ಕ್ಯಾಪ್ಟನ್ ಸೂರ್ಯಕುಮಾರ್ ಔಟ್
ಟಿ20 ವರ್ಲ್ಡ್ ಕಪ್ ನಲ್ಲಿ ತಂಡವನ್ನು ಮುನ್ನಡೆಸಿ ಕಪ್ ಗೆದ್ದು ತಂದಿದ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರನ್ನು ಈ ಸರಣಿಗಳಿಂದ ಕೈಬಿಡಲಾಗಿದೆ. ಅವರ ಜಾಗದಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ತಂಡ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅಯ್ಯರ್ ಐಪಿಎಲ್ನಲ್ಲಿ ತೋರಿದ ನಾಯಕತ್ವದ ಅನುಭವವೇ ಇದಕ್ಕೆ ಕಾರಣ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ತಿಲಕ್ ವರ್ಮಾ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ. ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಸದ್ಯ ಬೆಂಗಳೂರಿನ ಎನ್ಸಿಎ (NCA – Center of Excellence) ನಲ್ಲಿದ್ದು, ಫಿಟ್ನೆಸ್ ಕ್ಲಿಯರೆನ್ಸ್ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಕಾಡುತ್ತಿರುವ ದೊಡ್ಡ ಪ್ರಶ್ನೆ, ‘ರಜತ್ ಪಾಟಿದಾರ್ಗೆ ಯಾಕೆ ಜಾಗ ಸಿಗಲಿಲ್ಲ?’ ಐಪಿಎಲ್ನಲ್ಲಿ 15 ಪಂದ್ಯಗಳಿಂದ 42 ಸಿಕ್ಸರ್ ಸಿಡಿಸಿ, 200 ಸ್ಟ್ರೈಕ್ ರೇಟ್ನಲ್ಲಿ 501 ರನ್ ಗಳಿಸಿದರೂ ಪಾಟಿದಾರ್ ಅವರನ್ನು ತಂಡದಿಂದ ದೂರ ಇಟ್ಟಿರುವುದು ಭಾರೀ ವಿವಾದ ಸೃಷ್ಟಿಸಿದೆ.
ಇದರ ಬಗ್ಗೆ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದು, ‘ರಜತ್ ಪಾಟಿದಾರ್ ಭಾರತ ತಂಡದಲ್ಲಿ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಭಾರತದ ಅತ್ಯುತ್ತಮ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಆಗಿರುವ ಅವರು ಇನ್ನೇನು ಮಾಡಬೇಕು? ಇದು ನ್ಯಾಯವಲ್ಲ’ ಎಂದು ಪ್ರಶ್ನಿಸಿದ್ದಾರೆ.
ರಜತ್ ಪಾಟಿದಾರ್
ಇದರ ನಡುವೆಯೇ ಪ್ರತಿಕ್ರಿಯೆ ನೀಡಿರುವ ಆಕಾಶ್ ಚೋಪ್ರಾ, ಈಗಾಗಲೇ ಸೂರ್ಯ ಕೈಬಿಟ್ಟು, ರಿಂಕು ಸಿಂಗ್ ಗೆ ಶಾಕ್ ನೀಡಿದ್ದಾರೆ. ಆದ್ದರಿಂದ ಈಗ ರಜತ್ ಸ್ಥಾನ ನೀಡಬೇಕಾದರೆ ಮತ್ತೋರ್ವ ಆಟಗಾರನಿಗೆ ಕೋಕ್ ನೀಡಬೇಕು, ವಿಶ್ವಕಪ್ ಗೆದ್ದ ತಂಡದಿಂದ ಇನ್ನೇಷ್ಟು ಮಂದಿಯನ್ನು ತಂಡದಿಂದ ತೆಗೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕೇವಲ ಪಾಟಿದಾರ್ ಮಾತ್ರವಲ್ಲದೆ, ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಫಿನಿಶರ್ ರಿಂಕು ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಕ್ರೀಡಾ ಪತ್ರಕರ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕುಲದೀಪ್ ಜಾಗಕ್ಕೆ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿರುವುದರಿಂದ ಕುಲದೀಪ್ ಅವರ ಟಿ20 ಕರಿಯರ್ ಮುಗಿದ ಅಧ್ಯಾಯವೇ ಎಂಬ ಚರ್ಚೆ ಶುರುವಾಗಿದೆ.
ಶ್ರೇಯಸ್ ಅಯ್ಯರ್
ಇತ್ತ ಟಿ20 ಮಾತ್ರವಲ್ಲದೆ, ಶ್ರೀಲಂಕಾ ಪ್ರವಾಸದ ಇಂಡಿಯಾ ʻಎʼ ಟೆಸ್ಟ್ ತಂಡದಿಂದ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದ ಮುಂಬೈನ ರನ್ ಮಷೀನ್ ಸರ್ಫರಾಜ್ ಖಾನ್ ಅವರನ್ನು ಕೈಬಿಟ್ಟಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇದರ ಬಗ್ಗೆ ರಾಜಕಾರಣಿ ಶಶಿ ತರೂರ್ ಟ್ವೀಟ್ ಮಾಡಿ, ‘ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅದ್ಭುತ ರೆಕಾರ್ಡ್ ಹೊಂದಿರುವ ಸರ್ಫರಾಜ್ ಅವರನ್ನು ಕೈಬಿಟ್ಟಿರುವುದನ್ನು ಸೆಲೆಕ್ಟರ್ಸ್ ಹೇಗೆ ಜಸ್ಟಿಫೈ ಮಾಡುತ್ತಾರೆ?’ ಎಂದು ಕೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸೆಂಚುರಿ ಬಾರಿಸಿದ್ದ ಸರ್ಫರಾಜ್ ಬದಲಿಗೆ ಬೇರೆ ಆಟಗಾರರಿಗೆ ಮಣೆ ಹಾಕಿರುವುದು ಕ್ರಿಕೆಟ್ ಪಂಡಿತರ ಅಚ್ಚರಿಗೆ ಕಾರಣವಾಗಿದೆ.
ಏಷ್ಯನ್ ಗೇಮ್ಸ್ಗೆ ಭಾರತ ತಂಡ: ಶ್ರೇಯಸ್ ಐಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತಿಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶಾನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ: ಶ್ರೇಯಸ್ ಐಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತಿಶ್ ಕುಮಾರ್ ರೆಡ್ಡಿ, ಪ್ರಸಿದ್ಧ್ ಕೃಷ್ಣ , ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶಾನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ.
ಒಟ್ಟಿನಲ್ಲಿ, ಈ ಬಾರಿಯ ಟೀಮ್ ಇಂಡಿಯಾ ಸೆಲೆಕ್ಷನ್ ಹೊಸ ಆಟಗಾರರಿಗೆ ಅವಕಾಶ ನೀಡಿದ್ದರೂ, ಫಾರ್ಮ್ನಲ್ಲಿದ್ದ ಹಿರಿಯ ಆಟಗಾರರನ್ನು ಕಡೆಗಣಿಸಿರುವುದು ಸದ್ಯಕ್ಕೆ ದೊಡ್ಡ ಚರ್ಚೆಗೆ ಕಾರಣವಾಗಿದೆ.












