Last Updated:
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಆಗೋದು, ಪ್ರೀತಿ ಮಾಡೋದು, ಮದುವೆ ಆಗೋದು ಇದೆಲ್ಲಾ ಸಾಮಾನ್ಯವಾಗಿದೆ. ಅದೇ ರೀತಿ ಫೇಕ್ ಐಡಿಗಳನ್ನು ಕ್ರಿಯೇಟ್ ಮಾಡಿ ಮೋಸ ಮಾಡುವವರು ಕೂಡ ಇದ್ದಾರೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ, ಆದರೆ ಇದು ದುರಂತ ಅಂತ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ (Social Media Relationship) ಸಂಬಂಧಗಳು ರೂಪುಗೊಳ್ಳುತ್ತಿವೆ, ಅದೇ ರೀತಿ ಹಾಳಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲೇ ಒಬ್ಬರನೊಬ್ಬರು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಳ್ಳುವುದು, ಪ್ರೀತಿ ಮಾಡೋದು, ಮದುವೆ ಮಾಡಿಕೊಳ್ಳುವುದು ಹೀಗೆ ಅನೇಕ ಉದಾಹರಣೆಗಳನ್ನು (Example) ನಾವು ನೋಡಿದ್ದೇವೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಪರಿಚಯ ಪ್ರೀತಿಗೆ ತಿರುಗಿ, ನಂತರ ಮದುವೆ ತನಕ ಹೋಗಿ ಆಮೇಲೆ ದುರಂತ ಅಂತ್ಯ ಕಂಡಿದೆ.
ಹೌದು, ರಾಜ್ಕೋಟ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬೆಸೆದ ಸಂಬಂಧ ಭಯಾನಕ ಕೊಲೆಗೆ ಕಾರಣವಾಗಿದೆ. 20 ವರ್ಷದ ಪಿಯೂಷ್ ಕುಮಾರ್ ಖರ್ವಾರ್ ಎಂಬ ಯುವಕ ತನ್ನ ಜೊತೆಗೆ ಹುಡುಗಿಯಂತೆ ನಟಿಸಿದ ವ್ಯಕ್ತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮ ಸಂಬಂಧಗಳ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಪಿಯೂಷ್ ಕುಮಾರ್ ಖರ್ವಾರ್ ಫೇಸ್ಬುಕ್ನಲ್ಲಿ ‘ನಿಶಾ ಕುಮಾರ್’ ಮತ್ತು ಇನ್ಸ್ಟಾಗ್ರಾಮ್ನಲ್ಲಿ ‘ಪೂನಂ’ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದ್ದ. ಆ ವ್ಯಕ್ತಿ ತಾನು ಹುಡುಗಿಯಂತೆ ನಟಿಸಿ ಪಿಯೂಷ್ನ ವಿಶ್ವಾಸ ಗಳಿಸಿದ್ದ. ಆದರೆ ಈತನ ನಿಜವಾದ ಹೆಸರು ಚಂದನ್ ಕುಮಾರ್. ಈ ಚಂದನ್ ಪಿಯೂಷ್ ನನ್ನು ಪ್ರೀತಿಸಿ ಮದುವೆಯಾಗುದವುದಾಗಿ ನಂಬಿಸಿದ್ದ. ಪಿಯೂಷ್ ಕೂಡ ಚಂದನ್ ಅವರನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದ್ದ. ಅವರ ಹಣೆಗೆ ಸಿಂಧೂರ ಹಚ್ಚಿದ್ದ.
ಆದರೆ ಒಂದು ದಿನ ಪಿಯೂಷ್ ಚಂದನ್ ಕ್ಷೌರ ಮಾಡುವುದನ್ನು ನೋಡಿದಾಗ ಸತ್ಯ ತಿಳಿದುಬಂದಿದೆ. ಚಂದನ್ ವಾಸ್ತವವಾಗಿ ಹುಡುಗ ಎಂದು ಅರಿತುಕೊಂಡ, ನಂತರ ಪಿಯೂಷ್ ಮತ್ತು ಚಂದನ್ ಮಧ್ಯೆ ಜಗಳ ತಾರಕಕ್ಕೇರಿದೆ. ಪಿಯೂಷ್ ಚಂದನ್ ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಚಂದನ್ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಮೂಲಕ ಪಿಯೂಷ್ ನನ್ನು ಹಿಂಬಾಲಿಸಿ ರಾಜ್ಕೋಟ್ನ ಪಡ್ವಾಲಾದಲ್ಲಿರುವ ಕಾರ್ಖಾನೆಯನ್ನು ತಲುಪಿದ್ದ.
ಜೂನ್ 21 ರಂದು ಕೆಲಸದ ಸ್ಥಳದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ನಂತರ ಪಿಯೂಷ್ ಚಂದನ್ ರನ್ನು ರೈಲ್ವೆ ಹಳಿಗಳ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ದೊಡ್ಡ ಕಲ್ಲುಗಳಿಂದ ಹೊಡೆದು ಕೊಂದಿದ್ದಾನೆ. ಶವವನ್ನು ಕಲ್ಲುಗಳ ಕೆಳಗೆ ಮರೆಮಾಡಿ ತನ್ನ ಕೆಲಸಕ್ಕೆ ಮರಳಿದ್ದಾನೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆಹಚ್ಚಲು ಭೂ ಗುಪ್ತಚರವನ್ನು ಬಳಸಿದರು. ಅಂತಿಮವಾಗಿ ಅವರು 20 ವರ್ಷದ ಪಿಯೂಷ್ ಕುಮಾರ್ ಖರ್ವಾರ್ ಅವರನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಿಂಗ್ ಗುರ್ಜರ್ ಅವರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಅನಾಮಧೇಯರೊಂದಿಗೆ ಸಂಬಂಧ ಬೆಳೆಸುವುದರ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ವಿಶೇಷವಾಗಿ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಅನಾಮಧೇಯರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ನೀಡುತ್ತಿದ್ದಾರೆ. ಪಿಯೂಷ್ ಅವರು ಚಂದನ್ ಅವರನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದ್ದರೂ, ಸತ್ಯ ತಿಳಿದ ನಂತರ ಉದ್ವಿಗ್ನತೆ ಹೆಚ್ಚಾಗಿ, ಇದು ಕೊಲೆಗೆ ಕಾರಣವಾಗಿದೆ. ಈ ಘಟನೆ ಯುವಕರ ಮಾನಸಿಕ ಸ್ಥಿತಿ ಮತ್ತು ಸಾಮಾಜಿಕ ಮಾಧ್ಯಮದ ದುರ್ಬಳಕೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸುತ್ತಿದ್ದಾರೆ.
Jul 02, 2026 11:45 AM IST













