Last Updated:
ಆದೇಶ ಮಾರ್ಪಾಡು ಮಾಡುವಂತೆ ದರ್ಶನ್ ಅರ್ಜಿ ಸಲ್ಲಿಸಿದ್ದು, ಈ ಮೂಲಕ ಜಾಮೀನು ಕೋರದಿದ್ದರೂ, ಭವಿಷ್ಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮಾರ್ಗ ಕಂಡು ಕೊಳ್ಳಲು ನಟ ದರ್ಶನ್ ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೇಸ್ನಲ್ಲಿ ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಕೇಸ್ಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ (Supreme Court) ಒಂದು ವರ್ಷದಲ್ಲಿ ಮುಗಿಸುವಂತೆ ನಿರ್ದೇಶನ ನೀಡಿದೆ. ಹೀಗಾಗಿ ದರ್ಶನ್ ಒಂದು ವರ್ಷಗಳ ಕಾಲ ಜೈಲಲ್ಲಿರೋದು ಫಿಕ್ಸ್ ಆಗಿದೆ. ನಿನ್ನೆ ಅಷ್ಟೇ ನಟ ದರ್ಶನ್ ಪರ ವಕಾಲತ್ತಿನಿಂದ ವಕೀಲ ಸುನೀಲ್ ನಿವೃತ್ತಿ ಬಯಸಿದ್ರು. ದರ್ಶನ್ ಪರ ವಕಾಲತ್ತು ವಹಿಸಲ್ಲ ಅಂತ 59ನೇ ಸಿಸಿಹೆಚ್ ಕೋರ್ಟ್ಗೆ ಮೆಮೋ ಸಲ್ಲಿಸಿದ್ರು. ಸದ್ಯ ದರ್ಶನ್ ಕೇಸನ್ನು ವಕೀಲ ಹಷ್ಮತ್ ಪಾಷಾ ಮುನ್ನಡೆಸುತ್ತಿದ್ದು, ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಒಂದು ವರ್ಷದೊಳಗೆ ಯಾವುದೇ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ ಈ ಆದೇಶದಿಂದ ಟ್ರಯಲ್ ಇನ್ನಷ್ಟು ವಿಳಂಬವಾಗಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ಮಾನವೀಯ ನೆಲೆಗಳಲ್ಲಿ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ನನ್ನ ದೀರ್ಘಾವಧಿಯ ಬಂಧನವನ್ನು ಪರಿಗಣಿಸಬೇಕು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ರಕ್ಷಿತವಾಗಿದೆ. ದೀರ್ಘಾವಧಿಯ ಬಂಧನವನ್ನು ನ್ಯಾಯಾಲಯ ಪರಿಶೀಲಿಸಬೇಕು.
ದೀರ್ಘ ಬಂಧನದಿಂದ ತಮ್ಮ ವೃತ್ತಿಜೀವನ, ಜೀವನೋಪಾಯ ಮತ್ತು ಕುಟುಂಬಕ್ಕೆ ತೀವ್ರ ಹಾನಿಯಾಗಿದೆ. ತಾಯಿಯ ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದಾರೆ. ಒಂದು ವರ್ಷ ಜಾಮೀನು ನೀಡದಿರುವ ಆದೇಶ ವ್ಯಾಪಕ ಪರಿಣಾಮ ಬೀರಬಹುದು. ಹೀಗಾಗಿ ಒಂದು ವರ್ಷದ ತನಕ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನೀಡಿರುವ ಆದೇಶ ಮಾರ್ಪಾಡು ಮಾಡಬೇಕು ಎಂದು ನಟ ದರ್ಶನ್ ಮನವಿ ಮಾಡಿದ್ದು, ಈ ಮೂಲಕ ಜಾಮೀನು ಕೋರದಿದ್ದರೂ, ಭವಿಷ್ಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮಾರ್ಗ ಕಂಡುಕೊಳ್ಳಲು ನಟ ದರ್ಶನ್ ಪ್ರಯತ್ನಿಸುತ್ತಿದ್ದಾರೆ.
(ವರದಿ: ಗಂಗಾಧರ್ ವಾಗಟ, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka













