ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಾರ್ಜ್ಕುಟ್ಟಿ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಸೆಳೆದಿರುವ ಮೋಹನ್ ಲಾಲ್ ಅಭಿನಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಚಿತ್ರದ ಯಶಸ್ಸಿನ ನಡುವೆ ಈಗ ಅನಿರೀಕ್ಷಿತ ವಿವಾದವೊಂದು ಹುಟ್ಟಿಕೊಂಡಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ನಿವಾಸಿಯಾಗಿರುವ ರೈತ ಆರ್ಡಿ ರಾಜೀವ್ ಅವರು ಚಿತ್ರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ತಮ್ಮ ವೈಯಕ್ತಿಕ ವಾಹನದ ನೋಂದಣಿ ಸಂಖ್ಯೆಯನ್ನು ಚಿತ್ರದಲ್ಲಿ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜೀವ್ ಅವರ ಪ್ರಕಾರ, ಚಿತ್ರದಲ್ಲಿ ಜಾರ್ಜ್ಕುಟ್ಟಿ ಬಳಸುವ ವಾಹನಕ್ಕೆ ಕೆಎಲ್ 69 ಡಿ 2772 ಎಂಬ ನೋಂದಣಿ ಸಂಖ್ಯೆ ನೀಡಲಾಗಿದೆ. ಇದೇ ಸಂಖ್ಯೆ ತಮ್ಮ ವಾಹನಕ್ಕೆ ಸೇರಿದ್ದು, ತಮ್ಮ ಅನುಮತಿಯಿಲ್ಲದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ಸಿನಿಮಾ ವೀಕ್ಷಿಸುವ ವೇಳೆ ಚಿತ್ರದ ವಾಹನದ ಸಂಖ್ಯೆಯನ್ನು ಗಮನಿಸಿ ಸ್ನೇಹಿತರು ಈ ಬಗ್ಗೆ ಅವರಿಗೆ ಮಾಹಿತಿ ನೀಡಿದದ್ದಾರೆ. ಹೀಗಾಗಿ ರೈತ ರಾಜೀವ್ ಈ ಕುರಿತು ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಿತ್ರದ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಸಂಖ್ಯೆಯು ತಮ್ಮ ವಾಹನದ ಸಂಖ್ಯೆಯೊಂದಿಗೆ ಮ್ಯಾಚ್ ಆಗುತ್ತಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಹಾಗೆಯೇ ಚಿತ್ರ ಬಿಡುಗಡೆಯಾದ ನಂತರ ಈ ಸಂಖ್ಯೆ ಜನರ ಗಮನಕ್ಕೆ ಬಂದಿದ್ದು, ಅನೇಕರು ಅವರನ್ನು ‘ದೃಶ್ಯಂ ರಾಜೀವ್’ ಎಂದು ಕರೆಯಲು ಆರಂಭಿಸಿದ್ದಾರೆ. ಇದರಿಂದಾಗಿ ರಾಜೀವ್ ಅವರಿಗೆ ಮಾನಸಿಕ ಕಿರಿಕಿರಿ ಶುರುವಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜೀವ್ ಮುನ್ನಾರ್ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನೊಂದಿಗೆ ವಾಹನದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನೂ ನೀಡಿದ್ದಾರೆ.
ಚಿತ್ರದಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿರುವುದರಿಂದ ಮಾನಸಿಕ ಒತ್ತಡ ಎದುರಿಸುತ್ತಿರುವುದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಸಮಸ್ಯೆ ಪರಿಹಾರವಾಗುವವರೆಗೆ ಚಿತ್ರದ ಮುಂದಿನ ಪ್ರದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜೀವ್ ತಮ್ಮ ದೂರಿನಲ್ಲಿ ಚಿತ್ರ ನಿರ್ಮಾಪಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಜೊತೆಗೆ ವಿವಾದಿತ ನೋಂದಣಿ ಸಂಖ್ಯೆ ಕಾಣಿಸುವ ಎಲ್ಲಾ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿವಾದದ ಕುರಿತು ಇದುವರೆಗೆ ಮೋಹನ್ ಲಾಲ್, ನಿರ್ದೇಶಕ ಜೀತು ಜೋಸೆಫ್ ಅಥವಾ ನಿರ್ಮಾಪಕ ಆಂಟನಿ ಪೆರುಂಬವೂರ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡ ಸಂಪೂರ್ಣ ಮೌನ ವಹಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ.
Bangalore [Bangalore],Bangalore,Karnataka













