Last Updated:
ಕನ್ನಡ ಮಾತ್ರವಲ್ಲ, ತುಳು ಚಿತ್ರರಂಗಕ್ಕೂ ಎಸ್. ಜಾನಕಿ ಅವರ ಕೊಡುಗೆ ಅಪಾರವಾಗಿದೆ. ಆರಂಭಿಕ ತುಳು ಸಿನಿಮಾಗಳಲ್ಲಿ ಹಾಡುವ ಮೂಲಕ ಅವರು ತುಳು ಚಿತ್ರರಂಗದ ಬೆಳವಣಿಗೆಗೆ ಮಹತ್ವದ ಪಾತ್ರವಹಿಸಿದ್ದರು.
ಭಾರತೀಯ ಚಿತ್ರರಂಗದ ಸಂಗೀತ ಲೋಕಕ್ಕೆ ಇಂದು ಎಂದಿಗೂ ಮರೆಯಲಾಗದ ನೋವಿನ ದಿನ. ತಮ್ಮ ಸುಮಧುರ ಕಂಠದ ಮೂಲಕ ಹಲವು ತಲೆಮಾರುಗಳ ಸಂಗೀತಾಭಿಮಾನಿಗಳ ಮನಸ್ಸು ಗೆದ್ದಿದ್ದ ಗಾನಕೋಗಿಲೆ ಎಸ್. ಜಾನಕಿ (S Janaki) ಅವರು ಇಂದು (ಜುಲೈ 11) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಅವರ ಅಗಲಿಕೆಯಿಂದ ಭಾರತೀಯ ಚಿತ್ರಸಂಗೀತದ ಒಂದು ಸುವರ್ಣ ಅಧ್ಯಾಯವೇ ಅಂತ್ಯಗೊಂಡಂತಾಗಿದೆ.
ಎಸ್. ಜಾನಕಿ ಅವರ ಧ್ವನಿಗೆ ಯಾವುದೇ ಭಾಷೆಯ ಗಡಿಗಳಿರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಂಗಾಳಿ, ಕೊಂಕಣಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ್ದಾರೆ.
ಸುಮಾರು ಆರು ದಶಕಗಳ ಸುದೀರ್ಘ ಸಂಗೀತ ಪಯಣದಲ್ಲಿ ಅವರು ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದು, ಈ ಸಾಧನೆ ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲೇ ಅಪರೂಪದ ದಾಖಲೆಗಳಲ್ಲಿ ಒಂದಾಗಿದೆ.
ಕನ್ನಡ ಮಾತ್ರವಲ್ಲ, ತುಳು ಚಿತ್ರರಂಗಕ್ಕೂ ಎಸ್. ಜಾನಕಿ ಅವರ ಕೊಡುಗೆ ಅಪಾರವಾಗಿದೆ. ಆರಂಭಿಕ ತುಳು ಸಿನಿಮಾಗಳಲ್ಲಿ ಹಾಡುವ ಮೂಲಕ ಅವರು ತುಳು ಚಿತ್ರರಂಗದ ಬೆಳವಣಿಗೆಗೆ ಮಹತ್ವದ ಪಾತ್ರವಹಿಸಿದ್ದರು.
ತುಳು ಚಿತ್ರರಂಗಕ್ಕೆ ಅವರನ್ನು ಪರಿಚಯಿಸಿದವರು ನಿರ್ಮಾಪಕ ಕೆ.ಎನ್. ಟೇಲರ್. ಅವರ ನಿರ್ಮಾಣದ 1971ರಲ್ಲಿ ಬಿಡುಗಡೆಯಾದ ದಾರೆದ ಬುಡೆದಿ ಚಿತ್ರದ ಮೂಲಕ ಜಾನಕಿ ತುಳು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ 1972ರಲ್ಲಿ ಬಿಡುಗಡೆಯಾದ ಬಿಸತ್ತಿ ಬಾಬು ಚಿತ್ರದಲ್ಲೂ ಅವರು ಹಾಡಿದರು.
ತುಳು ಚಿತ್ರರಂಗದಲ್ಲಿ ಎಸ್. ಜಾನಕಿ ಅವರನ್ನು ನೆನಪಿಸಿದಾಗ ಮೊದಲು ನೆನಪಾಗುವ ಹಾಡುಗಳಲ್ಲಿ ಎಕ್ಕಸಕ್ಕ ಎಕ್ಕಸಕ್ಕ ಪ್ರಮುಖವಾಗಿದೆ. ಕೋಟಿ ಚೆನ್ನಯ ಸಿನಿಮಾದ ಈ ಹಾಡಿನ ಸಾಹಿತ್ಯವನ್ನು ಬಿ. ವಿವೇಕ ರೈ ರಚಿಸಿದ್ದು, ಜಾನಕಿ ಅವರ ಧ್ವನಿ ಈ ಹಾಡಿಗೆ ಹೊಸ ಜೀವ ತುಂಬಿತ್ತು.
ಇಂದಿಗೂ ಕರಾವಳಿಯ ಜನ ಈ ಹಾಡನ್ನು ಅಪಾರ ಅಭಿಮಾನದಿಂದ ಕೇಳುತ್ತಾರೆ. ತುಳು ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಹಾಡುಗಳ ಪಟ್ಟಿಯಲ್ಲಿ ಈ ಗೀತೆಗೆ ವಿಶೇಷ ಸ್ಥಾನವಿದೆ.
ಸಿನಿಮಾ ಹಾಡುಗಳಷ್ಟೇ ಅಲ್ಲದೆ ಎಸ್. ಜಾನಕಿ ಅವರು ಅನೇಕ ತುಳು ಭಕ್ತಿಗೀತೆಗಳಿಗೂ ಧ್ವನಿಯಾಗಿದ್ದರು. ಕರಾವಳಿಯ ಅನೇಕ ದೇವಸ್ಥಾನಗಳಲ್ಲಿ ಇಂದಿಗೂ ಅವರ ಕಂಠದಲ್ಲಿ ಮೂಡಿಬಂದ ಭಕ್ತಿಗೀತೆಗಳು ಪ್ರತಿನಿತ್ಯ ಕೇಳಿಬರುತ್ತವೆ.
Bangalore [Bangalore],Bangalore,Karnataka
Jul 11, 2026 11:20 PM IST














