Last Updated:
ಶುಕ್ರವಾರ, ಸತತ 2 ಭೂಕಂಪಗಳಲ್ಲಿ ಕನಿಷ್ಠ 920 ಜನರು ಸಾವನ್ನಪ್ಪಿದ್ದಾರೆ ಮತ್ತು 3,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಿಂದ ತೀವ್ರ ಆತಂಕಕ್ಕೆ ಒಳಗಾದ ಜನರು ಕಾಣೆಯಾದ ಸಂಬಂಧಿಕರ ಹುಡುಕಾಟಕ್ಕೆ ಪರದಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಕ್ಯಾರಕಾಸ್: ವೆನೆಜುವೆಲಾದ (Venezuela Earthquake) ಉತ್ತರ ಕರಾವಳಿಯಲ್ಲಿ 4.9 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಈಗಾಗಲೇ ಭಾರಿ ವಿಪತ್ತಿನಿಂದ ತತ್ತರಿಸಿರುವ ಆ ಪ್ರದೇಶದಲ್ಲಿ ಹೊಸ ಆತಂಕ ಉಂಟಾಗಿದೆ.
ಭೂಕಂಪ ಟ್ರ್ಯಾಕಿಂಗ್ ಸಂಸ್ಥೆ EMSC ಪ್ರಕಾರ, ಮರಕೇಯಿಂದ ವಾಯುವ್ಯಕ್ಕೆ 61 ಕಿಲೋಮೀಟರ್ (36 ಮೈಲುಗಳು) ದೂರದಲ್ಲಿ ಭೂಕಂಪನ ಸಂಭವಿಸಿದೆ. ಮರಕೇ ಮತ್ತು ರಾಜಧಾನಿ ಕ್ಯಾರಕಾಸ್ ಎರಡರಲ್ಲೂ ಕಂಪನದ ಅನುಭವ ಸ್ಪಷ್ಟವಾಗಿ ಸಂಭವಿಸಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ಬುಧವಾರ ಸಂಜೆ ದೇಶದಲ್ಲಿ ಸಂಭವಿಸಿದ ವಿನಾಶಕಾರಿ ಎರಡು ಪ್ರಬಲ ಭೂಕಂಪಗಳ ನಂತರ ಶುಕ್ರವಾರ ಹೊಸ ಭೂಕಂಪ ಸಂಭವಿಸಿದೆ. ಈ ಎರಡೂ ಭೂಕಂಪನದಿಂದ ಭಾರೀ ವಿನಾಶ ಸಂಭವಿಸಿದ್ದು, ಕ್ಯಾರಕಾಸ್ನ ಕೆಲವು ಭಾಗಗಳು ಭಾರಿ ಹಾನಿಗೊಳಗಾಗಿದೆ. ಈ ಭೀಕರ ದುರಂತದಲ್ಲಿ ಕನಿಷ್ಠ 920 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಸಂಭವಿಸಿದ ಭೂಕಂಪದಿಂದ ಯಾವುದೇ ಹೆಚ್ಚುವರಿ ಹಾನಿ ಅಥವಾ ಸಾವುನೋವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಹೊರಬಂದಿಲ್ಲ.
ಶುಕ್ರವಾರ, ಸತತ 2 ಭೂಕಂಪಗಳಲ್ಲಿ ಕನಿಷ್ಠ 920 ಜನರು ಸಾವನ್ನಪ್ಪಿದ್ದಾರೆ ಮತ್ತು 3,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಿಂದ ತೀವ್ರ ಆತಂಕಕ್ಕೆ ಒಳಗಾದ ವೆನೆಜುವೆಲಾದ ಜನರು ಕಾಣೆಯಾದ ಸಂಬಂಧಿಕರ ಹುಡುಕಾಟವನ್ನು ಮಾಡುತ್ತಿರುವ ವಿಡಿಯೋ ಕರುಳು ಕಿವುಚಿದಂತೆ ಕಂಡುಬಂದಿದೆ. ತಮ್ಮ ಮನೆಗಳ ಅವಶೇಷಗಳನ್ನು ಅಗೆಯುತ್ತಿರುವ ನಾಗರಿಕರು, ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ಕಾರಿ ರಕ್ಷಣಾ ತಂಡಗಳು ತ್ವರಿತವಾಗಿ ತಲುಪದೇ ಇರುವುದನ್ನು ವರದಿ ಮಾಡಿದ್ದಾರೆ.
ರಕ್ಷಣಾ ತಂಡಗಳ ಕೊರತೆಯು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅವಶೇಷಗಳಡಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವವರ ರಕ್ಷಣೆಗೆ ಈಗಾಗಲೇ ತಡವಾಗಿದ್ದು, ಜನ ಸಂಕಷ್ಟ ಪಡುತ್ತಿದ್ದಾರೆ. ಬುಧವಾರ ತಡರಾತ್ರಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಭೂಕಂಪ ನಡೆದು ಸುಮಾರು 48 ಗಂಟೆಗಳು ಕಳೆದರೂ ನೆರವಿಗಾಗಿ ರಕ್ಷಣಾ ತಂಡಗಳು ಎಲ್ಲಾ ಕಡೆಗೆ ತಲುಪಿಲ್ಲ ಎಂದು ಆರೋಪಿಸಲಾಗಿದೆ. ಮೊದಲ 48 ರಿಂದ 72 ಗಂಟೆಗಳನ್ನು ಅವಶೇಷಗಳಡಿ ಸಿಲುಕಿದವರನ್ನು ಜೀವಂತವಾಗಿ ಹೊರತರಲು ಗೋಲ್ಡನ್ ಅವರ್ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಅವರಿಗೆ ಆಹಾರ ಮತ್ತು ನೀರು ಲಭ್ಯವಿದ್ದರೆ ಮಾತ್ರ ಬದಕಲು ಸಾಧ್ಯವಾಗುತ್ತದೆ.
ಸ್ಥಳೀಯ ಬಿಕ್ಕಟ್ಟಿನ ಮಧ್ಯೆ, ಬೃಹತ್ ಅಂತರರಾಷ್ಟ್ರೀಯ ಪರಿಹಾರ ಪ್ರಯತ್ನವು ವೇಗವನ್ನು ಪಡೆಯುತ್ತಿದೆ. ಪ್ರಪಂಚದಾದ್ಯಂತದ ಎರಡು ಡಜನ್ಗಿಂತಲೂ ಹೆಚ್ಚು ರಕ್ಷಣಾ ತಂಡಗಳು ವೆನೆಜುವೆಲಾದಲ್ಲಿ ಬಂದಿಳಿದಿವೆ. ಜನರ ಪರ ಸಹಾಯ ಮಾಡಲು ರಕ್ಷಣಾ ಕಾರ್ಯ ಕೈಗೊಂಡಿದೆ.













