Last Updated:
Crime News: 28 ವರ್ಷದ ವಿವಾಹಿತ ಮಹಿಳೆಯೊಬ್ಬರ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳಿಗೆ ಜೀವಂತ ಬುಲೆಟ್ (ಕಾರ್ಟ್ರಿಡ್ಜ್), ಕಲ್ಲು ಹಾಗೂ ಮರದ ತುಂಡುಗಳನ್ನು ಹಾಕಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದರಂತೆ, ಈ ಕ್ರೂರ ಕೃತ್ಯವು ದೆಹಲಿಯ ನಿರ್ಭಯಾ ಪ್ರಕರಣದ ಭೀಕರತೆಯನ್ನು ನೆನಪಿಸುವಂತಿದೆ. ಆ ಕುರಿತ ವರದಿ ಇಲ್ಲಿದೆ.
ಬೇಗುಸರಾಯ್ (ಬಿಹಾರ): ಬಿಹಾರದ (Bihar) ಬೇಗುಸರಾಯ್ನಲ್ಲಿ (Begusarai) ನಡೆದ ಅಮಾನುಷ ಸಾಮೂಹಿಕ ಅತ್ಯಾಚಾರ ಪ್ರಕರಣ (Gang Rape Case) ದೇಶವನ್ನೇ ಬೆಚ್ಚಿಬೀಳಿಸಿದೆ. 28 ವರ್ಷದ ವಿವಾಹಿತ ಮಹಿಳೆಯೊಬ್ಬರ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳಿಗೆ ಜೀವಂತ ಬುಲೆಟ್ (ಕಾರ್ಟ್ರಿಡ್ಜ್), ಕಲ್ಲು ಹಾಗೂ ಮರದ ತುಂಡುಗಳನ್ನು ಹಾಕಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದರಂತೆ, ಈ ಕ್ರೂರ ಕೃತ್ಯವು ದೆಹಲಿಯ ನಿರ್ಭಯಾ ಪ್ರಕರಣದ (Nirbhaya Case) ಭೀಕರತೆಯನ್ನು ನೆನಪಿಸುವಂತಿದೆ. ಆ ಕುರಿತ ವರದಿ ಇಲ್ಲಿದೆ.
ಜೂನ್ 11, 2026 ರ ತಡರಾತ್ರಿ ಬಿಹಾರದ ಬೇಗುಸರಾಯ್ ಜಿಲ್ಲೆಯ ಚಕಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ರಾತ್ರಿ 11:30ರ ಸುಮಾರಿಗೆ ಶೌಚಾಲಯಕ್ಕೆಂದು ಮನೆಯಿಂದ ಹೊರಬಂದಾಗ, ಐವರು ಯುವಕರು ಆಕೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಅಪಹರಿಸಿದ್ದಾರೆ. ಆಕೆಯ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಕಿರುಚದಂತೆ ತಡೆದು ಸರಣಿ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಪ್ರಜ್ಞೆ ತಪ್ಪುವವರೆಗೂ ಆಕೆಯ ಮೇಲೆ ಹಲ್ಲೆ ನಡೆಸಿ, ಚೂಪಾದ ವಸ್ತುವಿನಿಂದ ದೇಹದ ಹಲವೆಡೆ ಗಾಯಗೊಳಿಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಪತಿ ಆಕೆಯನ್ನು ಹುಡುಕಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದರು.
ಮುಂದುವರೆದು, ವೈದ್ಯರು ಆಕೆಗೆ ತೀವ್ರ ವೈದ್ಯಕೀಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ನಡೆಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದವು. ಅದುವೇ, ಆಕೆಯ ಖಾಸಗಿ ಭಾಗದಿಂದ ಒಂದು ಜೀವಂತ ಬುಲೆಟ್ (ಕಾರ್ಟ್ರಿಡ್ಜ್), ಕಲ್ಲಿನ ತುಂಡು ಮತ್ತು ಮರದ ತುಂಡನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಈ ವಿದೇಶಿ ವಸ್ತುಗಳಿಂದಾಗಿ ಆಕೆಯ ಆಂತರಿಕ ಅಂಗಗಳಿಗೆ ತೀವ್ರ ಹಾನಿಯಾಗಿದ್ದು, ಪ್ರಸ್ತುತ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಏತನ್ಮಧ್ಯೆ, ಘಟನೆ ನಡೆದ ತಕ್ಷಣವೇ ಮಾಹಿತಿ ನೀಡಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮೂರು ತಿಂಗಳ ಹಿಂದೆಯೂ ಇದೇ ಆರೋಪಿಗಳು ಸಂತ್ರಸ್ತೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಮತ್ತು ಆ ಬಗ್ಗೆ ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ಈ ಬೇಜವಾಬ್ದಾರಿತನವು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದುವರೆದು, ಘಟನೆಯ ಸುದ್ದಿ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತ ಬೇಗುಸರಾಯ್ ಪೊಲೀಸರು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಡಿಎಸ್ಪಿ ಆನಂದ್ ಕುಮಾರ್ ಪಾಂಡೆ ನೇತೃತ್ವದಲ್ಲಿ ವೈಜ್ಞಾನಿಕ ತನಿಖೆ ಪ್ರಗತಿಯಲ್ಲಿದೆ. ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ವರದಿಗಳ ಪ್ರಕಾರ ಸಂತ್ರಸ್ತೆ ಮೇಲೆ ಸುಮಾರು ಮೂರು ತಿಂಗಳ ಹಿಂದೆ ಅತ್ಯಾಚಾರಕ್ಕೆ ಯತ್ನ ನಡೆದಿತ್ತು. ಆಗಲೇ ಆಕೆ ಚಕಿಯಾ ಪೊಲೀಸ್ ಠಾಣೆಗೆ ಹೋಗಿ ಮೌಖಿಕ ದೂರು ನೀಡಿದ್ದರು. ಆದರೆ ಪೊಲೀಸರು ಆ ದೂರನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಆ ಸಮಯದಲ್ಲೇ ಕಾನೂನು ಕ್ರಮ ಜರುಗಿಸಿದ್ದರೆ ಜೂನ್ 11 ರಂದು ನಡೆದ ಘೋರ ಸಾಮೂಹಿಕ ಅತ್ಯಾಚಾರ ತಪ್ಪಿಸಬಹುದಿತ್ತು ಎನ್ನುವುದು ಸ್ಥಳೀಯರ ಆಕ್ರೋಶ.
ಇದರೊಂದಿಗೆ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕ ಅಮರೇಂದ್ರ ಕುಮಾರ್ ಅಮರ್ ಅವರು, “ಇದು ಅದೇ ಮಹಿಳೆ ಮೇಲೆ ನಡೆದ ಮೂರನೇ ಪ್ರಮುಖ ಅಪರಾಧ” ಎಂದು ಆರೋಪಿಸಿದ್ದಾರೆ. ಮೊದಲು ಅತ್ಯಾಚಾರ ಯತ್ನ, ನಂತರ ದರೋಡೆ, ಈಗ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸರು ತಾವು ಸೂಕ್ಷ್ಮ ಮತ್ತು ಜನಸ್ನೇಹಿ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಈ ಹೇಳಿಕೆ ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Begusarai,Bihar













