Last Updated:
Viral Video: ಉತ್ತರಾಖಂಡದ ಖತಿಮಾ ಅರಣ್ಯ ವ್ಯಾಪ್ತಿಯಲ್ಲಿ ಅತ್ಯಂತ ಅಪರೂಪದ ಮತ್ತು ಆಘಾತಕಾರಿ ರಸ್ತೆ ಅಪಘಾತವೊಂದು ಸಂಭವಿಸಿದೆ. ಯಾಕಂದರೆ, ವೇಗವಾಗಿ ಬಂದ ಸ್ಕೂಟರ್ ಚಾಲಕಿ ನೇರವಾಗಿ ಕಾಡಾನೆಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಆನೆಯ ಬಲಿಷ್ಠ ದಂತವೇ ಮೂರು ತುಂಡುಗಳಾಗಿ ಮುರಿದು ಬಿದ್ದಿದೆ. ಹಾಗಾದ್ರೆ, ಗಜರಾಜನ ದಂತ ಮುರಿದ ನಂತರ ಮಾಡಿದ್ದೇನು ಗೊತ್ತಾ?
ಖಟಿಮಾ (ಉತ್ತರಾಖಂಡ): ಸಾಮಾನ್ಯವಾಗಿ ಕಾಡಾನೆ (Wild Elephant) ಕಂಡರೆ ಸಾಕು, ಎದೆ ಢವಢವ ಎನ್ನುತ್ತಾ ದೂರದಿಂದಲೇ ಗಾಡಿ ನಿಲ್ಲಿಸಿ, ಉಸಿರು ಬಿಗಿ ಹಿಡಿದು ನಿಲ್ಲುತ್ತೇವೆ. ಅದು ದಾಟಲಿ, ಆಮೇಲೆ ಹೋಗೋಣ ಅಂತ ಕಾಯುತ್ತೇವೆ. ಯಾಕಂದ್ರೆ ಎದುರಲ್ಲಿ ನಿಂತಿರೋದು ಕಾಡಿನ ದೈತ್ಯ ಪ್ರಾಣಿ. ಒಂದೇ ಒಂದು ಸಲ ಸೊಂಡಿಲು ಬೀಸಿದರೆ ಸಾಕು, ಗಾಡಿ ಸಮೇತ ನಾವು ಚೆಲ್ಲಾಪಿಲ್ಲಿ ಆಗಿ ಬಿಡುತ್ತೇವೆ! ಆದ್ರೆ ಉತ್ತರಾಖಂಡದ (Uttarakhand) ಖಟಿಮಾದಲ್ಲಿ (Khatima) ನಡೆದಿದ್ದೇ ಬೇರೆ. ಹೌದು, ಕೆಲಸ ನಿಮಿತ್ತ ಸ್ಕೂಟರ್ನಲ್ಲಿ ಹೊರಟಿದ್ದ ಮಹಿಳೆಯೊಬ್ಬರು ಒಂಟಿ ಸಲಗವನ್ನ (Elephant) ಕಂಡ್ರೂ ತಮ್ಮ ಗಾಡಿಯ ಸ್ಪೀಡ್ ಮಾತ್ರ ಕಡಿಮೆ ಮಾಡಿಲ್ಲ. ಇದರ ಪರಿಣಾಮ ಆಕೆಯ ಸ್ಕೂಟರ್ ನೇರವಾಗಿ ಗಜರಾಜನಿಗೆ ಡಿಕ್ಕಿ ಹೊಡೆದಿದ್ದು, ಮಹಿಳೆಯ ಸ್ಕೂಟರ್ ಚಿಂದಿ ಚಿಂದಿ ಆಗಿದೆ. ಮತ್ತೊಂದೆಡೆ, ಆನೆಯ ದಂತ (Elephant’s Tusk) ಕೂಡ ಪೀಸ್ ಪೀಸ್ ಆಗಿದೆ. ಇದರಿಂದ ಬೆಚ್ಚಿದ್ದ ಆ ದೈತ್ಯ ಮಾಡಿದ್ದೇನು ಗೊತ್ತಾ? ಗೊತ್ತಾದ್ರೆ ಶಾಕ್ ಆಗೋದಂತು ಖಂಡಿತಾ! ಹಾಗಾದ್ರೆ, ಆ ಪ್ರಾಣಿ ಮಾಡಿದ್ದೇನು?
ಮೇ 20, 2026ರಂದು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಖತಿಮಾ ಬಳಿಯ ಚಕರ್ಪುರ ಅರಣ್ಯ ವ್ಯಾಪ್ತಿಯಲ್ಲಿ, 23 ವರ್ಷದ ನಿಕಿತಾ ಕಾಪ್ಡಿ ಎಂಬುವವರು ತಮ್ಮ ಆಕ್ಟಿವಾ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ, ಹಠಾತ್ತನೆ ರಸ್ತೆಗೆ ಬಂದ ಆನೆಯನ್ನು ಗಮನಿಸದೆ ಅದಕ್ಕೆ ನೇರವಾಗಿ ಡಿಕ್ಕಿ ಹೊಡೆದಿದ್ದಾರೆ. ಅದರಲ್ಲೂ, ಈ ಚಕರ್ಪುರ ಅರಣ್ಯ ವ್ಯಾಪ್ತಿಯು ಪ್ರಮುಖ ಆನೆ ಕಾರಿಡಾರ್ ಆಗಿದ್ದು, ವನ್ಯಜೀವಿಗಳ ಚಲನವಲನ ಇಲ್ಲಿ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ಇನ್ನೂ, ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ಸ್ಕೂಟರ್ ಆನೆಯ ದಂತಕ್ಕೆ ಬಲವಾಗಿ ತಗುಲಿದೆ. ಇದರ ಪರಿಣಾಮವಾಗಿ ಆನೆಯ ಒಂದು ದಂತವು ಸ್ಥಳದಲ್ಲೇ ಮುರಿದು ಮೂರು ತುಂಡುಗಳಾಗಿ ರಸ್ತೆಯ ಮೇಲೆ ಬಿದ್ದಿದೆ. ಮತ್ತೊಂದೆಡೆ, ನಿಕಿತಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ತಲೆ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಘಟನೆಯ ನಂತರ ಗಾಬರಿಗೊಂಡ ಆನೆಯು ತಕ್ಷಣವೇ ಕಾಡಿನೊಳಗೆ ಓಡಿಹೋಗಿದೆ ಎನ್ನಲಾಗಿದೆ. ಇನ್ನೂ, ಅಮರ್ ಉಜಾಲಾ ವರದಿ ಮಾಡಿರುವಂತೆ, ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರಸ್ತೆಯಲ್ಲಿದ್ದ ದಂತದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ, ಅರಣ್ಯ ಇಲಾಖೆಯ ಅಧಿಕಾರಿ ಹರೇಂದ್ರ ಬಿಶ್ತ್, “ಕಾಡಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವಾಗ ಆನೆಗೆ, ಸ್ಕೂಟರ್ನಲ್ಲಿ ಮಹಿಳೆ ಡಿಕ್ಕಿ ಹೊಡೆದ ಪರಿಣಾಮ, ಆನೆಯ ದಂತ ಮುರಿದಿದೆ. ಇದಾದ ನಂತರ ಆನೆ ಕಾಡಿಗೆ ಹೋಯಿತು” ಎಂದು ಅವರು ಹೇಳಿದರು.
ಖಟಿಮಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು ರಾಜಾಜಿ ರಾಷ್ಟ್ರೀಯ ಉದ್ಯಾನವನ ಮತ್ತು ನಂಧೌರ್ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿವೆ. ಕಳೆದ ಕೆಲವು ವರ್ಷಗಳಿಂದ ಆನೆಗಳ ಕಾರಿಡಾರ್ಗಳಲ್ಲಿ ರಸ್ತೆ, ಮಾನವ ವಸತಿ ಹೆಚ್ಚಾದ ಕಾರಣ ಆನೆಗಳು ಆಗಾಗ್ಗೆ ರಸ್ತೆಗೆ ಬರುತ್ತಿವೆ. ಕಳೆದ ಆರು ತಿಂಗಳಲ್ಲಿ ಇದು ಮೂರನೇ ಗಂಭೀರ ಅಪಘಾತವಾಗಿದೆ. ಸ್ಥಳೀಯರು ರಾತ್ರಿ ವೇಳೆ ಸಂಚಾರ ಮಾಡದಂತೆ ಮತ್ತು ವಾಹನ ಚಾಲಕರು ನಿಧಾನವಾಗಿ ಚಲಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
Khatima,Udham Singh Nagar,Uttarakhand (Uttaranchal)













