Last Updated:
ವೃದ್ಧಾಶ್ರಮವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಭೀಕರ ದುರಂತವಾಗಿದೆ. ಈ ಬೆಂಕಿ ಅವಘಡದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಅಪಘಾತ ಸಂಭವಿಸಿರುವ ಶಂಕೆ ಇದೆ.
ವೃದ್ಧಾಶ್ರಮವೊಂದರಲ್ಲಿ (Old age home) ಭಾರಿ ಬೆಂಕಿ ಅವಘಡ ಸಂಭವಿಸಿ ದೊಡ್ಡ ಅನಾಹುತ (Big Fire Accident) ಸಂಭವಿಸಿದೆ. ಶ್ರೀಲಂಕಾದ (Srilanka) ರಾಜಧಾನಿ ಕೊಲಂಬೊ ಸಮೀಪದ ಹೊರಾನಾ ಪ್ರದೇಶದಲ್ಲಿರುವ ವೃದ್ಧಾಶ್ರಮದಲ್ಲಿ ಸಂಭವಿಸಿದ ಈ ಭೀಕರ ಬೆಂಕಿ ಅವಘಡ ಇಡೀ ಪ್ರದೇಶವನ್ನು ದುಃಖದಲ್ಲಿ ಮುಳುಗಿಸಿದೆ. ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11 ಕ್ಕೆ ಏರಿದ್ದು, ಇನ್ನೂ 3 ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಕಾರ್ಯ ಮುಂದುವರಿಯುತ್ತಿದೆ.
ಅಪಘಾತದ ಸಮಯದಲ್ಲಿ ವೃದ್ಧಾಶ್ರಮದಲ್ಲಿ ಒಟ್ಟು 72 ವೃದ್ಧರು ವಾಸಿಸುತ್ತಿದ್ದರು. ಅವರು ವಯಸ್ಸಾದವರಾಗಿದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ಬೇಗನೆ ಹೊರಬರಲು, ಓಡಿಹೋಗಲು ಸಾಧ್ಯವಾಗಲಿಲ್ಲ. ಬೆಂಕಿ ಕ್ಷಣಾರ್ಧದಲ್ಲಿ ಕಟ್ಟಡದ ಹಲವಾರು ಭಾಗಗಳಿಗೆ ಹರಡಿದ್ದು, ಒಳಗೆ ಇದ್ದ ವೃದ್ಧರು ಭೀತಿಯಿಂದ ಕಂಗಾಲಾಗಿದ್ದರು. ಕೆಲವರಿಗೆ ಕೊಠಡಿಗಳಿಂದ ಹೊರಬರುವ ಅವಕಾಶವೇ ಸಿಗಲಿಲ್ಲ.
ಈ ಬೆಂಕಿ ಅವಘಡದ ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ, ತುರ್ತು ಸೇವಾ ಪಡೆಗಳು ಹಾಗೂ ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರು. ಎಲ್ಲರೂ ಸೇರಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸಿದರು. ಸಮಯಕ್ಕೆ ಸರಿಯಾಗಿಯೇ ನಡೆಸಿದ ಈ ಕಾರ್ಯಾಚರಣೆಯಿಂದ 44 ಜನರನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಗೆ ಕರೆತರಲಾಯ್ತು. ಆದರೆ ಎಲ್ಲರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಬೆಂಕಿ ಮತ್ತು ಹೊಗೆಯಿಂದ ಹಲವು ವೃದ್ಧರು ಗಂಭೀರವಾಗಿ ಸಿಲುಕಿಕೊಂಡರು. ಈ ಅಪಘಾತದಲ್ಲಿ ಗಾಯಗೊಂಡ 7 ಜನರನ್ನು ತುರ್ತು ಚಿಕಿತ್ಸೆಗಾಗಿ ಹೊರಾನಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ಎಲ್ಲ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ಅಗ್ನಿಶಾಮಕ ದಳದವರು ಬಹಳ ಶ್ರಮಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿ ತೀವ್ರವಾಗಿದ್ದ ಕಾರಣ ಹಲವು ಕೊಠಡಿಗಳವರೆಗೆ ತಲುಪುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಬೆಂಕಿ ನಂದಿಸಿದ ನಂತರ, ಸಂಪೂರ್ಣ ಕಟ್ಟಡದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಶವಗಳನ್ನು ಹೊರತೆಗೆದಿದ್ದು, ಸಾವಿನ ಸಂಖ್ಯೆ 11 ಕ್ಕೆ ಏರಿದೆ. ಇನ್ನೂ 3 ಮಂದಿ ಕಾಣೆಯಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಬೆಂಕಿ ಹೇಗೆ ಶುರುವಾಯಿತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ, ನರ್ಸಿಂಗ್ ಹೋಂನಲ್ಲಿರುವ ಗ್ಯಾಸಿನ ಸಿಲಿಂಡರ್ ಸ್ಫೋಟಗೊಂಡ ಬಳಿಕ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ. ಆದರೆ ಇದನ್ನು ಅಧಿಕೃತವಾಗಿ ಇನ್ನೂ ದೃಢಪಡಿಸಲಾಗಿಲ್ಲ. ಪೊಲೀಸರು ಮತ್ತು ಸಂಬಂಧಿತ ಇಲಾಖೆಗಳು ಈ ಬಗ್ಗೆ ತನಿಖೆ ಆರಂಭಿಸಿದ್ದು, ಬೆಂಕಿ ಯಾವಾಗ, ಹೇಗೆ ಶುರುವಾಯಿತು, ಅದು ಕಟ್ಟಡದಾದ್ಯಂತ ಇಷ್ಟು ವೇಗವಾಗಿ ಹೇಗೆ ಹರಡಿತು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸ್ಥಳೀಯ ಆಡಳಿತ, ಸರ್ಕಾರದ ಪ್ರತಿನಿಧಿಗಳು ಈ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸರ್ಕಾರ, ಬಲಿಪಶುಗಳಿಗೆ ನ್ಯಾಯ ಸಿಗುವಂತೆ ಸಂಪೂರ್ಣ, ಪಾರದರ್ಶಕ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ವೃದ್ಧಾಶ್ರಮಗಳು ಮತ್ತು ನರ್ಸಿಂಗ್ ಹೋಂಗಳ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸುವುದಾಗಿ ಸೂಚಿಸಿದೆ. ಈ ಬೆಂಕಿ ಅವಘಡವನ್ನು ಶ್ರೀಲಂಕಾದ ಇತ್ತೀಚಿನ ಇತಿಹಾಸದಲ್ಲಿನ ಅತ್ಯಂತ ಭೀಕರ ನರ್ಸಿಂಗ್ ಹೋಂ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ. ವೃದ್ಧರ ಸುರಕ್ಷತೆ, ವೃದ್ಧಾಶ್ರಮಗಳಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳ ಅಗತ್ಯತೆ ಬಗ್ಗೆ ಈ ಘಟನೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.













