Last Updated:
ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ 400 ಸರ್ಕಾರಿ ಕ್ಯಾಂಟೀನ್ಗಳಲ್ಲಿ 5 ರೂಪಾಯಿಗೆ ಮಚ್ಚ ಭಾತ್ ನೀಡಲು ಘೋಷಣೆ, ಮಾ ಕ್ಯಾಂಟೀನ್ ಯೋಜನೆ ವಿಸ್ತರಣೆ, ಬಡವರಿಗೆ ಸಬ್ಸಿಡಿ ಊಟ
ಕೊಲ್ಕತ್ತಾ (ಪಶ್ಚಿಮ ಬಂಗಾಳ): ಮೀನು (Fish) ಮತ್ತು ಅನ್ನವಿಲ್ಲದೆ (Rice) ಬಂಗಾಳಿಗಳ ಊಟ (Meals) ಪೂರ್ಣವಾಗುವುದಿಲ್ಲ. ಆದರೆ, ಇದು ಪ್ರತಿದಿನವೂ ಎಲ್ಲರಿಗೂ ಸಹ ತಿನ್ನಲು ಸಾಧ್ಯವಿಲ್ಲ! ಹಾಗಾಗಿ, ಇದೇ ಮಚ್ಚ ಭಾತ್ (Maache Bhate) ಅನ್ನು ಎಲ್ಲರಿಗೂ ಸಿಗುವಂತೆ ಮಾಡಲು ಪಶ್ಚಿಮ ಬಂಗಾಳದ (West Bengal) ನೂತನ ಸರ್ಕಾರ 400 ಸರ್ಕಾರಿ ಕ್ಯಾಂಟೀನ್ಗಳಲ್ಲಿ (Government Canteen) ಕೇವಲ 5 ರೂಪಾಯಿಗೆ ನೀಡಲಿದೆ. ಆ ಕುರಿತ ವರದಿ ಇಲ್ಲಿದೆ.
ನ್ಯೂಸ್ 18 ಇಂಗ್ಲೀಷ್ ವರದಿ ಮಾಡಿರುವಂತೆ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಘೋಷಣೆ ಮಾಡಿದ್ದು, “ರಾಜ್ಯಾದ್ಯಂತ 400 ವಿಶೇಷ ಕ್ಯಾಂಟೀನ್ಗಳಲ್ಲಿ 5 ರೂಪಾಯಿಗೆ ಮೀನು-ಅನ್ನ ಊಟ ನೀಡಲಾಗುವುದು. ಬಡವರಿಗೆ ಮತ್ತು ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ” ಎಂದು ಅವರು, ಮಚ್ಚ ಭಾತ್ ಬಂಗಾಳದ ಅಸ್ಮಿತೆಯ ಭಾಗವಾಗಿದ್ದು, ಯಾರ ಆಹಾರ ಪದ್ಧತಿಗೂ ಧಕ್ಕೆ ಬರುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಈ ಮೂಲಕ ಬಂಗಾಳದ ಆಹಾರ ಸಂಸ್ಕೃತಿ ಕುರಿತ ಚರ್ಚೆಗೆ ಈಗ ಹೊಸ ತಿರುವು ಸಿಕ್ಕಿದೆ. ಯಾಕಂದ್ರೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನು, ಮಾಂಸ, ಮೊಟ್ಟೆ ನಿಷೇಧ ಮಾಡುತ್ತದೆ ಎಂದು ಟಿಎಂಸಿ ಆರೋಪಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಮೀನು ಊಟವನ್ನೇ ಸಬ್ಸಿಡಿ ದರದಲ್ಲಿ ನೀಡಲು ಮುಂದಾಗಿದೆ.
ಮುಂದುವರೆದು, ಬಂಗಾಳದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಮಾ ಕ್ಯಾಂಟೀನ್ ಯೋಜನೆಯಡಿ ಬಡವರಿಗೆ 5 ರೂಪಾಯಿಗೆ ಅನ್ನ, ದಾಲ್, ತರಕಾರಿ ಮತ್ತು ಮೊಟ್ಟೆಯ ಸಾರನ್ನು ನೀಡಲಾಗುತ್ತಿತ್ತು. ಆದರೆ, ಬಂಗಾಳಿಗಳ ದೈನಂದಿನ ಆಹಾರ ಪದ್ಧತಿ ಹಾಗೂ ಸಂಸ್ಕೃತಿಯಲ್ಲಿ ಮೀನಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಅದರಂತೆ, “ಮಾಚೆ-ಭಾತೆ ಬಂಗಾಳಿ” (ಮೀನು-ಅನ್ನ ಉಣ್ಣುವ ಬಂಗಾಳಿ) ಎಂಬುದು ಅವರ ಅಸ್ಮಿತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನೂತನ ಸರ್ಕಾರವು ಹಳೆಯ ಮೊಟ್ಟೆಯ ಮೆನುವನ್ನು ಬದಲಾಯಿಸಿ, ಅದರ ಜಾಗದಲ್ಲಿ ಬಂಗಾಳಿಗಳ ಅತ್ಯಂತ ಪ್ರೀತಿಯ ಮೀನಿನ ಊಟವನ್ನು ಸೇರ್ಪಡೆಗೊಳಿಸಿದೆ.
ಕೇವಲ 5 ರೂಪಾಯಿಗೆ ಬಿಸಿಬಿಸಿ ಅನ್ನ, ದಾಲ್, ತರಕಾರಿ ಪಲ್ಯ ಮತ್ತು ಬಂಗಾಳಿ ಶೈಲಿಯ ಮೀನಿನ ಸಾರು ಒಳಗೊಂಡ ಸಂಪೂರ್ಣ ಊಟ ಸಿಗಲಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವರದಾನವಾಗಲಿದೆ. ನಗರ ಹಾಗೂ ಗ್ರಾಮೀಣ ಭಾಗದ ಪ್ರಮುಖ ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಮಾರುಕಟ್ಟೆಗಳ ಬಳಿ ಇರುವ 400 ವಿಶೇಷ ಕ್ಯಾಂಟೀನ್ಗಳಲ್ಲಿ ಈ ಊಟ ಲಭ್ಯವಿರಲಿದೆ. ಪ್ರತಿದಿನ ಕಷ್ಟಪಟ್ಟು ದುಡಿಯುವ ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ದೂರದ ಊರುಗಳಿಂದ ಬರುವ ರೋಗಿಗಳ ಸಂಬಂಧಿಕರಿಗೆ ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೌಷ್ಟಿಕ ಆಹಾರವನ್ನು ಒದಗಿಸಲಿದೆ.
ಪಶ್ಚಿಮ ಬಂಗಾಳದಲ್ಲಿ 5 ರೂಪಾಯಿಗೆ ಊಟ ನೀಡುವ ಸಬ್ಸಿಡಿ ಕ್ಯಾಂಟೀನ್ಗಳು ಈಗಾಗಲೇ ಜನಪ್ರಿಯವಾಗಿವೆ. 2021ರ ಫೆಬ್ರವರಿಯಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾ ಕ್ಯಾಂಟೀನ್ ಯೋಜನೆಯನ್ನು ಪ್ರಾರಂಭಿಸಿದ್ದರು. ಈ ಕ್ಯಾಂಟೀನ್ಗಳು ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಅನ್ನ, ದಾಲ್, ತರಕಾರಿ ಮತ್ತು ಮೊಟ್ಟೆ ಕರಿ ನೀಡುತ್ತಿದ್ದವು. ಅದರಂತೆ, 2021ರ ರಾಜ್ಯ ಬಜೆಟ್ನಲ್ಲಿ ಈ ಯೋಜನೆಗೆ 100 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಆದರೆ, ಆಗ ಅಂದಿನ ಬಂಗಾಳ ಬಿಜೆಪಿ ಅಧ್ಯಕ್ಷ ಹಾಗೂ ಹಾಲಿ ದಿಲೀಪ್ ಘೋಷ್ ಇದನ್ನು ಚುನಾವಣಾ ಗಿಮಿಕ್ ಎಂದು ಟೀಕಿಸಿದ್ದರು.
Kolkata,West Bengal













