Last Updated:
ಟ್ರಯಲ್ ವೇಳೆ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಇದೀಗ ಆ ಅರ್ಜಿ ವಾಪಸ್ಸು ಪಡೆಯಲು ದರ್ಶನ್ ಪರ ವಕೀಲ ನಿರ್ಧರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮಹತ್ತರ ಘಟ್ಟ ತಲುಪಿದೆ ತಲುಪಿದೆ. ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಡಿ ಗ್ಯಾಂಗ್ನ ಎಲ್ಲಾ 17 ಆರೋಪಿಗಳ ವಿರುದ್ಧದ ಪ್ರಕರಣದ ಟ್ರಯಲ್ ಈಗಾಗಲೇ ಹೊಸ ನ್ಯಾಯಾಧೀಶರ ಮುಂದೆ ಆರಂಭವಾಗಿದೆ. ಈ ಮಧ್ಯೆ ಟ್ರಯಲ್ ವೇಳೆ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಇದೀಗ ಆ ಅರ್ಜಿ ವಾಪಸ್ಸು ಪಡೆಯಲು ದರ್ಶನ್ ಪರ ವಕೀಲರು ನಿರ್ಧರಿಸಿದ್ದಾರೆ.
ಹೌದು ವಿಚಾರಣೆ ಆರಂಭವಾಗುವ ಮುನ್ನ ದರ್ಶನ್ ಪರ ವಕೀಲ ಸುನೀಲ್ ಅವರು ಮಹತ್ವದ ಅರ್ಜಿಯೊಂದನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯ ವೇಳೆ ಆರೋಪಿಗಳ ಖುದ್ದು ಹಾಜರಾತಿಗೆ ಅವಕಾಶ ನೀಡುವಂತೆ ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿ ನ್ಯಾಯಾಂಗ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲವೂ ಮೂಡಿತ್ತು.
ಆದರೆ ಇದೀಗ ದರ್ಶನ್ ಪರ ವಕೀಲರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ನಿನ್ನೆ ಸಲ್ಲಿಸಲಾಗಿದ್ದ ಖುದ್ದು ಹಾಜರಾತಿ ಅರ್ಜಿಯನ್ನು ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ದರ್ಶನ್ ಪರ ವಕೀಲ ಸುನೀಲ್ ಅವರು ನ್ಯಾಯಾಲಯದ ಮುಂದೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾಳೆ ಅಧಿಕೃತವಾಗಿ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ಈ ಒಂದು ನಿರ್ಧಾರದಿಂದ, ಕೋರ್ಟ್ ಗೆ ಭೇಟಿ ನೀಡುವ ಸಮಯದಲ್ಲಿ ಒಂದು ಬಾರಿ ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಸಿಕೊಳ್ಳುವ ಎಂದು ಆಸೆ ಇಟ್ಟುಕೊಂಡಿದ್ದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
(ವರದಿ- ಮಂಜುನಾಥ್ ನ್ಯೂಸ್ 18 ಕನ್ನಡ, ಬೆಂಗಳೂರು)
Bangalore [Bangalore],Bangalore,Karnataka













