Last Updated:
227.5 ಕೋಟಿ ರೂ. ಮೊತ್ತವು ನೇರವಾಗಿ ರೈತರ ಕೈ ಸೇರುವುದರಿಂದ, ಅದು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಬೆಳೆಗಾರರಲ್ಲಿ ಆತಂಕ ದೂರವಾಗಿ, ಮುಂದಿನ ವರ್ಷದ ಕೃಷಿ ಚಟುವಟಿಕೆಗಳಿಗೆ ಬಂಡವಾಳ ಸಿಕ್ಕಂತಾಗುತ್ತದೆ.
ಬೆಂಗಳೂರು: ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತ, ಹವಾಮಾನ ವೈಪರೀತ್ಯ ಹಾಗೂ ಅಧಿಕ ಉತ್ಪಾದನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದ ರಾಜ್ಯದ ತೋತಾಪುರಿ ಮಾವು ಬೆಳೆಗಾರರಿಗೆ ಇದೀಗ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ! ಹೌದು, ನಷ್ಟದ ಸುಳಿಗೆ (Loss) ಸಿಲುಕಿದ್ದ ಅನ್ನದಾತರ (Farmers) ನೆರವಿಗೆ ಧಾವಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು, 2026-27ನೇ ಸಾಲಿನ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ ಬರೋಬ್ಬರಿ 1.30 ಲಕ್ಷ ಮೆಟ್ರಿಕ್ ಟನ್ (1,30,000 MT) ತೋತಾಪುರಿ ಮಾವಿಗೆ (Mango) ಭಾರಿ ಸಹಾಯಧನವನ್ನು ಘೋಷಿಸಿದೆ.
ಈ ಮಹತ್ವದ ನಿರ್ಧಾರದಂತೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಮಾದರಿಯಲ್ಲಿ ಪ್ರತಿ ಕ್ವಿಂಟಾಲ್ ತೋತಾಪುರಿ ಮಾವಿಗೆ 1,750 ರೂಪಾಯಿಗಳ ಭರ್ಜರಿ ಸಹಾಯಧನ ನಿಗದಿಯಾಗಿದೆ. ಇದು ಮಾರುಕಟ್ಟೆ ಏರಿಳಿತಗಳಿಂದ ಕಣ್ಣೀರು ಹಾಕುತ್ತಿದ್ದ ಲಕ್ಷಾಂತರ ತೋಟಗಾರಿಕಾ ರೈತರಿಗೆ ಆರ್ಥಿಕವಾಗಿ ಅತಿ ದೊಡ್ಡ ಆಸರೆಯಾಗಲಿದೆ! ಇದಕ್ಕಾಗಿ 227.5 ಕೋಟಿ ರೂಪಾಯಿ ಖರ್ಚಾಗಲಿದೆ
ಇನ್ನು, ರಾಜ್ಯದ ಪ್ರಮುಖ ಮಾವು ಬೆಳೆಗಾರರ ಮನವಿಗೆ ಸ್ಪಂದಿಸಿ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲು ತೆರೆಯ ಹಿಂದೆ ನಡೆದ ಪ್ರಕ್ರಿಯೆಗಳೇ ರೋಚಕ! ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಭಾಗದಲ್ಲಿ ತೋತಾಪುರಿ ಮಾವಿನ ಬೆಲೆ ಪಾತಾಳಕ್ಕೆ ಕುಸಿದಾಗ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಕ್ಷಣವೇ ಎಚ್ಚೆತ್ತುಕೊಂಡು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತುರ್ತು ಪತ್ರ ಬರೆದಿದ್ದರು.
ಮೊದಲಿದ್ದಕ್ಕಿಂತ 100 ರೂಪಾಯಿ ಹೆಚ್ಚಳ!
ಗಮನಾರ್ಹ ಸಂಗತಿಯೆಂದರೆ, ಇದಕ್ಕೂ ಮುನ್ನ ಕರ್ನಾಟಕ ಸರ್ಕಾರ ಮತ್ತು ಕೇಂದ್ರವು ಜಂಟಿಯಾಗಿ 2.5 ಲಕ್ಷ ಮೆಟ್ರಿಕ್ ಟನ್ ಮಾವಿಗೆ ಕೇವಲ ಪ್ರತಿ ಕೆಜಿಗೆ 4 ರೂಪಾಯಿ (ಕೇಂದ್ರದಿಂದ ₹2 ಹಾಗೂ ರಾಜ್ಯದಿಂದ ₹2) ಅಂದರೆ ಕ್ವಿಂಟಾಲ್ಗೆ ಅಂದಾಜು 1,616 ರೂಪಾಯಿ ಸಹಾಯಧನ ನೀಡುವ ಬಗ್ಗೆ ಮಾತ್ರ ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಎಲ್ಲ ನಿರೀಕ್ಷೆಗಳನ್ನು ಮೀರಿ, ವಿಶಿಷ್ಟವಾಗಿ ತೋತಾಪುರಿ ತಳಿಗೆಂದೇ 1.30 ಲಕ್ಷ ಟನ್ ಮಿತಿಯೊಳಗೆ ಪ್ರತಿ ಕ್ವಿಂಟಾಲ್ಗೆ ಬರೋಬ್ಬರಿ 1,750 ರೂಪಾಯಿ ನಿಗದಿಪಡಿಸುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಜಾಕ್ಪಾಟ್ ಹೊಡೆದಿದೆ. ಈ ಮಾಸ್ಟರ್ಸ್ಟ್ರೋಕ್ ನಿರ್ಧಾರದಿಂದಾಗಿ ವರ್ಷಾನುಗಟ್ಟಲೆಯಿಂದ ರೈತರ ರಕ್ತ ಹೀರುತ್ತಿದ್ದ ಮಧ್ಯವರ್ತಿಗಳ ಹಾವಳಿಗೆ ಶಾಶ್ವತ ಬ್ರೇಕ್ ಬೀಳಲಿದ್ದು, ಸಹಾಯಧನದ ಹಣ ನೇರವಾಗಿ ಅನ್ನದಾತರ ಕೈಸೇರಲಿದೆ. ಒಟ್ಟಿನಲ್ಲಿ, ಬೆಲೆ ಇಲ್ಲದೆ ಮಾವನ್ನು ರಸ್ತೆಗೆ ಸುರಿಯುವ ಭೀತಿಯಲ್ಲಿದ್ದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ರೈತರು ಈ ಅಚ್ಚರಿಯ ಘೋಷಣೆಯಿಂದ ಸಂಪೂರ್ಣವಾಗಿ ನಿರಾಳರಾಗಿದ್ದಾರೆ!
Bangalore [Bangalore],Bangalore,Karnataka













