Last Updated:
2026 ರ ಐಪಿಎಲ್ ನಂತರ, ಹರ್ಷ್ ದುಬೆ ತವರು ನೆಲದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾದ ಸೀನಿಯರ್ ತಂಡದಲ್ಲೂ ಸ್ಥಾನ ಪಡೆದರು. ಪರಿಣಾಮವಾಗಿ, ಭಾರತೀಯ ಆಯ್ಕೆದಾರರು ಅವರನ್ನು ಭಾರತ ‘ಎ’ ತಂಡದಿಂದ ಬಿಡುಗಡೆ ಮಾಡಿ, ಬದಲಿಗೆ ಅನುಕುಲ್ ರಾಯ್ಗೆ ಅವಕಾಶ ನೀಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಲ್ರೌಂಡರ್ ಅನುಕುಲ್ ರಾಯ್ ಜಾಕ್ಪಾಟ್ ಹೊಡೆದಿದ್ದಾರೆ. 2026ರ ಐಪಿಎಲ್ ಋತುವಿನಲ್ಲಿ ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿರುವ ಅಂಡರ್ 19 ವಿಶ್ವಕಪ್ ವಿನ್ನರ್, ಜಾರ್ಖಂಡ್ ಆಟಗಾರನಿಗೆ ಟೀಮ್ ಇಂಡಿಯಾಗೆ ಕರೆ ಬಂದಿದೆ. ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಭಾರತ ‘ಎ’ ತಂಡದಲ್ಲಿ ಅವರು ಅನಿರೀಕ್ಷಿತವಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ಸೀನಿಯರ್ ತಂಡಕ್ಕೆ ದುಬೆಗೆ ಪ್ರಮೋಷನ್
ಭಾರತ ‘ಎ’, ಶ್ರೀಲಂಕಾ ‘ಎ’ ಮತ್ತು ಅಫ್ಘಾನಿಸ್ತಾನ ‘ಎ’ ತಂಡಗಳು ಒಳಗೊಂಡ ತ್ರಿಕೋನ ಏಕದಿನ ಸರಣಿ ಜೂನ್ 9 ರಿಂದ ಜೂನ್ 21 ರವರೆಗೆ ನಡೆಯಲಿದೆ. ಭಾರತೀಯ ಆಯ್ಕೆ ಸಮಿತಿಯು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗಾಗಿ ಭಾರತ ‘ಎ’ ತಂಡಕ್ಕೆ ಅನುಕುಲ್ ರಾಯ್ ಅವರನ್ನು ಸೇರಿಸಿದೆ” ಎಂದು ಬಿಸಿಸಿಐ ಪ್ರಕಟಿಸಿದೆ.
ಅನುಕುಲ್ ರಾಯ್ 2026 ರ ಐಪಿಎಲ್ ಋತುವಿನಾದ್ಯಂತ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರ ಆಲ್ರೌಂಡರ್ ಕೊಡುಗೆಯೊಂದಿಗೆ ಕೆಕೆಆರ್ ಸತತ ಸೋಲಿನ ಬಳಿಕ ಅದ್ಭುತ ಕಮ್ಬ್ಯಾಕ್ ಮಾಡಿ ಪ್ಲೇಆಫ್ ರೇಸ್ಗೆ ಎಂಟ್ರಿಕೊಟ್ಟಿದೆ. ಈ ಋತುವಿನಲ್ಲಿ ಇಲ್ಲಿಯವರೆಗೆ 13 ಪಂದ್ಯಗಳನ್ನು ಆಡಿರುವ ಅನುಕುಲ್ ರಾಯ್ ಎಂಟು ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇದಕ್ಕೂ ಮೊದಲು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಅನುಕುಲ್ ರಾಯ್ ಅದ್ಭುತ ಪ್ರದರ್ಶನ ನೀಡಿ, ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲು ಪ್ರಮುಖ ಪಾತ್ರ ವಹಿಸಿದ್ದರು. ಪರಿಣಾಮವಾಗಿ, ಅವರು ‘ಟೂರ್ನಮೆಂಟ್ನ ಶ್ರೇಷ್ಠ ಆಟಗಾರ’ ಪ್ರಶಸ್ತಿಯನ್ನು ಪಡೆದಿದ್ದರು. ಈ ಅದ್ಭುತ ಪ್ರದರ್ಶನದೊಂದಿಗೆ, ಅವರು ಆಯ್ಕೆದಾರರ ಗಮನವನ್ನು ಸೆಳೆಯಲು ಯಶಸ್ವಿಯಾದರು.
ಶ್ರೀಲಂಕಾ ಪ್ರವಾಸಕ್ಕೆ ತಿಲಕ್ ವರ್ಮಾ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ರಿಯಾನ್ ಪರಾಗ್ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ‘ಎ’ ತಂಡವನ್ನು ಪ್ರತಿನಿಧಿಸುವಾಗ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಆಟಗಾರರು ಹಿರಿಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಉತ್ತಮ ಅವಕಾಶವನ್ನು ಹೊಂದಿರುತ್ತಾರೆ. ಆಯ್ಕೆದಾರರು ಈ ಶ್ರೀಲಂಕಾ ಪ್ರವಾಸವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ.
ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾನ್ಶ್ ಶೆಡ್ಗೆ, ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್, ಅರ್ಷದ್ ಖಾನ್, ಅನುಕುಲ್ ರಾಯ್.













