Last Updated:
ದರ್ಶನ್ ಜಾಮೀನು ಪಡೆಯಲು ಇರುವ ಒಂದೇ ಒಂದು ಅವಕಾಶ ಕೂಡ ಮಿಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಕೇಸ್ ವಿಚಾರಣೆ ತ್ವರಿತಗೊಂಡಿದ್ದು, ದರ್ಶನ್ ಹಾಗೂ ಪವಿತ್ರಾಗೆ ಟೆನ್ಷನ್ ಹೆಚ್ಚಿದೆ.
ಬೆಂಗಳೂರು (ಜೂ.16): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ (Darshan) ಜೈಲು ಸೇರಿದ್ದಾರೆ. ಈ ವಿಚಾರಣೆ (Murder Case Trial) ಇದೀಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಪ್ರಕರಣದ ತ್ವರಿತಗತಿ ವಿಚಾರಣೆಗೆ ಸಂಬಂಧಿಸಿದಂತೆ ಸಿಸಿಎಚ್ 59ರ ಸೆಷನ್ಸ್ ನ್ಯಾಯಾಲಯವು ಮಹತ್ವದ ಆದೇಶ ನೀಡಿದ್ದು, ವಾರದಲ್ಲಿ ಕನಿಷ್ಠ 4 ದಿನಗಳ ಕಾಲ ನಿರಂತರ ವಿಚಾರಣೆ (Continuous Inquiry) ನಡೆಸಲು ಸಮ್ಮತಿ ಸೂಚಿಸಿದೆ.
ಸುಪ್ರೀಂಕೋರ್ಟ್ನ ನಿರ್ದೇಶನದ ಬೆನ್ನಲ್ಲೇ, ಪ್ರಕರಣವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ನ್ಯಾಯಾಲಯ ಉಭಯ ವಕೀಲರಿಗೆ ಖಡಕ್ ಸೂಚನೆ ನೀಡಿದೆ. ಹೀಗಾಗಿ ವಾರದಲ್ಲಿ 4 ದಿನ ವಿಚಾರಣೆ ನಡೆಯಲಿದ್ದು, ಅಗತ್ಯಬಿದ್ದರೇ 5 ದಿನ ಕೂಡ ವಿಚಾರಣೆ ನಡೆಯಲ್ಲಿದೆ.
ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಹಾಗೂ ಕ್ರಾಸ್ ಎಕ್ಸಾಮಿನೇಷನ್ ಕೂಡ ನಡೆಬೇಕಿದೆ. ನಿನ್ನೆ (ಜೂ.15) ನಡೆದ ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು, ಸುಪ್ರೀಂ ಕೋರ್ಟ್ ಸೂಚನೆಯಂತೆ ಒಂದು ವರ್ಷದೊಳಗೆ ಪ್ರಕರಣದ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಸಬೇಕಿದೆ ಎಂದು ಕೋರ್ಟ್ ಗಮನಕ್ಕೆ ತಂದ್ರು. ಹೀಗಾಗಿ ಪ್ರತಿದಿನವೂ ವಿಚಾರಣೆ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಪ್ರಕ್ರಿಯೆಯನ್ನು ಮುಂದೂಡಬಾರದು ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ವಾರದಲ್ಲಿ ನಾಲ್ಕು ದಿನಗಳ ಕಾಲ ಕಡ್ಡಾಯವಾಗಿ ವಿಚಾರಣೆ ನಡೆಸಲು ಆದೇಶಿಸಿದ್ದು, ಅಗತ್ಯ ಬಿದ್ದಲ್ಲಿ 5ನೇ ದಿನವೂ ವಿಚಾರಣೆಗೆ ಸಿದ್ಧರಿರಬೇಕು ಎಂದು ವಕೀಲರಿಗೆ ತಿಳಿಸಿದ್ದಾರೆ.
ಸಾಕ್ಷಿಯೊಬ್ಬರ ಕ್ರಾಸ್ ಎಕ್ಸಾಮಿನೇಷನ್ಗೆ ದರ್ಶನ್ ಪರ ವಕೀಲರು ಸಮಯವಕಾಶ ಕೇಳಿದ್ರು, ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕಾಲಹರಣ ಬೇಡ ಎಂದು ತಕ್ಷಣದ ವಿಚಾರಣೆಗೆ ಒತ್ತಾಯಿಸಿದ್ರು. ನ್ಯಾಯಾಧೀಶರು ಸಹ ತ್ವರಿತ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದಾಗ ದರ್ಶನ್ ಪರ ವಕೀಲರು ಒಪ್ಪಿಗೆ ನೀಡಿದರು. ಸುಪ್ರೀಂ ಕೋರ್ಟ್ ಗಡುವಿನ ಪ್ರಕಾರ ಪ್ರಾಸಿಕ್ಯೂಷನ್ ವಿಚಾರಣೆ ನಡೆಸಲು ಉದ್ದೇಶಿಸಿರುವ ಆ 60 ಪ್ರಮುಖ ಸಾಕ್ಷಿಗಳ ಪಟ್ಟಿಯನ್ನು ನಮಗೆ ನೀಡುವಂತೆ ದರ್ಶನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ರು.
ದರ್ಶನ್ ಜಾಮೀನು ಪಡೆಯಲು ಇರುವ ಒಂದೇ ಒಂದು ಅವಕಾಶ ಕೂಡ ಮಿಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. 1 ವರ್ಷದೊಳಗೆ ಪ್ರಕರಣದ 60 ಸಾಕ್ಷ್ಯಗಳನ್ನ ವಿಚಾರಣೆ ನಡೆಸುವಲ್ಲಿ ವಿಫಲವಾದ್ರೆ, ದರ್ಶನ್ ಬೇಲ್ ಗಾಗಿ ಮತ್ತೆ ಅರ್ಜಿ ಸಲ್ಲಿಸುವ ಅವಕಾಶವಿತ್ತು. ಆದ್ರೆ ಅದು ಕೂಡ ಈಗ ಕೈತಪ್ಪೋ ಸಾಧ್ಯತೆ ಇದೆ. ಕೋರ್ಟ್ ತ್ವರಿತಗತಿಯಲ್ಲಿ ಸಾಕ್ಷಿಗಳ ವಿಚಾರಣೆ ಸೂಚನೆ ನೀಡಿದೆ.
ಇಂದು ಕೂಡ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಪ್ರಕರಣದ ಆರೋಪಿಗಳ ಖುದ್ಧು ಹಾಜರಾತಿಗೆ ಅನುಮತಿ ಕೋರಿ ದರ್ಶನ್ ಪರ ವಕೀಲ ಸುನಿಲ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಂಬಂಧ ಇಂದು ವಿಚಾರಣೆ ನಡೆಸಲಿದ್ದು, ಅರ್ಜಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಲಿದ್ದಾರೆ.
ಇಂದು ಖುದ್ದು ಹಾಜರಾತಿ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದ್ದು, 59ನೇ ಸಿಸಿಹೆಚ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ಕೂಡ ನಡೆಸುವ ಸಾಧ್ಯತೆ ಇದೆ.
(ವರದಿ: ಮಾದೇಶ್, ನ್ಯೂಸ್18 ಕನ್ನಡ, ಬೆಂಗಳೂರು)













