Last Updated:
ಈ ಟೆಂಡರ್ ರದ್ದುಗೊಳಿಸುವ ಕ್ರಮದಿಂದಾಗಿ ಚೀನಾಗೆ ಅಪಾರ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಚೀನಾದ ಜಂಟಿ ಉದ್ಯಮವಾದ ಸಿಆರ್ಆರ್ಸಿ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಟೆಂಡರ್ನ ಆರು ಸ್ಪರ್ಧಿಗಳನ್ನು ಹಿಂದಿಕ್ಕಿ 44 ಅರೆ-ವೇಗದ ರೈಲುಗಳನ್ನು ಪೂರೈಸುವ ಬಿಡ್ ಅನ್ನು ತನ್ನದಾಗಿಸಿಕೊಂಡಿತ್ತು.
ನವ ದೆಹಲಿ (ಆಗಸ್ಟ್ 22); ಭಾರತದಲ್ಲಿ 44 ಅರೆ ಅತಿ-ವೇಗದ “ವಂದೇ ಭಾರತ್” ರೈಲುಗಳನ್ನು ತಯಾರಿಸುವ ಟೆಂಡರ್ ಅನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. ಚೀನಾ ಮೂಲದ ಕಂಪೆನಿಗೆ ಈ ಟೆಂಡರ್ ನೀಡಲಾಗಿತ್ತು. ಆದರೆ, ಇದೀಗ ಟೆಂಡರ್ ಅನ್ನು ರದ್ದುಗೊಳಿಸಿದ್ದು, ಒಂದು ವಾರದ ಒಳಗಾಗಿ ಹೊಸ ಟೆಂಡರ್ ಕರೆಯಲಾಗುವುದು. ಅಲ್ಲದೆ, ಈ ಟೆಂಡರ್ನಲ್ಲಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಭಾರತದ ಮತ್ತು ಚೀನಾ ನಡುವೆ ಉಂಟಾದ ಗಡಿ ಬಿಕ್ಕಟ್ಟಿನ ನಂತರ ಚೀನಾಗೆ ಆರ್ಥಿಕ ಹೊಡೆತ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಒಂದರ ಹಿಂದೊಂದರಂತೆ ಅನೇಕ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ಈ ಹಿಂದೆ ಚೀನಾ ದೇಶದ ಮೊಬೈಲ್ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿತ್ತು. ಚೀನಾದಿಂದ ಭಾರತಕ್ಕೆ ಆಗಮಿಸುವವರ ವೀಸಾಗೆ ಹಾಗೂ ಭಾರತದಲ್ಲಿ ಚೀನಾ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾಗಿತ್ತು. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಮಹತ್ವದ “ವಂದೇ ಭಾರತ್” ಟೆಂಡರ್ ಅನ್ನೇ ರದ್ದುಗೊಳಿಸಿ ಆದೇಶಿಸಿದೆ.
ಈ ಟೆಂಡರ್ ರದ್ದುಗೊಳಿಸುವ ಕ್ರಮದಿಂದಾಗಿ ಚೀನಾಗೆ ಅಪಾರ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಚೀನಾದ ಜಂಟಿ ಉದ್ಯಮವಾದ ಸಿಆರ್ಆರ್ಸಿ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಟೆಂಡರ್ನ ಆರು ಸ್ಪರ್ಧಿಗಳನ್ನು ಹಿಂದಿಕ್ಕಿ 44 ಅರೆ-ವೇಗದ ರೈಲುಗಳನ್ನು ಪೂರೈಸುವ ಬಿಡ್ ಅನ್ನು ತನ್ನದಾಗಿಸಿಕೊಂಡಿತ್ತು.
ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ರೈಲ್ವೆ ಸಚಿವಾಲಯ, “44 ಅರೆ ಹೈಸ್ಪೀಡ್ ರೈಲುಗಳ (ವಂದೇ ಭಾರತ್) ತಯಾರಿಕೆಗಾಗಿ ಕರೆಯಲಾಗಿದ್ದ ಟೆಂಡರ್ ರದ್ದುಗೊಂಡಿದೆ. ಪರಿಷ್ಕೃತ ಸಾರ್ವಜನಿಕ ಸಂಗ್ರಹಣೆ (ಭಾರತದಲ್ಲಿ ತಯಾರಿಸಲು ಆದ್ಯತೆ) ಆದೇಶದ ಪ್ರಕಾರ ಒಂದು ವಾರದೊಳಗೆ ಹೊಸ ಟೆಂಡರ್ ಕರೆಯಲಾಗುತ್ತದೆ” ಎಂದು ತಿಳಿಸಲಾಗಿದೆ.
ಚೀನಾ ಮೂಲದ ಸಿಆರ್ಆರ್ಸಿ ಯೋಂಗ್ಜಿ ಎಲೆಕ್ಟ್ರಿಕ್ ಕಂಪನಿ ಲಿಮಿಟೆಡ್ ಮತ್ತು ಗುರುಗ್ರಾಮ್ ಮೂಲದ ಪಯೋನೀರ್ ಫಿಲ್-ಮೆಡ್ ಪ್ರೈವೇಟ್ ಲಿಮಿಟೆಡ್ ನಡುವೆ ಜಂಟಿ ಉದ್ಯಮವನ್ನು 2015 ರಲ್ಲಿ ರಚಿಸಲಾಗಿತ್ತು.
ಹೀಗಾಗಿ ಭಾರತದಲ್ಲಿ ಇನ್ನೂ ಅರೆ ಹೈಸ್ಪೀಡ್ ರೈಲುಗಳ ಪರ್ವ ಆರಂಭವಾಗಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಜೂನ್ನಲ್ಲಿ ಪೂರ್ವ ಲಡಾಖ್ನಲ್ಲಿ ಗಡಿ ಉದ್ವಿಗ್ನತೆ ಹಿಂಸಾತ್ಮಕ ಮುಖಾಮುಖಿಯಾದ ನಂತರ ಭಾರತವು ಚೀನಾದೊಂದಿಗೆ ವ್ಯಾಪಾರ ಸಂಬಂಧವನ್ನು ಬಿಗಿಗೊಳಿಸಿದೆ. ಈ ಘರ್ಷಣೆಯಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು.













