Last Updated:
ಅಂತಿಮ ದರ್ಶನದ ಬಳಿಕ ಉಲ್ಲಾಸ್ ಗೌಡ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸುಮನಹಳ್ಳಿ ಚಿತಾಗಾರಕ್ಕೆ ಕರೆದೊಯ್ಯಲಾಯಿತು. ಕುಟುಂಬದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ (Ba Ma Harish) ಅವರ ಪುತ್ರ ಉಲ್ಲಾಸ್ ನಿನ್ನೆ ನಿಧನ ಹೊಂದಿದ್ದರು . ಕೊಡಚಾದ್ರಿಗೆ ಟ್ರೆಕ್ಕಿಂಗ್ ಗೆ ಹೋಗಿದ್ದಾಗ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಇದೀಗ ಸುಮನಹಳ್ಳಿ ಚಿತಾಗಾರದಲ್ಲಿ ಉಲ್ಲಾಸ್ ಗೌಡ ಅಂತ್ಯಕ್ರಿಯೆ ನೆರವೇರಿದೆ.
ಇನ್ನು ಉಲ್ಲಾಸ್ ಗೌಡ ಅವರ ಅಂತಿಮ ದರ್ಶನಕ್ಕೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮನೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿದ್ದ ಸಮಯದಲ್ಲೇ ಸಂಭವಿಸಿದ ಈ ದುರ್ಘಟನೆ ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ.
ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನ ವಿಜಯನಗರದಲ್ಲಿರುವ ಭಾ ಮಾ ಹರೀಶ್ ಅವರ ನಿವಾಸದಲ್ಲಿ ಉಲ್ಲಾಸ್ ಗೌಡ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಕುಟುಂಬದ ಸದಸ್ಯರು, ಆತ್ಮೀಯರು ಹಾಗೂ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಪುಷ್ಪನಮನ ಸಲ್ಲಿಸಿ ಅಂತಿಮ ಗೌರವ ಅರ್ಪಿಸಿದರು.
ಮಗನ ಪಾರ್ಥಿವ ಶರೀರವನ್ನು ಕಂಡ ಉಲ್ಲಾಸ್ ಗೌಡ ಅವರ ತಾಯಿ ಭಾವುಕರಾಗಿ ಕಣ್ಣೀರಿಟ್ಟರು. ಮದುವೆಯ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಶೋಕದ ಛಾಯೆ ಆವರಿಸಿರುವುದು ಎಲ್ಲರ ಮನಸ್ಸನ್ನೂ ಭಾರವಾಗಿಸಿತು. ಇನ್ನು ಉಲ್ಲಾಸ್ ಗೌಡ ಅವರ ಅಂತಿಮ ದರ್ಶನಕ್ಕೆ ನಟ ಧ್ರುವ ಸರ್ಜಾ ಹಾಗೂ ನಟ ಕೋಮಲ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಉಲ್ಲಾಸ್ ಗೌಡ ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಉಲ್ಲಾಸ್ ಗೌಡ ಅವರ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ ನಡೆಯಬೇಕಿತ್ತು. ಕುಟುಂಬದವರು ಅದಕ್ಕಾಗಿ ಸಿದ್ಧತೆಗಳಲ್ಲಿ ನಿರತರಾಗಿದ್ದ ವೇಳೆ ಈ ಅಕಾಲಿಕ ಘಟನೆ ಸಂಭವಿಸಿದೆ.
Bangalore [Bangalore],Bangalore,Karnataka













