ಎರಡು ವಾರಗಳ ಹಿಂದೆ ಮಸೂದೆಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿತ್ತು. ಯುಸಿಸಿ ಮಸೂದೆ ಅಂಗೀಕಾರದೊಂದಿಗೆ, ಅಸ್ಸಾಂನಲ್ಲಿ ಮದುವೆ, ಲಿವ್-ಇನ್ ಸಂಬಂಧ, ವಿಚ್ಛೇದನ ಮತ್ತು ಉತ್ತರಾಧಿಕಾರ ಹಕ್ಕುಗಳ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಅಸ್ಸಾಂ ವಿಧಾನಸಭೆಯಲ್ಲಿ ಮೇ 27 ರಂದು ಮಸೂದೆಯ ಬಗ್ಗೆ ಭಾರೀ ಚರ್ಚೆ ನಡೆಯಿತು. ದಿನವಿಡೀ ನಡೆದ ಸುದೀರ್ಘ ಚರ್ಚೆಯ ಬಳಿಕ ಸ್ಪೀಕರ್ ರಂಜಿತ್ ಕುಮಾರ್ ದಾಸ್ ಅವರು ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೂಚಿಸಿದರು. ಆದರೆ, ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿದ ವಿರೋದ ಪಕ್ಷದ ಸದ್ಯಸರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರ ನಡುವೆಯೇ ಸ್ಪೀಕರ್ ಧ್ವನಿ ಮತದ ಪ್ರಕ್ರಿಯೆ ನಡೆಸಿ, ಮಸೂದೆ ಅಂಗೀಕಾರವಾಗಿದೆ ಎಂದು ಪ್ರಕಟಿಸಿದರು.
ಒಬ್ಬ ವ್ಯಕ್ತಿಯು ತನ್ನ ಮದುವೆ ಅಥವಾ ವಿಚ್ಛೇದನವನ್ನು 60 ದಿನಗಳ ಒಳಗೆ ಸರ್ಕಾರದಲ್ಲಿ ಉದ್ದೇಶಪೂರ್ವಕವಾಗಿ ನೋಂದಾಯಿಸದಿದ್ದರೆ, ಅಂತಹ ವ್ಯಕ್ತಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಜೊತೆಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿ
ಇರುವವರು ಕಡ್ಡಾಯವಾಗಿ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕು. ಲಿವ್-ಇನ್ ರಿಲೇಷನ್ಶಿಪ್ಗಳಿಂದ ಜನಿಸಿದ ಮಕ್ಕಳು ಕಾನೂನುಬದ್ಧ ಆಸ್ತಿ ಹಕ್ಕುಗಳನ್ನು ಹೊಂದಿರುತ್ತಾರೆ.
ಬುಡಕಟ್ಟು ಜನಾಂಗದವರನ್ನು ಹೊರತುಪಡಿಸಿ ಉಳಿದೆಲ್ಲಾ ಧರ್ಮದವರಿಗೆ ಗಂಡು ಮಕ್ಕಳಿಗೆ 21 ವರ್ಷ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷ ಮದುವೆಗೆ ಕನಿಷ್ಠ ವಯಸ್ಸು ನಿಗದಿಪಡಿಸಲಾಗಿದೆ. ಯುಸಿಸಿ ಮಸೂದೆಯಡಿಯಲ್ಲಿ, ಗುರುತನ್ನು ಮರೆಮಾಚುವುದು, ವಂಚನೆ ಅಥವಾ ಬಲವಂತದಿಂದ ಮದುವೆಯಾಗುವುದು ಕನಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು.
ಬಹುಪತ್ನಿತ್ವವನ್ನು ಎಲ್ಲಾ ಧರ್ಮಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ವಿವಾಹವಾಗಿದ್ದಾರೆಂದು ಕಂಡುಬಂದರೆ, ಅಂತಹ ವ್ಯಕ್ತಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಅಸ್ಸಾಂನ ಸಂವಿಧಾನದ ಆರನೇ ಶೆಡ್ಯೂಲ್ ವ್ಯಾಪ್ತಿಗೆ ಬರುವ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಎಲ್ಲಾ ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕುಗಳು ಇರುತ್ತವೆ. ಹೆಣ್ಣುಮಕ್ಕಳು ತಮ್ಮ ಹೆತ್ತವರ ಆಸ್ತಿಯ ಮೇಲೆ ಸಂಪೂರ್ಣ ಹಕ್ಕುಗಳನ್ನು ಹೊಂದಿರುತ್ತಾರೆ. ಇದಲ್ಲದೆ, ಚಿಕ್ಕ ಮಕ್ಕಳ (5 ವರ್ಷಕ್ಕಿಂತ ಕಡಿಮೆ ವಯಸ್ಸಿನ) ಪಾಲನೆಯನ್ನು ಸಾಮಾನ್ಯವಾಗಿ ತಾಯಿಗೆ ನೀಡಲಾಗುತ್ತದೆ.
ಅಸ್ಸಾಂ ಸರ್ಕಾರ ಅಂಗೀಕರಿಸಿದ ಯುಸಿಸಿ ಮಸೂದೆಯು ರಾಜ್ಯದ ವೈವಿಧ್ಯಮಯ ವೈಯಕ್ತಿಕ ಕಾನೂನುಗಳನ್ನು ಒಂದೇ ನಾಗರಿಕ ಸಂಹಿತೆಯೊಂದಿಗೆ ಬದಲಾಯಿಸುವ ಗುರಿಯನ್ನು ಹೊಂದಿದೆ. ಇದು ಮದುವೆ, ವಿಚ್ಛೇದನ, ಆಸ್ತಿ ಹಕ್ಕುಗಳು ಮತ್ತು ಲಿವ್-ಇನ್ ಸಂಬಂಧಗಳಂತಹ ವಿಷಯಗಳನ್ನು ಒಂದೇ ಕಾನೂನು ಚೌಕಟ್ಟಿನ ಅಡಿಯಲ್ಲಿ ತರಲು ಪ್ರಯತ್ನಿಸುತ್ತದೆ.
ಯುಸಿಸಿ ಮಸೂದೆ ಕಾನೂನು ಸುವ್ಯವಸ್ಥೆಯಲ್ಲಿ ಏಕರೂಪತೆಯನ್ನು ತರುತ್ತದೆ. ನಾಗರಿಕರು ಏಕರೂಪದ ಕಾನೂನು ಪ್ರಕ್ರಿಯೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಸರ್ಕಾರ ವಾದಿಸುತ್ತದೆ. ಆದರೆ, ಈ ಕಾನೂನು ವ್ಯಾಪ್ತಿಯಿಂದ ಪರಿಶಿಷ್ಟ ಪಂಗಡಗಳನ್ನು ಹೊರಗಿಡುವ ನಿರ್ಧಾರವು ಅವರ ಸಾಂಪ್ರದಾಯಿಕ ಮತ್ತು ಸಾಂವಿಧಾನಿಕ ಗುರುತನ್ನು ರಕ್ಷಿಸುವ ಉದ್ದೇಶವಾಗಿದೆ.












