Last Updated:
India-China Border Tension: ಚೀನಾದವರು ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಗಡಿಯನ್ನು ಆಕ್ರಮಿಸಿಕೊಳ್ಳಬಹುದು. ಹೀಗಾಗಿ, ಚೀನೀಯರ ಪ್ರತಿಯೊಂದು ನಡೆಯನ್ನೂ ನಾವಿನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ನವದೆಹಲಿ (ಜು. 7): ಭಾರತ-ಚೀನಾ ಗಡಿಯಲ್ಲಿರುವ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ಎಲ್ಎಸಿ ಬಳಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದಾದ ಬಳಿಕ ಲಡಾಖ್ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎರಡೂ ದೇಶಗಳ ಸೇನಾ ಕಮಾಂಡರ್ಗಳ ಹಲವು ಬಾರಿಯ ಮಾತುಕತೆಯ ನಂತರ ನಿನ್ನೆ ವಿವಾದಿತ ಗಾಲ್ವಾನ್ ಕಣಿವೆಯ ಪ್ರದೇಶ ಮತ್ತಿತರೆ ಎರಡು ಪ್ರದೇಶಗಳಿಂದ ಚೀನಾ ಸೇನೆ ಹಿಂದೆ ಸರಿದಿತ್ತು. ಆದರೆ, ಚೀನಾ ಮತ್ತೆ ಮರಳಿ ಬರುವ ಸಾಧ್ಯತೆ ಇರುವುದರಿಂದ ಗಡಿಯಲ್ಲಿ ಇನ್ನಷ್ಟು ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಭಾರತ ಸೇನೆಯ ಮೂಲಗಳು ತಿಳಿಸಿವೆ.
ಸೋಮವಾರ ಬೆಳಗ್ಗೆ ಲಡಾಖ್ನಲ್ಲಿರುವ ಗಾಲ್ವಾನ್ ಕಣಿವೆಯಿಂದ ಚೀನೀ ಸೈನಿಕರು ಹಿಂದೆ ಸರಿದಿದ್ದಾರೆ. ಗಾಲ್ವಾನ್ ಕಣಿವೆಯ ಗಡಿಯಲ್ಲಿ ಗಲಾಟೆ ನಡೆದ ಬಳಿಕ ಚೀನಾ ತನ್ನ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜನೆ ಮಾಡಿತ್ತು. ಇದೀಗ ಆ ಸೇನೆ ಕೊಂಚ ಹಿಂದಕ್ಕೆ ಸರಿದಿದೆ. ವಿವಾದಿತ ಪ್ರದೇಶಗಳಾದ ಗಾಲ್ವಾನ್ ಕಣಿವೆ, ಗೋಗ್ರಾದಲ್ಲಿ 2 ತಿಂಗಳಿಂದ ಚೀನಾ ಸೇನೆ ಬೀಡುಬಿಟ್ಟಿತ್ತು.
ಈ ಬಗ್ಗೆ ಭಾರತೀಯ ಸೇನೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಚೀನಾ ಎಲ್ಎಸಿಯಿಂದ ಹಿಂದೆ ಸರಿದಿರುವುದಕ್ಕೆ ನಾವು ಸಂಭ್ರಮಿಸುವ ಸಮಯ ಇದಲ್ಲ. ಇದು ಸಣ್ಣ ನಡೆಯಷ್ಟೇ. ಚೀನಾ ವಿವಾದಿತ ಸ್ಥಳದಿಂದ ಒಂದೂವರೆ ಕಿ.ಮೀ. ಹಿಂದೆ ಸರಿದಿದೆ. ಭಾರತ ಕೂಡ ಸ್ವಲ್ಪ ಹಿಂದೆ ಸರಿದಿದೆ. ಆದರೆ ಚೀನಾದವರು ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಗಡಿಯನ್ನು ಆಕ್ರಮಿಸಿಕೊಳ್ಳಬಹುದು. ಹೀಗಾಗಿ, ಚೀನೀಯರ ಪ್ರತಿಯೊಂದು ನಡೆಯನ್ನೂ ನಾವಿನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದು ಹೇಳಿದ್ದಾರೆ.
ಭಾರತ-ಚೀನಾ ಗಡಿಯ ಬಿಕ್ಕಟ್ಟಿನ ಬಗ್ಗೆ ಈ ಮೊದಲು ಚೀನಾ ಮತ್ತು ಭಾರತದ ಸೇನಾ ಕಮಾಂಡರ್ಗಳ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಗಾಲ್ವಾನ್ ಕಣಿವೆಯಿಂದ ಎರಡೂ ದೇಶಗಳ ಸೇನೆಯನ್ನು ಹಿಂಪಡೆಯುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಚೀನಾ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಂಡರೆ ಭಾರತ ಕೂಡ ವಿವಾದಿತ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವುದಾಗಿ ತಿಳಿಸಿತ್ತು. ಹೀಗಾಗಿ, ಎರಡೂ ದೇಶಗಳಲ್ಲಿ ಶಾಂತಿ ನೆಲೆಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತು.













