Last Updated:
ರಜತ್ ಪಾಟಿದಾರ್ ಆರಂಭದಲ್ಲಿ ಆರ್ಸಿಬಿ ಸೇರಲು ಹಿಂಜರಿದರೂ, ಇಂಜುರಿ ರೀಪ್ಲೇಸ್ಮೆಂಟ್ ಆಗಿ ಬಂದು ಎಲಿಮಿನೇಟರ್ ನಲ್ಲಿ ಶತಕ ಬಾರಿಸಿ, ನಾಯಕನಾಗಿ ಆರ್ಸಿಬಿಗೆ 2025, 2026 ಐಪಿಎಲ್ ಕಪ್ ಗೆಲ್ಲಿಸಿದರು.
ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಅಭಿಮಾನಿಗಳ ಪಾಲಿಗೆ ಕೇವಲ ಒಬ್ಬ ಆಟಗಾರನಲ್ಲ, ಬದಲಿಗೆ ಇತಿಹಾಸ ಸೃಷ್ಟಿಸಿದ ನಾಯಕ. ಆರ್ಸಿಬಿ (RCB) ಫ್ರಾಂಚೈಸಿಗೆ ಮೊದಲ ಬಾರಿಗೆ ಐಪಿಎಲ್ ಟ್ರೋಫಿ (IPL Trophy Winners) ತಂದುಕೊಟ್ಟ ಹೆಗ್ಗಳಿಕೆ ಪಾಟಿದಾರ್ ಅವರದ್ದು. ಅಷ್ಟೇ ಅಲ್ಲ ಐಪಿಎಲ್ 2026ನಲ್ಲಿ ಬ್ಯಾಕ್-ಟು-ಬ್ಯಾಕ್ ಮತ್ತೊಂದು ಕಪ್ ಗೆಲ್ಲಿಸಿ ಬೆಂಗಳೂರು ಕ್ರಿಕೆಟ್ ಪ್ರೇಮಿಗಳನ್ನು ಸಂಭ್ರಮದ ಕಡಲಲ್ಲಿ ತೇಲಿಸಿದ್ದಾರೆ. ಆದರೆ ಈ ಯಶಸ್ಸಿನ ಹಿಂದಿರುವ ಕಹಿ ಸತ್ಯ ನಿಮಗೊತ್ತಾ? ಆರಂಭದಲ್ಲಿ ಪಾಟಿದಾರ್ (Rajat Patidar) ಅವರಿಗೆ ಆರ್ಸಿಬಿ ತಂಡಕ್ಕೆ ಸೇರಲು ಇಷ್ಟವೇ ಇರಲಿಲ್ಲವಂತೆ.
ಇತ್ತೀಚಿಗೆ ರೊಟೋರಿಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ ರಜತ್ ಪಾಟಿದಾರ್, ತಾವು ಆರ್ಸಿಬಿ ಸೇರಲು ಹಿಂಜರಿದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. 2022 ಸೀಸನ್ನಲ್ಲಿ ಆರ್ಸಿಬಿ ತಂಡಕ್ಕೆ ಇಂಜುರಿ ರೀಪ್ಲೇಸ್ಮೆಂಟ್ ಆಟಗಾರನಾಗಿ ಕರೆ ಬಂದಾಗ ಪಾಟಿದಾರ್ ತೀರ ಗೊಂದಲದಲ್ಲಿದ್ದರಂತೆ. ಆ ದಿನಗಳನ್ನು ನೆನೆದ ಪಾಟಿದಾರ್ ʻನಿಜ ಹೇಳಬೇಕೆಂದರೆ ನನಗೆ ಆರ್ಸಿಬಿ ತಂಡಕ್ಕೆ ಬರಲು ಇಷ್ಟವಿರಲಿಲ್ಲ. ಒಬ್ಬ ರೀಪ್ಲೇಸ್ಮೆಂಟ್ ಆಟಗಾರನಾಗಿ ಹೋದರೆ ತಂಡದಲ್ಲಿ ಆಡುವ ಅವಕಾಶ ಸಿಗುವುದು ತೀರಾ ಕಷ್ಟ ಎಂದು ನನಗೆ ತಿಳಿದಿತ್ತು. ನಾನು ಕ್ಯಾಂಪ್ ಸೇರಿದಾಗಲೂ ನನಗೆ ಸಿಕ್ಕ ಫೀಡ್ಬ್ಯಾಕ್ ಅದೇ ಆಗಿತ್ತುʼ ಎಂದು ಹೇಳಿದ್ದಾರೆ.
ತಂಡದ ಮ್ಯಾನೇಜ್ಮೆಂಟ್ ಕೂಡ ಇವರಿಗೆ ಆರಂಭದಲ್ಲೇ ನೇರವಾಗಿ ವಿಷಯ ತಿಳಿಸಿತ್ತಂತೆ. ‘ನಿನ್ನನ್ನು ಕೇವಲ ರೀಪ್ಲೇಸ್ಮೆಂಟ್ ಆಗಿ ಕರೆ ತಂದಿದ್ದೇವೆ. ಹಾಗಾಗಿ ಆರಾಮಾಗಿ ಇರು, ಯಾರಾದರೂ ಆಟಗಾರರಿಗೆ ಗಾಯವಾದರೆ ಮಾತ್ರ ನಿನಗೆ ಚಾನ್ಸ್ ಸಿಗುತ್ತೆ, ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ಮೊದಲೇ ಸ್ಪಷ್ಟಪಡಿಸಿತ್ತು’ ಎಂದು ಪಾಟಿದಾರ್ ನೆನಪಿಸಿಕೊಂಡಿದ್ದಾರೆ.
ರಜತ್ ಪಾಟಿದಾರ್ ಅವರ ಆರ್ಸಿಬಿ ಜರ್ನಿ ಒಂದು ರೋಲರ್ ಕೋಸ್ಟರ್ ರೈಡ್ (Rollercoaster Ride) ಇದ್ದಂತೆ. 2021ರ ಮಿನಿ ಹರಾಜಿನಲ್ಲಿ ಕೇವಲ 20 ಲಕ್ಷ ರೂಪಾಯಿಗೆ ಆರ್ಸಿಬಿ ಸೇರಿದ ಇವರು, ಆಡಿದ 4 ಪಂದ್ಯಗಳಲ್ಲಿ ಕೇವಲ 71 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಇದರ ಪರಿಣಾಮವಾಗಿ 2022ರ ಮೆಗಾ ಹರಾಜಿನಲ್ಲಿ ಇವರು ಅನ್ಸೋಲ್ಡ್ (Unsold) ಆಗಿ ಉಳಿದರು.
ಆದರೆ, ಲವ್ನೀತ್ ಸಿಸೋಡಿಯಾ ಅವರಿಗೆ ಗಾಯವಾದಾಗ ಆರ್ಸಿಬಿ ಮತ್ತೆ ಪಾಟಿದಾರ್ ಅವರ ಕೈ ಹಿಡಿಯಿತು. ಇಷ್ಟವಿಲ್ಲದಿದ್ದರೂ ತಂಡಕ್ಕೆ ಬಂದ ಪಾಟಿದಾರ್, ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಸೆನ್ಸೇಷನ್ ಸೃಷ್ಟಿಸಿದರು. ಆ ಒಂದು ಶತಕ ಇಡೀ ಐಪಿಎಲ್ ಇತಿಹಾಸವನ್ನೇ ಬದಲಾಯಿಸಿತು.
2025ರ ಮೆಗಾ ಹರಾಜಿನ ನಂತರ ರಜತ್ ಪಾಟಿದಾರ್ ಅವರಿಗೆ ಆರ್ಸಿಬಿ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಯಿತು. ತಂಡಕ್ಕೆ ಎಂದು ಒಲಿಯದ ಕಪ್ ಅನ್ನು ಮೊದಲ ಬಾರಿಗೆ ಗೆಲ್ಲಿಸಿಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾದರು. ಈಗ 2026ರ ಸೀಸನ್ನಲ್ಲೂ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಮೂಲಕ ಆರ್ಸಿಬಿ ಇತಿಹಾಸದಲ್ಲಿ ರಜತ್ ಪಾಟಿದಾರ್ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂತಾಗಿದೆ. ಅಂದು ಬೆಂಚ್ ಕಾಯುವ ಭಯದಲ್ಲಿದ್ದ ಆಟಗಾರ ಇಂದು ಬೆಂಗಳೂರು ಜನರ ಹೆಮ್ಮೆಯ ನಾಯಕನಾಗಿ ಮೆರೆಯುತ್ತಿರುವುದು ನಿಜಕ್ಕೂ ಅದ್ಭುತ ಕಥೆ.
Bangalore [Bangalore],Bangalore,Karnataka













