Last Updated:
ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಪೊಲೀಸ್ ಕಸ್ಟಡಿಯಲ್ಲಿ ಪರಸ್ಪರ ಕೊಲೆ ಆರೋಪ ಹೊರಿಸುತ್ತಿದ್ದಾರೆ. ಅಲ್ಲದೇ ಪೊಲೀಸರ ಮುಂದೆ ಸಿಯಾ ಇಟ್ಟ ಡಿಮ್ಯಾಂಡ್ ಕೇಳಿ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಮಹಾರಾಷ್ಟ್ರದ ಪ್ರಸಿದ್ಧ ಲೋಹಗಡ್ ಕೋಟೆಯಲ್ಲಿ ನಡೆದ ಭಯಾನಕ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಭಾವಿ ಪತಿ ಕೇತನ್ ಅಗರ್ವಾಲ್ ನನ್ನು ನೂರಾರು ಅಡಿ ಆಳದ ಕಂದಕಕ್ಕೆ ತಳ್ಳಿ ಕೊಂದ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chethan Chowdari) ಎಂಬ ಇಬ್ಬರು ಇದೀಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಇದೀಗ ತನಿಖೆ ವೇಳೆ ಇಬ್ಬರು ಪರಸ್ಪರ ಆರೋಪ ಮಾಡುತ್ತಿದ್ದು ಈ ಮಧ್ಯೆ ಸಿಯಾ ಪೊಲೀಸರ ಮುಂದೆ ಒಂದು ವಿಶೇಷ ಡಿಮ್ಯಾಂಡ್ ಇಟ್ಟಿದ್ದಾಳೆ.
ಕೇತನ್ ಅಗರ್ವಾಲ್ ನನ್ನು ಲೋಹಗಡ್ ಕೋಟೆಗೆ ಕರೆದೊಯ್ದು, ಆಳವಾದ ಕಂದಕಕ್ಕೆ ತಳ್ಳಿ ಕೊಲ್ಲಲಾಗಿದೆ. ಮೊದಲಿಗೆ ಇದು ಅಪಘಾತ ಎನ್ನಲಾಗಿದ್ರೂ ನಂತರ ಅದು ಕೊಲೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ಎಲ್ಲಾ ಆಯಾಮಗಳಲ್ಲೂ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆ ಮಹಾರಾಷ್ಟ್ರವನ್ನು ಮಾತ್ರವಲ್ಲ, ಇಡೀ ಭಾರತವನ್ನೇ ಆಘಾತಕ್ಕೊಳಗಾಗುವಂತೆ ಮಾಡಿದೆ. ಪೊಲೀಸರು ಸಿಯಾ ಮತ್ತು ಚೇತನ್ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೂ ಜೂನ್ 29 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಇಬ್ಬರನ್ನೂ ಪ್ರತ್ಯೇಕ ಲಾಕಪ್ಗಳಲ್ಲಿ ಇಟ್ಟಿದ್ದಾರೆ. ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಸಿಯಾ ಮತ್ತು ಚೇತನ್ ಯಾವುದೇ ಪಶ್ಚಾತ್ತಾಪವನ್ನು ತೋರಿಸದೇ ಇಬ್ಬರು ಪರಸ್ಪರ ಆರೋಪಗಳನ್ನು ಮಾಡುತ್ತಿದ್ದಾರೆ.
ಕೊಲೆ ಮಾಡಿದ ನಂತರವೂ ಅವರ ಮುಖದಲ್ಲಿ ಯಾವುದೇ ಚಿಂತೆ, ಭಯ ಅಥವಾ ವಿಷಾದ ಕಾಣುತ್ತಿಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತವೆ. ಇನ್ನೂ ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ, ಬಂಧನದಲ್ಲಿರುವ ಸಿಯಾ ಪೊಲೀಸರನ್ನು ಬಿಯರ್ ಮತ್ತು ಮದ್ಯ ಕೇಳಿದ್ದಾಳೆ ಎಂದು ವರದಿಯಾಗಿದೆ. ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ವ್ಯಕ್ತಿ ಮದ್ಯ ಬೇಡುವುದು ಎಲ್ಲರನ್ನೂ ಆಘಾತಗೊಳಿಸಿದೆ. ಪೊಲೀಸರು ಆಕೆಯ ಬೇಡಿಕೆಯನ್ನು ನಿರಾಕರಿಸಿ ಖಂಡಿಸಿದಾಗ ಸಿಯಾ ಕೋಪಗೊಂಡಿದ್ದಾಳೆ ಎನ್ನಲಾಗಿದೆ. ಇದು ಆಕೆಯ ಮನಸ್ಸಿನ ಸ್ಥಿತಿಯನ್ನು ತೋರಿಸುತ್ತದೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ.
ವಿಚಾರಣೆಯ ವೇಳೆ ಸಿಯಾ ಮತ್ತು ಚೇತನ್ ಪರಸ್ಪರ ದೂಷಿಸುತ್ತಿದ್ದಾರೆ. ಚೇತನ್ ಹೇಳುವಂತೆ, ಅವರು ಸಿಯಾ ಜೊತೆ ಓಡಿಹೋಗಲು ಬಯಸಿದ್ದರು. ಆದರೆ ಕುಟುಂಬದ ಅಪಖ್ಯಾತಿಗೆ ಹೆದರಿ ಸಿಯಾ ನಿರಾಕರಿಸಿ, ಕೇತನ್ ನನ್ನು ಕೊಲ್ಲುವಂತೆ ಒತ್ತಾಯಿಸಿದಳು ಎಂದು ಚೇತನ್ ಹೇಳಿದ್ದಾನೆ. ಮತ್ತೊಂದೆಡೆ ಸಿಯಾ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ, ಕೊಲೆಯ ಯೋಜನೆ ಮತ್ತು ಆಲೋಚನೆ ಚೇತನ್ನದ್ದು ಎಂದು ಹೇಳುತ್ತಿದ್ದಾಳೆ. ಇಬ್ಬರೂ ಒಬ್ಬರ ಮೇಲೊಬ್ಬರು ಹೊಣೆ ಹಾಕುತ್ತಿರುವುದು ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ.
ಈ ಪ್ರಕರಣ ಯುವಕರ ಮನಸ್ಸಿನಲ್ಲಿ ಬೆಳೆಯುತ್ತಿರುವ ಕ್ರೌರ್ಯ, ಸ್ವಾರ್ಥ ಮತ್ತು ಪ್ರೇಮದ ಹೆಸರಿನಲ್ಲಿ ನಡೆಯುವ ಅಪರಾಧಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕೇತನ್ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಇನ್ನೂ ಆಘಾತದಿಂದ ಹೊರಬರಲು ಸಾಧ್ಯವಾಗಿಲ್ಲ. ಒಂದು ಸಾಮಾನ್ಯ ಜೀವನವನ್ನು ಬಯಸುತ್ತಿದ್ದ ಯುವಕನನ್ನು ಈ ರೀತಿ ಕೊಲ್ಲುವುದು ಸಮರ್ಥನೀಯವಲ್ಲ ಎಂದು ಜನರು ಹೇಳುತ್ತಿದ್ದಾರೆ.
ಪೊಲೀಸರು ಈಗ ವ್ಯಾಪಕ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಕಾರಣಗಳು, ಯೋಜನೆ ಹೇಗೆ ರೂಪುಗೊಂಡಿತು, ಇನ್ನಿತರ ವಿವರಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಈ ಘಟನೆಯು ಸಮಾಜಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ಪ್ರೇಮ, ಹಣ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಜೀವ ತೆಗೆಯುವಂತಹ ಕ್ರೌರ್ಯಗಳು ಹೆಚ್ಚಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ. ಸಿಯಾ ಮತ್ತು ಚೇತನ್ ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ನಾವು ಕಾಯುತ್ತಿದ್ದೇವೆ.
Pune,Maharashtra













