ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎನ್. ಹರಿಹರನ್, ವಿಕಾಸ್ ಸಿಂಗ್ ಮತ್ತು ಗೋಪಾಲ್ ಶಂಕರನಾರಾಯಣ್ ವಾದ ಮಂಡಿಸಿದರು. ಅವರು ನ್ಯಾಯಾಲಯದ ಮುಂದೆ ಪ್ರತಿಭಟನೆ ಹತ್ತಿಕ್ಕುವ ವೇಳೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಖಾಸಗಿ ಅಂಗಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಮೊಳೆಗಳನ್ನು ಜಡಿಯಲಾಗಿದ್ದ ಅಪಾಯಕಾರಿ ಲಾಠಿಗಳನ್ನು (Batons with nails) ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ದಾಳಿ ನಡೆಸಿದ ಹಲವು ಪೊಲೀಸ್ ಸಿಬ್ಬಂದಿಗಳು ಯಾವುದೇ ನೇಮ್ ಬ್ಯಾಡ್ಜ್ ಧರಿಸಿರಲಿಲ್ಲ. ಅವರು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅವರು ನಿಜವಾದ ಪೊಲೀಸರಂತೆ ಕಾಣುತ್ತಿರಲಿಲ್ಲ. ದಾಳಿ ನಡೆಸಿದ ಹಲವು ವ್ಯಕ್ತಿಗಳು ಪೊಲೀಸ್ ಸಮವಸ್ತ್ರ ಧರಿಸಿರಲಿಲ್ಲ ಮತ್ತು ಯಾವುದೇ ನೇಮ್ ಬ್ಯಾಡ್ಜ್ ಅಥವಾ ಗುರುತಿನ ಚೀಟಿಯನ್ನು ಹೊಂದಿರಲಿಲ್ಲ ಎಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್ ವಾದಿಸಿದರು.
ಹೆಲ್ಮೆಟ್, ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಅಪರಿಚಿತ ವ್ಯಕ್ತಿಗಳು ಓಡುತ್ತಿದ್ದ ಯುವ ವಿದ್ಯಾರ್ಥಿಗಳನ್ನು ಕೆಳಗೆ ತಳ್ಳಿ, ಗುಂಪು ಕಟ್ಟಿಕೊಂಡು ಕ್ರೂರವಾಗಿ ಥಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ ಎಂದು ಕೋರ್ಟ್ಗೆ ತಿಳಿಸಲಾಯಿತು.
ಸುಪ್ರೀಂ ಕೋರ್ಟ್ನ 2012ರ ಆದೇಶದ ಪ್ರಕಾರ ಅಶ್ರುವಾಯು ಪ್ರಯೋಗವು ಕೊನೆಯ ಆಯ್ಕೆಯಾಗಿರಬೇಕು. ಆದರೆ, ಇಲ್ಲಿ ತಾಯಿ ಮತ್ತು ಮಕ್ಕಳಿದ್ದ ಗುಂಪಿನ ಮೇಲೂ ಅಶ್ರುವಾಯು ಶೆಲ್ಗಳನ್ನು ಎಸೆಯಲಾಗಿದೆ. ಸಮಾಜಕರ್ತ ಸೋನಮ್ ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಕಾನೂನುಬಾಹಿರವಾಗಿ ತೆರವುಗೊಳಿಸಲಾಗಿದೆ.
ಈ ಎಲ್ಲಾ ದೌರ್ಜನ್ಯಗಳನ್ನು ಸಾಬೀತುಪಡಿಸಲು ತಮ್ಮ ಬಳಿ 110 ವಿಡಿಯೋ ರೆಕಾರ್ಡಿಂಗ್ಗಳಿವೆ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಪ್ರತಿಭಟನಾಕಾರರ ಮೇಲೆ ಗೂಬೆ ಕೂರಿಸಲು ಪೊಲೀಸರೇ ಮುಂಚಿತವಾಗಿ ಕಲ್ಲು ತುಂಬಿದ ವಾಹನವನ್ನು ತಂದು ನಿಲ್ಲಿಸಿದ್ದರು ಎಂದು ಆರೋಪಿಸಿದರು.
ಕೇಂದ್ರ ಮತ್ತು ದೆಹಲಿ ಪೊಲೀಸರ ಪರ ವಾದಿಸಿದ ಎಎಸ್ಜಿ (ASG) ಎಸ್. ರಾಜು ಅವರು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಪ್ರತಿಭಟನಾಕಾರರು ಶಾಂತಿಯುತವಾಗಿರಲಿಲ್ಲ, ಅವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿಂಸಾಚಾರದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ರಾಜಕೀಯ ಪಕ್ಷಗಳು ಈ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂದರು.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೇವಲ “ಮಾಧ್ಯಮಗಳ ಗಮನ ಸೆಳೆಯಲು ಮತ್ತು ಪ್ರಚಾರ ಪಡೆಯಲು” (Hogging the limelight) ಸಲ್ಲಿಸಲಾಗಿರುವ ಅರ್ಜಿಗಳಾಗಿವೆ. ಗಾಯಗೊಂಡ ನಿಜವಾದ ಸಂತ್ರಸ್ತರು ಯಾರೂ ಕೋರ್ಟ್ಗೆ ಬಂದಿಲ್ಲ, ಆದ್ದರಿಂದ ಈ ಅರ್ಜಿಗಳಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಅವರು ವಾದಿಸಿದರು.
ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಕೆಲವು ಹೊರಗಿನ ರಾಜಕೀಯ ಶಕ್ತಿಗಳು ಮತ್ತು ಅಪರಿಚಿತ ವ್ಯಕ್ತಿಗಳು ಹೈಜಾಕ್ ಮಾಡಿದ್ದರು ಎಂದು ವಾದಿಸಿದರು. ವಿಡಿಯೋಗಳಲ್ಲಿ ಕಾಣಿಸುವ ಅಪರಿಚಿತ ವ್ಯಕ್ತಿಗಳು ಪೊಲೀಸರಲ್ಲ, ಬದಲಿಗೆ ಪ್ರತಿಭಟನಾಕಾರರ ಗುಂಪಿನಲ್ಲಿದ್ದ ಹಿಂಸಾತ್ಮಕ ವ್ಯಕ್ತಿಗಳಾಗಿದ್ದು, ಅವರೇ ಕಲ್ಲು ತೂರಾಟ ನಡೆಸಿ ಪೊಲೀಸರನ್ನು ಗಾಯಗೊಳಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ವಾದವನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿಗಳ ಪೀಠವು, “ಇದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿ ಎಂದು ನೀವು ಹೇಗೆ ಹೇಳುತ್ತೀರಿ?” ಎಂದು ಎಎಸ್ಜಿ ಅವರನ್ನು ತರಾಟೆಗೆ ತೆಗೆದುಕೊಂಡಿತು. ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಕದಲಿಸಿರುವ ಇಂತಹ ಘಟನೆಯನ್ನು ಕೇವಲ ಪ್ರಚಾರ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಜೊತೆಗೆ ಘಟನಾ ಸ್ಥಳದಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಸಂರಕ್ಷಿಸಬೇಕು. ಪೊಲೀಸರ ಬಾಡಿ ಕ್ಯಾಮೆರಾ ರೆಕಾರ್ಡಿಂಗ್ಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಡಿಜಿಟಲ್ ಪುರಾವೆಗಳನ್ನು ನಿಗದಿಪಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOP) ಪ್ರಕಾರ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ದೆಹಲಿ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.
ಸಿವಿಲ್ ಉಡುಪಿನಲ್ಲಿದ್ದವರು ಯಾರು ಮತ್ತು ಪ್ರತಿಭಟನೆಯಲ್ಲಿ ಹಿಂಸಾಚಾರ ಉಂಟುಮಾಡಿದ ಖಾಸಗಿ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ಈ ಸಾಕ್ಷ್ಯಗಳು ಪ್ರಮುಖವಾಗಲಿವೆ. ಈ ಎಲ್ಲಾ ಗಂಭೀರ ಆರೋಪಗಳಿಗೆ ವಿವರವಾದ ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಪೊಲೀಸ್ ಮತ್ತು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11, 2026 ಕ್ಕೆ ನಿಗದಿಪಡಿಸಿದೆ.













