Last Updated:
Ketan Agarwal Case: ಉಜ್ವಲ್ ನಿಕ್ಕಂ 26/11ರ ಉಗ್ರ ಅಜ್ಮಲ್ ಕಸಬ್ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ 30ಕ್ಕೂ ಹೆಚ್ಚು ವರ್ಷಗಳ ವೃತ್ತಿಜೀವನದಲ್ಲಿ ವಿವಿಧ ಕೇಸ್ ಅಪರಾಧಿಗಳಿಗೆ 600ಕ್ಕೂ ಹೆಚ್ಚು ಜೀವಾವಧಿ ಶಿಕ್ಷೆ ಮತ್ತು 30ಕ್ಕೂ ಹೆಚ್ಚು ಗಲ್ಲು ಶಿಕ್ಷೆಗಳನ್ನು ಕೊಡಿಸಿದ್ದಾರೆ.
ಮುಂಬೈ: ತನ್ನ ಮದುವೆಯಾಗಬೇಕಿದ್ದ ಹುಡುಗಿಯಿಂದಲೇ ಹತ್ಯೆಗೀಡಾದ ಕೇತನ್ ಅಗರ್ವಾಲ್ ಕೇಸ್ಗೆ (Ketan Agarwal Case) ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೇತನ್ ಕೇಸ್ನಲ್ಲಿ ಹಂತಕಿ ಸಿಯಾ ಗೋಯಲ್ (Siya Goyal) ವಿರುದ್ಧ ಅಂದರೆ ಸರ್ಕಾರದ ಪರ ವಾದಿಸಲು ಖ್ಯಾತ ವಕೀಲ ಉಜ್ವಲ್ ನಿಕ್ಕಂ (ujjwal Nikam) ನೇಮಕಗೊಂಡಿದ್ದಾರೆ. ಅಂದರೆ ಮಹಾರಾಷ್ಟ್ರ ಸರ್ಕಾರದ (Maharashtra government) ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ (special public prosecutor) ಉಜ್ವಲ್ ನಿಕ್ಕಂ ಅವರನ್ನು ನೇಮಿಸಲಾಗಿದೆ. ಇಂದು ಈ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ Devendra Fadnavis) ಆದೇಶ ಹೊರಡಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇತನ್ ಅಗರ್ವಾಲ್ ಕೇಸ್ನಲ್ಲಿ ಖ್ಯಾತ ವಕೀಲ ಉಜ್ವಲ್ ನಿಕ್ಕಂ ವಾದಿಸಲಿದ್ದಾರೆ. ಈಗಾಗಲೇ ಅವರನ್ನು ಮಹಾರಾಷ್ಟ್ರ ಸರ್ಕಾರದ ವಿಶೇಷ ಅಭಿಯೋಜಕರಾಗಿ ಸಿಎಂ ದೇವೇಂದ್ರ ಫಡ್ನವೀಸ್ ನೇಮಕ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ, ಕೇತನ್ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್ ಅವರು ಇಂದು ಪುಣೆಯಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ತಮ್ಮ ಮಗನಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು ಎಂದು ತಿಳಿಸಿದೆ. ಈ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿಗಳು ಅವರ ಕುಟುಂಬಕ್ಕೆ ಭರವಸೆ ನೀಡಿದರು.
ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಉಜ್ವಲ್ ನಿಕ್ಕಂ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸಬೇಕೆಂಬ ಕುಟುಂಬದ ಬೇಡಿಕೆಯನ್ನು ತಕ್ಷಣವೇ ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಈ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕೆಲಸ ಮಾಡಲು ಉಜ್ವಲ್ ನಿಕ್ಕಂ ಸಹ ಒಪ್ಪಿಗೆ ನೀಡಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ಉಜ್ವಲ್ ನಿಕ್ಕಂ ಭಾರತದ ಖ್ಯಾತ ಕ್ರಿಮಿನಲ್ ವಕೀಲರು ಹಾಗೂ ಮಾಜಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿದ್ದಾರೆ. ಇವರು 2008ರ ಮುಂಬೈ ಭಯೋತ್ಪಾದಕ ದಾಳಿ ಮತ್ತು 1993ರ ಮುಂಬೈ ಸರಣಿ ಸ್ಫೋಟಗಳಂತಹ ದೇಶದ ಅತ್ಯಂತ ಪ್ರಮುಖ ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.
ಇವರು 26/11ರ ಉಗ್ರ ಅಜ್ಮಲ್ ಕಸಬ್ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಲ್ಶನ್ ಕುಮಾರ್ ಹತ್ಯೆ, ಪ್ರಮೋದ್ ಮಹಾಜನ್ ಹತ್ಯೆ, ಖೈರ್ಲಾನಿ ದಲಿತ ಹತ್ಯಾಕಾಂಡ ಹಾಗೂ ಕೋಪರ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಅವರು 30ಕ್ಕೂ ಹೆಚ್ಚು ವರ್ಷಗಳ ವೃತ್ತಿಜೀವನದಲ್ಲಿ ವಿವಿಧ ಕೇಸ್ ಅಪರಾಧಿಗಳಿಗೆ 600ಕ್ಕೂ ಹೆಚ್ಚು ಜೀವಾವಧಿ ಶಿಕ್ಷೆ ಮತ್ತು 30ಕ್ಕೂ ಹೆಚ್ಚು ಗಲ್ಲು ಶಿಕ್ಷೆಗಳನ್ನು ಕೊಡಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಮಧ್ಯ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಂತರ 2025ರಲ್ಲಿ, ಕಾನೂನು ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಭಾರತದ ರಾಷ್ಟ್ರಪತಿಯವರು ಇವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಕಾನೂನು ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಇವರಿಗೆ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
Pune,Maharashtra
Jun 26, 2026 10:34 PM IST
Ketan Agarwal Case: ಅಂದು ಉಗ್ರ ಕಸಬ್ಗೆ ಗಲ್ಲುಶಿಕ್ಷೆ ಕೊಡಿಸಿದ್ರು, ಇಂದು ಸಿಯಾ ವಿರುದ್ಧ ವಾದಿಸ್ತಾರೆ! ಕೇತನ್ ಕೇಸ್ನಲ್ಲಿ ಉಜ್ವಲ್ ನಿಕ್ಕಂ ಎಂಟ್ರಿ













