Last Updated:
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1300 ಕೋಟಿ ವೆಚ್ಚ, ಬಿಬಿಎಂಪಿ ಆಸ್ತಿ ತೆರಿಗೆಗೆ ಹೆಚ್ಚುವರಿ ಸೆಸ್ ವಿಧಿಸುವ ಪ್ರಸ್ತಾಪ ಯೋಜನೆಯ ಡಿಪಿಆರ್ನಲ್ಲಿ ನಮೂದಾಗಿರುವುದರಿಂದ ಮನೆ ಹಾಗೂ ಆಸ್ತಿ ಮಾಲೀಕರಿಗೆ ಢವಢವ ಶುರುವಾಗಿದೆ
ಬೆಂಗಳೂರಿನ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ರಾಜ್ಯ ಸರ್ಕಾರ (State Government) ಮತ್ತು ಬಿಬಿಎಂಪಿ ಭಾರಿ ಆಘಾತ ನೀಡಲು ಸಜ್ಜಾಗಿದೆ. ಸಿಲಿಕಾನ್ ಸಿಟಿಯ ವಾಹನ ಸವಾರರನ್ನು ಕಾಡುವ ಕಿರಿಕಿರಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಭಾರಿ ವೆಚ್ಚದ ಹೊಸ ಎಲಿವೇಟೆಡ್ ಕಾರಿಡಾರ್ ಯೋಜನೆ (Elevated Corridor Project) ಸಿದ್ಧವಾಗುತ್ತಿದೆ. ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಬರೋಬ್ಬರಿ 11.625 ಕಿಲೋಮೀಟರ್ ಉದ್ದದ ಬೃಹತ್ ಮೇಲ್ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ.
ಇಂದಿರಾನಗರ, ಡೊಮ್ಲೂರು, ಕೋರಮಂಗಲ ಹಾಗೂ ಎಜಿಪುರ ಫ್ಲೈಓವರ್ ಸೇರಿದಂತೆ ಮಡಿವಾಳದಂತಹ ಅತಿ ಹೆಚ್ಚು ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗಲಿರುವ ಈ ಯೋಜನೆಗೆ ಒಟ್ಟು 1,300 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಬೃಹತ್ ವೆಚ್ಚವನ್ನು ಸಾರ್ವಜನಿಕರಿಂದಲೇ ವಸೂಲಿ ಮಾಡಲು ಆಸ್ತಿ ತೆರಿಗೆಯನ್ನು ಹೆಚ್ಚಿಸುವಂತೆ ವಿಸ್ತೃತ ಯೋಜನಾ ವರದಿ ಅಂದರೆ ಡಿಪಿಆರ್ನಲ್ಲಿ ಶಿಫಾರಸು ಮಾಡಿರುವುದು ಈಗ ಆಸ್ತಿ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಂದರೆ ಬಿ-ಸ್ಮೈಲ್ ಸಂಸ್ಥೆಯು ಜಾರಿಗೊಳಿಸಲಿರುವ ಈ ಬೃಹತ್ ಯೋಜನೆಯ ಪಕ್ಕಾ ಹಣಕಾಸಿನ ಲೆಕ್ಕಾಚಾರಗಳು ಈಗ ಹೊರಬಿದ್ದಿವೆ. ಈ ಒಟ್ಟು ಮೊತ್ತದಲ್ಲಿ ಕೇವಲ ಸಿವಿಲ್ ನಿರ್ಮಾಣ ಕಾಮಗಾರಿಗಾಗಿಯೇ ಬರೋಬ್ಬರಿ 852 ಕೋಟಿ ರೂಪಾಯಿ ಖರ್ಚಾಗಲಿದೆ. ಇನ್ನುಳಿದಂತೆ ಭೂಸ್ವಾಧೀನ ಪ್ರಕ್ರಿಯೆ, ಜಿಎಸ್ಟಿ ಪಾವತಿ ಹಾಗೂ ರಸ್ತೆಯ ಅಡಿಯಲ್ಲಿರುವ ಪೈಪ್ಲೈನ್ ಮತ್ತು ವೈರಿಂಗ್ ಸ್ಥಳಾಂತರದಂತಹ ಯುಟಿಲಿಟಿ ಶಿಫ್ಟಿಂಗ್ ಕೆಲಸಗಳಿಗಾಗಿ ಭಾರಿ ಪ್ರಮಾಣದ ಅಂದರೆ 448 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಭಾರಿ ಮೊತ್ತದ ಹಣವನ್ನು ಹೊಂದಿಸಲು ಇಲಾಖೆಯು ಈಗ ಸಾರ್ವಜನಿಕರ ಆಸ್ತಿಯ ಮೇಲೆಯೇ ಕಣ್ಣಿಟ್ಟಿದೆ.
ಸಾಮಾನ್ಯವಾಗಿ ಇಂತಹ ಬೃಹತ್ ಮೇಲ್ಸೇತುವೆಗಳನ್ನು ನಿರ್ಮಿಸಿದಾಗ ವಾಹನ ಸವಾರರಿಂದ ಟೋಲ್ ವಸೂಲಿ ಮಾಡಿ ಹಣವನ್ನು ವಾಪಸ್ ಪಡೆಯಲಾಗುತ್ತದೆ. ಆದರೆ ಈ ಕಾರಿಡಾರ್ ಸಂಪೂರ್ಣವಾಗಿ ಎಲಿವೇಟೆಡ್ ಆಗಿರುವುದಿಲ್ಲ. ಇದು ಹಲವಾರು ರ್ಯಾಂಪ್ಗಳು, ಈಗಿರುವ ಫ್ಲೈಓವರ್ಗಳು ಮತ್ತು ಕೆಳಮಟ್ಟದ ರಸ್ತೆಗಳ ಮಿಶ್ರಣವಾಗಿರುವುದರಿಂದ ಇಲ್ಲಿ ಟೋಲ್ ಪ್ಲಾಜಾ ನಿರ್ಮಿಸಿ ಹಣ ಸಂಗ್ರಹಿಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ತಜ್ಞರು ಹೇಳಿದ್ದಾರೆ.
ಏನಿದು ಪ್ರಸ್ತಾಪ?
ಅಲ್ಲದೆ ಇಲ್ಲಿ ಸಂಚರಿಸುವ ವಾಹನಗಳ ಸಮೀಕ್ಷೆ ನಡೆಸಿದಾಗ ಟೋಲ್ ಕಟ್ಟಲು ಯೋಗ್ಯವಾದ ವಾಹನಗಳ ಸಂಖ್ಯೆ ತೀರಾ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಈ ಕಾರಣದಿಂದ ಇಡೀ ಯೋಜನೆಯನ್ನು ಕಡ್ಡಾಯವಾಗಿ ಟೋಲ್ ಮುಕ್ತ ಮಾಡಲು ನಿರ್ಧರಿಸಲಾಗಿದೆ. ಹೀಗೆ ಟೋಲ್ ಇಲ್ಲದೆ ಕಾರಿಡಾರ್ ನಿರ್ಮಿಸಲು ವರದಿಯು ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್ ಎಂಬ ಹೊಸ ಆರ್ಥಿಕ ಮಾದರಿಯನ್ನು ಮುಂದಿಟ್ಟಿದೆ. ಈ ಯೋಜನೆಯಿಂದಾಗಿ ಕಾರಿಡಾರ್ ಹಾದುಹೋಗುವ ರಸ್ತೆಯ ಆಸುಪಾಸಿನ ಜಮೀನು ಹಾಗೂ ಕಟ್ಟಡಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಮತ್ತು ಅಲ್ಲಿನ ನಿವಾಸಿಗಳ ಪ್ರಯಾಣದ ಸಮಯವೂ ಉಳಿತಾಯವಾಗಲಿದೆ. ಇದನ್ನೇ ನೆಪವಾಗಿಸಿಕೊಂಡು ಬಿಬಿಎಂಪಿ ಆಸ್ತಿ ತೆರಿಗೆಯ ಜೊತೆಗೆ ಹೆಚ್ಚುವರಿ ಸೆಸ್ ಅಥವಾ ವಿಶೇಷ ಲೇವಿಯನ್ನು ವಿಧಿಸಿ ಹಣ ವಸೂಲಿ ಮಾಡಲು ಕಠಿಣ ಪ್ರಸ್ತಾಪ ಇಡಲಾಗಿದೆ.
Bangalore [Bangalore],Bangalore,Karnataka













