Last Updated:
TMC Crisis: ದೀದಿಗೆ ಬಿಗ್ ಶಾಕ್! ಬಂಡಾಯ ಬಣದ ಮೇಲುಗೈ; ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅರೂಪ್ ರಾಯ್ಗೆ ಪಟ್ಟ; ಪಕ್ಷದಿಂದಲೇ ಅಭಿಷೇಕ್ ಬ್ಯಾನರ್ಜಿ ಅಮಾನತು
ಕೊಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಯಾಕಂದ್ರೆ, ದಶಕಗಳ ಕಾಲ ತೃಣಮೂಲ ಕಾಂಗ್ರೆಸ್ನಲ್ಲಿ (Trinamool Congress) ಬಿಗಿ ಹಿಡಿತ ಸಾಧಿಸಿದ್ದ ಮಮತಾ ಬ್ಯಾನರ್ಜಿ (Mamata Banerjee) ಅವರನ್ನೇ ಪಕ್ಷದ ಅಧ್ಯಕ್ಷೆ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ. ಪಕ್ಷದೊಳಗಿನ ಬಂಡಾಯ ಬಣ ಈ ದಿಟ್ಟ ಹೆಜ್ಜೆ ಇಟ್ಟಿದ್ದು, ಹಿರಿಯ ನಾಯಕ ಅರೂಪ್ ರಾಯ್ (Arup Roy) ಅವರನ್ನು ಹೊಸ ಅಧ್ಯಕ್ಷರಾಗಿ ಘೋಷಿಸಿದೆ. ಅಷ್ಟೇ ಅಲ್ಲ, ಮಮತಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರನ್ನೂ ಪಕ್ಷದಿಂದ ಅಮಾನತು ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್ ಒಂದರಲ್ಲಿ ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಬಂಡಾಯ ಶಾಸಕರು ಹಾಗೂ ಅತೃಪ್ತ ನಾಯಕರ ವಿಶೇಷ ಸಭೆ ನಡೆಯಿತು. ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ಬೆನ್ನಲ್ಲೇ ನಡೆದ ಈ ರಹಸ್ಯ ಸಭೆಯಲ್ಲಿ ಫಿರ್ಹಾದ್ ಹಕೀಮ್, ಅರೂಪ್ ರಾಯ್, ಜಾವೇದ್ ಖಾನ್ ಹಾಗೂ ರತಿನ್ ಘೋಷ್ ಸೇರಿದಂತೆ ಪಕ್ಷದ ಹಲವು ಪ್ರಭಾವಿ ನಾಯಕರು ಭಾಗಿಯಾಗಿದ್ದರು. ಈ ಸಭೆಯಲ್ಲಿಯೇ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು ಎನ್ನಲಾಗಿದೆ.
ಮಮತಾ ಬ್ಯಾನರ್ಜಿ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ, ಬಂಡಾಯ ನಾಯಕರು ಪಕ್ಷದ ಸಂಪ್ರದಾಯಗಳಿಗೆ ಅನುಗುಣವಾಗಿ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದಾರೆ. 20 ಸದಸ್ಯರ ಈ ನೂತನ ಸಮಿತಿಯಲ್ಲಿ ಹನ್ನೆರಡು ಪ್ರಮುಖ ನಾಯಕರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಅರೂಪ್ ರಾಯ್ ಅವರನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ನೂತನ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಕ ಮಾಡಿರುವುದಾಗಿ ಬಂಡಾಯ ಬಣ ಘೋಷಿಸಿದೆ.
ಏತನ್ಮಧ್ಯೆ, ಪಕ್ಷದೊಳಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯವಾಗಿತ್ತು ಎಂದು ಹೇಳಿಕೊಂಡಿರುವ ಅತೃಪ್ತ ನಾಯಕರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಭಿಷೇಕ್ ಬ್ಯಾನರ್ಜಿ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿದ್ದಾರೆ.
ಅದರಂತೆ, ಸಭೆಯಲ್ಲಿ ಹಾಜರಿದ್ದ ಎಲ್ಲಾ ನಾಯಕರು ಅಭಿಷೇಕ್ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ, ಸಂಘಟನೆಯಲ್ಲಿ ಹೊಸ ರಕ್ತ ಹರಿಸಲು ಈ ನಿರ್ಧಾರ ಅತ್ಯಗತ್ಯವಾಗಿತ್ತು ಎಂದು ಬಂಡಾಯ ನಾಯಕರು ಸಮರ್ಥಿಸಿಕೊಂಡಿದ್ದಾರೆ.
Kolkata,West Bengal
Jun 22, 2026 10:31 PM IST













