Last Updated:
Viral News: ತೊಂಬತ್ತು ವರ್ಷದ ವೃದ್ಧ ಅತ್ತೆಯ ಹಸಿದ ಹೊಟ್ಟೆಯನ್ನು ತುಂಬಿಸಲು ಆಕೆಗೆ ಕೇವಲ ಐನೂರು ರೂಪಾಯಿ ಪಿಂಚಣಿ ಹಣದ ಆಸರೆಯಷ್ಟೇ ಇತ್ತು. ಆದರೆ, ಆ ಹಣವನ್ನು ಕೈಗೆ ಪಡೆಯಲು ವ್ಯವಸ್ಥೆ ಒಡ್ಡಿದ ಸವಾಲು ಸಣ್ಣದೇನಲ್ಲ. ವೃದ್ಧ ಅತ್ತೆಯನ್ನು ಬೆನ್ನಿಗೆ ಗಟ್ಟಿಯಾಗಿ ಕಟ್ಟಿಕೊಂಡು, ಸುಡುವ ರಸ್ತೆಯಲ್ಲಿ ಬರೋಬ್ಬರಿ ಐದು ಕಿಲೋಮೀಟರ್ ನಡೆದು ಬಂದ ಆಕೆಯ ಪ್ರತಿ ಹೆಜ್ಜೆಯೂ ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು.
ಅತ್ತೆ ಎಂದರೆ ಮುನಿಸು, ಜಗಳ ಎಂದೇ ಭಾವಿಸುವ ಈ ಜಗತ್ತಿನಲ್ಲಿ, ಆಕೆ ತನ್ನ ಅತ್ತೆಗೆ ಸಾಕ್ಷಾತ್ ಮಗಳಾಗಿದ್ದಳು. ತೊಂಬತ್ತು ವರ್ಷದ ವೃದ್ಧ(90 Year Old) ಅತ್ತೆಯ ಹಸಿದ ಹೊಟ್ಟೆಯನ್ನು ತುಂಬಿಸಲು ಆಕೆಗೆ ಕೇವಲ ಐನೂರು ರೂಪಾಯಿ (5 Hundred) ಪಿಂಚಣಿ (Pension) ಹಣದ ಆಸರೆಯಷ್ಟೇ ಇತ್ತು. ಆದರೆ, ಆ ಹಣವನ್ನು ಕೈಗೆ ಪಡೆಯಲು ವ್ಯವಸ್ಥೆ ಒಡ್ಡಿದ ಸವಾಲು ಸಣ್ಣದೇನಲ್ಲ. ವೃದ್ಧ ಅತ್ತೆಯನ್ನು ಬೆನ್ನಿಗೆ ಗಟ್ಟಿಯಾಗಿ ಕಟ್ಟಿಕೊಂಡು, ಸುಡುವ ರಸ್ತೆಯಲ್ಲಿ ಬರೋಬ್ಬರಿ ಐದು ಕಿಲೋಮೀಟರ್ (5 kilometer) ನಡೆದು ಬಂದ ಆಕೆಯ ಪ್ರತಿ ಹೆಜ್ಜೆಯೂ ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು.
ಒಡಿಶಾದಲ್ಲಿ ಸಹೋದರಿಯ ಪಿಂಚಣಿಗಾಗಿ ಆಕೆಯ ಶವವನ್ನೇ ಬ್ಯಾಂಕಿಗೆ ತಂದ ಘಟನೆ ಮಾಸುವ ಮುನ್ನವೇ, ಛತ್ತೀಸ್ಗಢದಲ್ಲಿ ಮತ್ತೊಂದು ಕರುಣಾಜನಕ ಘಟನೆ ನಡೆದಿದೆ. ಸುರ್ಗುಜಾ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರು, ಕೇವಲ ಪಿಂಚಣಿ ಹಣವನ್ನು ಪಡೆಯಲು ತನ್ನ ತೊಂಬತ್ತು ವರ್ಷದ ವೃದ್ಧ ಅತ್ತೆಯನ್ನು ಹೆಗಲ ಮೇಲೆ ಹೊತ್ತುಕೊಂಡು, ಸುಡುವ ಬಿಸಿಲಿನಲ್ಲಿ ಬರೋಬ್ಬರಿ ಐದು ಕಿಲೋಮೀಟರ್ ನಡೆದ ಘಟನೆಯೊಂದು ನಡೆದಿದೆ.
ಕುಂವಾ ಪ್ರದೇಶದ ಜಂಗಲ್ಪಾರ ಗ್ರಾಮದಲ್ಲಿ ರಸ್ತೆ ಸಂಪರ್ಕವಿಲ್ಲದ ಕಾರಣ, ಸುಖ್ಮನಿಯಾ ಬಾಯಿ ಎಂಬ ಮಹಿಳೆ ತನ್ನ 90 ವರ್ಷದ ಅತ್ತೆಯನ್ನು ಹೆಗಲ ಮೇಲೆ ಹೊತ್ತು ಬ್ಯಾಂಕ್ಗೆ ಕರೆದೊಯ್ದ ವಿಡಿಯೋ ವೈರಲ್ ಆಗಿದೆ. ಈ ಕುಟುಂಬವು 1.5 ಕಿ.ಮೀ. ನದಿ ದಾಟಿ, ನಂತರ 3.5 ಕಿ.ಮೀ. ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಅನಿವಾರ್ಯತೆಯಲ್ಲಿದೆ.
ಸುಖ್ಮಾನಿಯಾ ಅವರ ಈ ಕಠಿಣ ನಡಿಗೆ ಕೊನೆಗೂ ಯಶಸ್ವಿಯಾಯಿತು. ಬ್ಯಾಂಕ್ ಅಧಿಕಾರಿಗಳು ವೃದ್ಧೆ ಸೋನ್ವಾರಿಯ ಮೂರು ತಿಂಗಳ ಪಿಂಚಣಿ ಮೊತ್ತವಾದ ಒಂದು ಸಾವಿರದ ಐನೂರು ರೂಪಾಯಿಗಳನ್ನು ಕೈಗಿಟ್ಟರು. ಈ ಹಿಂದೆ ‘ಬ್ಯಾಂಕ್ ಮಿತ್ರ’ ಸಿಬ್ಬಂದಿಯೇ ಮನೆಗೆ ಬಂದು ಹಣ ನೀಡುತ್ತಿದ್ದರು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಅವರು ಬರುವುದನ್ನು ನಿಲ್ಲಿಸಿದ್ದರಿಂದಲೇ ಈ ಬಡ ಕುಟುಂಬಕ್ಕೆ ಇಂತಹ ದುಸ್ಥಿತಿ ಎದುರಾಗಿದೆ. ನಿಯಮಗಳ ಹೆಸರಿನಲ್ಲಿ ಬಡವರನ್ನು ಅಲೆದಾಡಿಸುವ ವ್ಯವಸ್ಥೆಗೆ ಇದು ಹಿಡಿದ ಕನ್ನಡಿಯಾಗಿದೆ.
ಫಲಾನುಭವಿಯ KYC ಪ್ರಕ್ರಿಯೆಯು ಅಪೂರ್ಣವಾಗಿದ್ದರಿಂದ ಪಿಂಚಣಿ ಪಾವತಿಯು ಹಲವಾರು ತಿಂಗಳುಗಳಿಂದ ಬಾಕಿ ಇತ್ತು. ಪರಿಣಾಮವಾಗಿ, ಸುಖ್ಮಾನಿಯಾ ತನ್ನ ವಯಸ್ಸಾದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನರ್ಮದಾಪುರ ಶಾಖೆಗೆ ನಡೆದುಕೊಂಡು ಹೋಗಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ಪಿಂಚಣಿ ಮೊತ್ತವನ್ನು ಪಡೆಯಲು ಒತ್ತಾಯಿಸಲಾಯಿತು ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಪ್ರತಿ ಹಳ್ಳಿಯಲ್ಲಿ ಬ್ಯಾಂಕ್ ಸಖಿಗಳನ್ನು ನೇಮಿಸಲಾಯಿತು. ಬ್ಯಾಂಕ್ ಸಖಿಗಳು ಎಲ್ಲಾ ಡಿಜಿಟಲ್ ವಹಿವಾಟುಗಳನ್ನು ನಿರ್ವಹಿಸುತ್ತಾರೆ ಮತ್ತು ಪಿಂಚಣಿಗಳನ್ನು ನಗದು ರೂಪದಲ್ಲಿ ವಿತರಿಸಲು ಅಗತ್ಯವಿರುವವರ ಮನೆಗಳಿಗೆ ಭೇಟಿ ನೀಡುತ್ತಾರೆ.
ಬ್ಯಾಂಕಿನಲ್ಲಿ ಮಾತನಾಡಿದ ಸುಖ್ಮಾನಿಯಾ, ಈ ಹಿಂದೆ ಸ್ಥಳೀಯ ಬ್ಯಾಂಕ್ ಮಿತ್ರರು ತಮ್ಮ ಮನೆಗೆ ಬಂದು ಪಿಂಚಣಿ ಮೊತ್ತ ತಲುಪಿಸುತ್ತಿದ್ದರು. ಆದರೆ, ಕೆಲ ದಿನಗಳ ನಂತರ ಮನೆ ಬಾಗಿಲಿಗೆ ಸೇವೆ ಯೋಜನೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಸುಮಾರು ಮೂರು ತಿಂಗಳ ಕಾಲ ಹೆಣಗಾಡಿದ ನಂತರ, ಅಂತಿಮವಾಗಿ ಅತ್ತೆಯನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಬೇಕಾಯಿತು ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಷ್ಟೆಲ್ಲಾ ಆದರೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನರ್ಮದಾಪುರ ಶಾಖೆಯ ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ. ಜಂಗಲ್ಪುರ ಗ್ರಾಮದಲ್ಲಿ ಬ್ಯಾಂಕ್ ಮಿತ್ರರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿರುವ ಅವರು, ಕುಟುಂಬದವರೇ ಮುಂಚಿತವಾಗಿ ಮಾಹಿತಿ ನೀಡಿ ವೃದ್ಧೆಯನ್ನು ಸ್ವತಃ ಬ್ಯಾಂಕಿಗೆ ಕರೆತಂದಿದ್ದಾರೆ ಎಂದು ಉಡಾಫೆಯ ಮಾತಾಡಿದ್ದಾರೆ. ಈಗ ವಿವಾದ ದೊಡ್ಡದಾಗುತ್ತಿದ್ದಂತೆ, ಭವಿಷ್ಯದಲ್ಲಿ ಬ್ಯಾಂಕ್ ಮಿತ್ರರೇ ಮನೆಗೆ ಬಂದು ಪಿಂಚಣಿ ತಲುಪಿಸಲಿದ್ದಾರೆ, ಇನ್ನು ಮುಂದೆ ವೃದ್ಧೆಯನ್ನು ಬ್ಯಾಂಕಿಗೆ ಕರೆತರುವ ಅಗತ್ಯವಿಲ್ಲ ಎಂದು ಕುಟುಂಬಕ್ಕೆ ಭರವಸೆ ನೀಡಿದ್ದಾರೆ.













