Last Updated:
ಗಡಿಯಲ್ಲಿ ಚೀನಾ ಮಾಡಿದ ಕೆಲಸಕ್ಕೆ ಇಡೀ ದೇಶವೇ ಬೇಸರ ಹಾಗೂ ಆಕ್ರೋಶ ಹೊರಹಾಕಿದೆ. ಚೀನಾದವರು ನಮ್ಮ ದೇಶದೊಳಗೆ ಬಂದು ಕೂತಿಲ್ಲ ಅಥವಾ ನಮ್ಮ ಯಾವುದೇ ಜಾಗ ಆಕ್ರಮಣಗೊಂಡಿಲ್ಲ ಎಂದು ಮೋದಿ ಹೇಳಿದ್ದಾರೆ.
ನವದೆಹಲಿ (ಜೂ.20): ಗಡಿ ಭಾಗದಲ್ಲಿ ಚೀನಾ ಸೇನೆ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವಪಕ್ಷ ಸಭೆ ಕರೆದಿದ್ದರು. ಈ ವೇಳೆ ಮಾತನಾಡಿದ ಮೋದಿ, ಭಾರತದ ಯಾವುದೇ ಜಾಗವನ್ನೂ ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ, ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ವಿಪಕ್ಷಗಳಿಗೆ ಮೋದಿ ಆಶ್ವಾಸನೆ ನೀಡಿದ್ದಾರೆ.
“ಗಡಿಯಲ್ಲಿ ಚೀನಾ ಮಾಡಿದ ಕೆಲಸಕ್ಕೆ ಇಡೀ ದೇಶವೇ ಬೇಸರ ಹಾಗೂ ಆಕ್ರೋಶ ಹೊರಹಾಕಿದೆ. ಚೀನಾದವರು ನಮ್ಮ ದೇಶದೊಳಗೆ ಬಂದು ಕೂತಿಲ್ಲ ಅಥವಾ ನಮ್ಮ ಯಾವುದೇ ಜಾಗ ಅತಿಕ್ರಮಣಗೊಂಡಿಲ್ಲ,” ಎಂದು ಮೋದಿ ಹೇಳಿದ್ದಾರೆ.
“ಗಡಿ ಭಾಗದಲ್ಲಿ ನಮ್ಮ 20 ಸೈನಿಕರು ಹುತಾತ್ಮರಾಗಿದ್ದರು. ಅವರು ಪ್ರಾಣತ್ಯಾಗ ಮಾಡುವುದಕ್ಕೂ ಮೊದಲು ಭಾರತದ ಮೇಲೆ ಕಣ್ಣಿಟ್ಟವರಿಗೆ ತಕ್ಕ ಪಾಠ ಕಲಿಸಿ ಹೋಗಿದ್ದಾರೆ. ನಮ್ಮ ಜಾಗವವನ್ನು ಯಾರೂ ಕಸಿಯಲು ಸಾಧ್ಯವಿಲ್ಲ,” ಎಂದು ಹೇಳುವ ಮೂಲಕ ಸೈನಿಕರ ತ್ಯಾಗವನ್ನು ಮೋದಿ ಕೊಂಡಾಡಿದರು. ಸರ್ವಪಕ್ಷ ಸಭೆಯಲ್ಲಿ ಮೋದಿ ನಿಲುವಿಗೆ ಎಲ್ಲ ಪಕ್ಷಗಳು ಬೆಂಬಲ ಸೂಚಿಸಿವೆ.
“ನಾವು ನಮ್ಮ ಸೇನೆಗೆ ಹಾಗೂ ಅಧಿಕಾರಿಗಳಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿದ್ದೇವೆ. ಅಲ್ಲದೆ, ಚೀನಾಗೆ ನಮ್ಮ ನಿಲುವು ಏನೆಂಬುದನ್ನೂ ಸ್ಪಷ್ಟಪಡಿಸಿದ್ದೇವೆ. ಭಾರತ ಯಾವಾಗಲೂ ಶಾಂತಿ ಹಾಗೂ ಗೆಳೆತನದಿಂದ ಇರಲು ಬಯಸುತ್ತದೆ. ಆದರೆ, ದೇಶ ರಕ್ಷಣೆಗೆ ನಮ್ಮ ಮೊದಲ ಆದ್ಯತೆ. ಗಡಿ ಭಾಗದಲ್ಲಿ ಈಗಾಗಲೇ ಮೂಲಸೌಕರ್ಯ ಹೆಚ್ಚಿದ್ದು, ಭಾರತ ಮೊದಲಿಗಿಂತಲೂ ಬಲಗೊಂಡಿದೆ,” ಎಂದು ಹೇಳುವ ಮೂಲಕ ಚೀನಾಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಸೋಮವಾರ ಘರ್ಷಣೆ ಏರ್ಪಟ್ಟಿತ್ತು. ಲಡಾಕ್ನ ಗಾಲ್ವನ್ ಕಣಿವೆ ಭಾಗದಲ್ಲಿ ಎರಡು ದೇಶಗಳ ಸೇನೆಯ ನಡುವೆ ಗುಂಡಿನ ಕಾಳಗದಲ್ಲಿ, ಭಾರತದ ಸುಮಾರು 20 ಸೈನಿಕರು ಹುತಾತ್ಮರಾಗಿದ್ದರು.













