Last Updated:
ಇತ್ತೀಚೆಗೆ ಭಾರತೀಯ ಸೇನೆ ಜೊತೆ ನಡೆದ ಮಾತುಕತೆಯಲ್ಲಿ ನಿರ್ಣಯಿಸಿದಂತೆ ಲಡಾಖ್ ಗಡಿಯಲ್ಲಿರುವ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯಲಾಗಿದೆ. ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಉಭಯ ಸೇನೆಗಳು ಪರಸ್ಪರ ಸಹಕರಿಸುತ್ತಿವೆ ಎಂದು ವಾಂಗ್ ಹೇಳಿದ್ದರು.
ನವದೆಹಲಿ(ಜು.30): ಇತ್ತೀಚೆಗೆ ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನಾ ಎರಡು ದೇಶಗಳ ಸೇನಾಪಡೆಗಳು ಸಂಪೂರ್ಣ ಹಿಂಸರಿದಿವೆ ಎಂದು ಚೀನಾ ಹೇಳಿತ್ತು. ಈ ಬೆನ್ನಲ್ಲೇ ಭಾರತ ಚೀನಾದ ಹೇಳಿಕೆಯನ್ನು ಅಲ್ಲಗೆಳೆದಿದೆ. ಇನ್ನೂ ಲಡಾಖ್ ಗಡಿಯ ಪ್ರಮುಖ ಸ್ಥಳಗಳಿಂದ ಭಾರತ-ಚೀನಾ ಎರಡೂ ಸೇನೆಗಳು ತಮ್ಮ ತುಕಡಿಗಳನ್ನು ಹಿಂಪಡೆಯುವ ಸಂಪೂರ್ಣ ಕೆಲಸ ಮುಗಿದಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದೆ. ಈ ಮೂಲಕ ಗಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಚೀನಾ ಹೇಳಿಕೆ ಸುಳ್ಳು ಎಂಬುದನ್ನು ಪರೋಕ್ಷವಾಗಿ ಹೇಳಿದೆ.
ಈ ಸಂಬಂಧ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಇದನ್ನುಸ್ಪಷ್ಟಪಡಿಸಿದ್ಧಾರೆ. ಉಭಯ ದೇಶಗಳ ಸೇನಾಪಡೆಗಳು ಲಡಾಖ್ ಗಡಿಯ ಮೈನ್ ಪಾಯಿಂಟ್ಗಳಿಂದ ಹಿಂಸರಿಯುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಚೀನಾ ಹೇಳಿದಂತೆ ಸಂಪೂರ್ಣ ಮುಗಿದಿಲ್ಲ ಎಂದು ಹೇಳಿದ್ದಾರೆ.
ಸದ್ಯದಲ್ಲೇ ಚೀನಾದ ಹಿರಿಯ ಸೇನಾಧಿಕಾರಿಗಳು ಭಾರತೀಯ ಸೇನೆಯೊಂದಿಗೆ ಮತ್ತೊಂದು ಸುತ್ತಿನ ಮಿಲಿಟರಿ ಮಾತುಕತೆಗೆ ಸಜ್ಜಾಗಿವೆ. ಇಲ್ಲಿ ಶಾಂತಿ ಮಾತುಕತೆಗಳ ಮೂಲಕವೇ ಸಮಸ್ಯೆ ಪರಿಹಾರ ಕಾಣಬೇಕು. ಎರಡೂ ರಾಷ್ಟ್ರಗಳ ಸೇನೆಗಳು ಲಡಾಖ್ ಗಡಿಯಿಂದ ಹೇಗೆ ಹಿಂದೆ ಸರಿಯಬೇಕು? ಎಂಬುದನ್ನು ಚರ್ಚಿಸಲಿವೆ ಎಂದರು ಅನುರಾಗ್ ಶ್ರೀವಾಸ್ತವ್.
ಈ ಹಿಂದೆ ಲಡಾಖ್ನಿಂದ ಸೇನೆ ಹಿಂಪಡೆಯಲಾಗಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಉಭಯ ದೇಶಗಳ ಮುಂಚೂಣಿ ಗಡಿ ಪಡೆಗಳು ಈಗಾಗಲೇ ಬಹುತೇಕ ಸೇನಾ ನೆಲೆಗಳಲ್ಲಿ ನಿಷ್ಕ್ರಿಯತೆಯನ್ನು ಪೂರ್ಣಗೊಳಿಸಿವೆ ಎಂದು ತಿಳಿಸಿದ್ದಾರೆ.













