Last Updated:
ಬಾಂಗ್ಲಾದೇಶದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಲಿಟ್ಟನ್ ದಾಸ್ ತಮ್ಮ ಪಾಕಿಸ್ತಾನ ಪ್ರವಾಸದ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಲಿಟ್ಟನ್ ದಾಸ್ ಅವರ ಶಾಕಿಂಗ್ ಹೇಳಿಕೆಗಳು ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿವೆ.
ಬಾಂಗ್ಲಾದೇಶ (Bangladesh) 2026 ರ ಟಿ 20 ವಿಶ್ವಕಪ್ (World Cup) ನಲ್ಲಿ ಭಾಗವಹಿಸಲಿಲ್ಲ. ಭದ್ರತಾ ಕಾರಣಗಳನ್ನು ಕೊಟ್ಟು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ 2026 ರ ಟಿ20 ವಿಶ್ವಕಪ್ಗೆ ತನ್ನ ರಾಷ್ಟ್ರೀಯ ಕ್ರಿಕೆಟ್ (Cricket) ತಂಡವನ್ನು ಕಳುಹಿಸಲು ನಿರಾಕರಿಸಿತು. ಆದರೆ, ಬಾಂಗ್ಲಾದೇಶದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಲಿಟ್ಟನ್ ದಾಸ್ (Litton Das) ಈಗ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. “ನಾವು ಪಾಕಿಸ್ತಾನ(Pakistan)ದಲ್ಲಿ ಕ್ರಿಕೆಟ್ ಆಡಿದ್ದರಿಂದ, ಭಾರತದಲ್ಲಿ ವಿಶ್ವಕಪ್ ಆಡಲು ನಮಗೆ ಯಾವುದೇ ಸಮಸ್ಯೆ ಇರಲಿಲ್ಲ” ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಕೊನೆಯ ಪ್ರವಾಸದ ಸಮಯದಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಲಿಟ್ಟನ್ ದಾಸ್ ನೆನಪಿಸಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಲಿಟ್ಟನ್ ದಾಸ್, ಪಾಕಿಸ್ತಾನದ ತಮ್ಮ ಕೊನೆಯ ಪ್ರವಾಸದ ಸಮಯದಲ್ಲಿ ಭದ್ರತಾ ವ್ಯವಸ್ಥೆ ಹೇಗಿತ್ತು? ಎಂಬುದರ ಬಗ್ಗೆ ತಿಳಿಸಿದ್ದಾರೆ. “ನಾವು ಬಿಸಿಬಿಯ ಉನ್ನತ ಅಧಿಕಾರಿಗಳು ಹಾಜರಿದ್ದ ಸಭೆಗೆ ಹೋಗಿದ್ದೆವು. ಅಲ್ಲಿ, ಟಿ20 ವಿಶ್ವಕಪ್ ಆಡುವ ಬಗ್ಗೆ ನಮ್ಮ ಅಭಿಪ್ರಾಯ ಏನು ಎಂದು ಕೇಳಲಾಯಿತು. ಆಟಗಾರರಾಗಿ ನಮಗೆ ಏನು ಬೇಕಿತ್ತು? ಸ್ಪಷ್ಟವಾಗಿ, ನಮಗೆ ಯಾವುದೇ ಸಂಘರ್ಷ ಬೇಕಾಗಿಲ್ಲ. ಹೀಗಾಗಿ ಟೂರ್ನಿಯಲ್ಲಿ ಆಡಲು ಬಯಸಿದ್ದೆವು ಎಂದು ಹೇಳಿದ್ದಾರೆ.
ನಮ್ಮ ಅಭಿಪ್ರಾಯವನ್ನು ಹೇಳಿದ ಬಳಿಕ, ಭಾರತದಲ್ಲಿ ಭದ್ರತಾ ಸಮಸ್ಯೆ ಇದೆ ಎಂದು ನಮಗೆ ತಿಳಿಸಲಾಯಿತು. ಇದಕ್ಕೆ ನಾವು ಪಾಕಿಸ್ತಾನದಲ್ಲೂ ಆಡಿದ್ದೇವೆ ಎಂದು ಹೇಳಿದೆವು. ಅಲ್ಲಿ, ಸಶಸ್ತ್ರ ಭದ್ರತಾ ಸಿಬ್ಬಂದಿ ನಮ್ಮ ರೂಮ್ ಹೊರಗೆ ನಿಂತಿದ್ದರು. ಅದಕ್ಕಿಂತ ಹೆಚ್ಚು ಅಪಾಯಕಾರಿ ಇನ್ನೇನು ಇದೆ? ನಾವು ಪಾಕಿಸ್ತಾನದಲ್ಲಿ ಆಡಲು ಸಾಧ್ಯವಾದರೆ, ಭಾರತದಲ್ಲಿ ಏಕೆ ಮಾಡಬಾರದು? ಎಂದು ಲಿಟ್ಟನ್ ದಾಸ್ ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶ ಆಟಗಾರರು 2026 ರ ಟಿ 20 ವಿಶ್ವಕಪ್ಗಾಗಿ ಭಾರತಕ್ಕೆ ಬರಲು ಬಯಸಿದ್ದರು. ಆದರೆ ಮಧ್ಯಂತರ ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ. ಬಾಂಗ್ಲಾದೇಶವು ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಯನ್ನು ಕೇಳಿತ್ತು. ಆದರೆ ಐಸಿಸಿ ಈ ವಿನಂತಿಯನ್ನು ತಿರಸ್ಕರಿಸಿತು. ಇದಾದ ನಂತರ ಬಾಂಗ್ಲಾದೇಶ ಇತ್ತೀಚೆಗೆ ತವರು ನೆಲದಲ್ಲಿ ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತು. ಬಾಂಗ್ಲಾದೇಶ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.
ಈ ಸರಣಿಯ ಸಮಯದಲ್ಲಿ, ಮೊಹಮ್ಮದ್ ರಿಜ್ವಾನ್ ಮತ್ತು ಲಿಟ್ಟನ್ ದಾಸ್ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ರಿಜ್ವಾನ್ ಇಡೀ ಬಾಂಗ್ಲಾದೇಶ ತಂಡದೊಂದಿಗೆ ಕೈಕುಲುಕಲು ನಿರಾಕರಿಸಿದರು. ಇದರ ಬಗ್ಗೆ ಲಿಟ್ಟನ್ ದಾಸ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.













