Last Updated:
ಒಟ್ಟು 65 ವಾರ್ಡ್ಗಳನ್ನು ಹೊಂದಿರುವ ಭರತ್ಪುರ ಪಾಲಿಕೆಯಲ್ಲಿ ಮೇಯರ್ ಪೀಠ ಅಲಂಕರಿಸಲು ಹಾಗೂ ಸ್ಪಷ್ಟ ಬಹುಮತ ಸಾಬೀತುಪಡಿಸಲು 33 ಕೌನ್ಸಿಲರ್ಗಳ (ಪಾರ್ಷದ್) ಬೆಂಬಲದ ಅಗತ್ಯವಿದೆ. ಆದರೆ ಇಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿರುವ 36 ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವ ಮೂಲಕ ರಾಜಕೀಯ ಪಂಡಿತರನ್ನೇ ಬೆರಗುಗೊಳಿಸಿದ್ದಾರೆ.
ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ (Rajasthan Local Body Polls) ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (CM Bhajanlal Sharma) ಅವರ ತವರು ಜಿಲ್ಲೆಯಾದ ಭರತ್ಪುರ ಮಹಾನಗರ ಪಾಲಿಕೆಯಲ್ಲಿ (Bharatpur Municipal Corporation) ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಸಿಎಂ ಕ್ಷೇತ್ರದಲ್ಲೇ ಪಕ್ಷೇತರ ಅಭ್ಯರ್ಥಿಗಳು ಅಬ್ಬರಿಸಿದ್ದಾರೆ, ಅವರು ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಸರಿಯಾದ ಪಾಠ ಕಲಿಸಿದ್ದಾರೆ. 65 ಕ್ಷೇತ್ರಗಳಿರುವ ಈ ಪಾಲಿಕೆಯಲ್ಲಿ ಬರೋಬ್ಬರಿ 36 ಪಕ್ಷೇತರರು ಜಯಬೇರಿ ಬಾರಿಸಿದ್ದಾರೆ.
ಭರತ್ಪುರ ಜಿಲ್ಲೆ ಈ ಚುನಾವಣೆಯಲ್ಲಿ ಬಹಳಷ್ಟು ಮಹತ್ವ ಪಡೆದುಕೊಂಡಿತ್ತು. ಏಕೆಂದರೆ, ಇದು ಮುಖ್ಯಮಂತ್ರಿ ಭಜನ್ ಲಾಲ್ ಹಾಗೂ ಗೃಹಸಚಿವ ಜವಾಹರ್ ಸಿಂಗ್ ಬೇಢಮ್ ಅವರ ತವರು ಜಿಲ್ಲೆಯಾಗಿತ್ತು. ಹಾಗಾಗಿ ಇಡೀ ರಾಜಸ್ಥಾನದ ಕಣ್ಣು ಭರತ್ಪುರ ಮಹಾನಗರ ಪಾಲಿಕೆ ಚುನಾವಣೆಯ ಮೇಲೆ ನೆಟ್ಟಿತ್ತು. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಈ ಬಾರಿ ಭರತ್ಪುರದಲ್ಲಿ ತನ್ನದೇ ಆದ ಬೋರ್ಡ್ (ಅಧಿಕಾರ) ರಚಿಸುವ ಭಾರಿ ಭರವಸೆಯನ್ನು ಬಿಜೆಪಿ ಹೊಂದಿತ್ತು. ಆದರೆ ಭರತ್ಪುರ ನಗರದ ನಿವಾಸಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಆ ಭರವಸೆಯನ್ನು ಹುಸಿಗೊಳಿಸಿದ್ದಾರೆ.
ಒಟ್ಟು 65 ವಾರ್ಡ್ಗಳನ್ನು ಹೊಂದಿರುವ ಭರತ್ಪುರ ಪಾಲಿಕೆಯಲ್ಲಿ ಮೇಯರ್ ಪೀಠ ಅಲಂಕರಿಸಲು ಹಾಗೂ ಸ್ಪಷ್ಟ ಬಹುಮತ ಸಾಬೀತುಪಡಿಸಲು 33 ಕೌನ್ಸಿಲರ್ಗಳ (ಪಾರ್ಷದ್) ಬೆಂಬಲದ ಅಗತ್ಯವಿದೆ. ಆದರೆ ಇಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿರುವ 36 ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವ ಮೂಲಕ ರಾಜಕೀಯ ಪಂಡಿತರನ್ನೇ ಬೆರಗುಗೊಳಿಸಿದ್ದಾರೆ. ಬಿಜೆಪಿ ಕೇವಲ 20 ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. ಉಳಿದಂತೆ ಬಿಎಸ್ಪಿ (BSP) ಮತ್ತು ಆರ್ಎಲ್ಪಿ (RLP) ತಲಾ 1 ಸ್ಥಾನ ಗೆದ್ದುಕೊಂಡಿವೆ.
ಸದ್ಯ 20 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ತನ್ನ ಮೇಯರ್ ಮಾಡಲು ಇನ್ನೂ 13 ಕೌನ್ಸಿಲರ್ಗಳ ಬೆಂಬಲ ಬೇಕಾಗಿದೆ. ಹೀಗಾಗಿ ಭರತ್ಪುರದ ಮುಂದಿನ ಮಹಾಪೌರರ ಆಯ್ಕೆಯ ಸಂಪೂರ್ಣ ಕೀಲಿ ಕೈ ಈಗ ಪಕ್ಷೇತರರ ಕೈಗೆ ಸಿಕ್ಕಂತಾಗಿದ್ದು, ಈ ಫಲಿತಾಂಶ ಉಭಯ ಪಕ್ಷಗಳಿಗೂ ಭಾರಿ ಆಘಾತ ನೀಡಿದೆ.
ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆ 2026ರ ಫಲಿತಾಂಶವು ಕೇವಲ ಭರತ್ಪುರ ಮಾತ್ರವಲ್ಲದೆ ಹಲವು ಕಡೆ ಬಿಜೆಪಿಗೆ ತೀವ್ರ ಹಿನ್ನಡೆ ತಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಅವರು ಕೂಡ ತಮ್ಮದೇ ಕೋಟೆಯನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಅವರ ತವರು ಜಿಲ್ಲೆಯಾದ ಪಾಲಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಬಿಕ್ಕಾನೇರ್ ಮತ್ತು ಪಾಲಿಯಂತಹ ಪ್ರಮುಖ ದೊಡ್ಡ ನಗರ ಸಂಸ್ಥೆಗಳು ಬಿಜೆಪಿಯ ಕೈತಪ್ಪಿ ಹೋಗಿವೆ.
ರಾಜ್ಯದ ಬಹುತೇಕ ನಗರ ಸಂಸ್ಥೆಗಳಲ್ಲಿ ಪಕ್ಷೇತರರೇ ಕಿಂಗ್ಮೇಕರ್ ಆಗಿ ಹೊರಹೊಮ್ಮಿದ್ದು, ಮೇಯರ್, ನಗರ ಪರಿಷತ್ ಸಭಾಪತಿ ಹಾಗೂ ಪುರಸಭೆ ಅಧ್ಯಕ್ಷರನ್ನು ನಿರ್ಧರಿಸುವ ಶಕ್ತಿ ಅವರ ಕೈಯಲ್ಲಿದೆ. ಫಲಿತಾಂಶದ ಮುನ್ಸೂಚನೆಯನ್ನು ಮೊದಲೇ ಅರಿತಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗಳ ಮೇಲೆ ಕಣ್ಣಿಟ್ಟಿದ್ದವು. ಇದೀಗ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇರುವುದರಿಂದ, ಭರತ್ಪುರ ಸೇರಿದಂತೆ ಇತರೆಡೆ ತನ್ನ ಮೇಯರ್ ಪೀಠವನ್ನು ಉಳಿಸಿಕೊಳ್ಳಲು ಬಿಜೆಪಿ ತನ್ನ ‘ಪ್ಲಾನ್-ಬಿ’ (Plan-B) ರಣತಂತ್ರವನ್ನು ಆರಂಭಿಸಿದೆ. ಗೆದ್ದಿರುವ ಪಕ್ಷೇತರರನ್ನು ತನ್ನತ್ತ ಸೆಳೆದು ಅಧಿಕಾರ ಹಿಡಿಯುವ ಮಿಷನ್ನಲ್ಲಿ ಬಿಜೆಪಿ ನಾಯಕರು ಸಕ್ರಿಯರಾಗಿದ್ದಾರೆ.
ಭರತ್ಪುರ ನಗರ ಪಾಲಿಕೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಈಗ ಕೇವಲ 10 ವರ್ಷಗಳಾಗಿವೆ. ಇದರ ಇತಿಹಾಸವನ್ನು ಗಮನಿಸಿದರೆ ಮತ್ತೊಮ್ಮೆ ಹಳೆಯ ಇತಿಹಾಸವೇ ಮರುಕಳಿಸುವ ಮುನ್ಸೂಚನೆ ಸಿಗುತ್ತಿದೆ.
* ಮೊದಲ ಮೇಯರ್ (2014): ಭರತ್ಪುರ ಮಹಾನಗರ ಪಾಲಿಕೆಯ ಮೊದಲ ಮಹಾಪೌರರಾಗಿ ಶಿವ ಸಿಂಗ್ ಭೋಂಟ್ ಅವರು ಆಯ್ಕೆಯಾಗಿದ್ದರು. ವಿಶೇಷವೆಂದರೆ ಅವರು ಪಕ್ಷೇತರರಾಗಿ ಗೆದ್ದಿದ್ದರೂ, ನಂತರ ಬಿಜೆಪಿಯ ಬೆಂಬಲದೊಂದಿಗೆ ಮೊದಲ ಮೇಯರ್ ಪೀಠ ಅಲಂಕರಿಸಿದ್ದರು.
* ಎರಡನೇ ಮೇಯರ್ (2019/20): ತದನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸಿ ಪಾಲಿಕೆಯನ್ನು ವಶಪಡಿಸಿಕೊಂಡಿತ್ತು. ಕಾಂಗ್ರೆಸ್ನ ಅಭಿಜೀತ್ ಸಿಂಗ್ ಭರತ್ಪುರದ ಎರಡನೇ ಮೇಯರ್ ಆಗಿ ಅಧಿಕಾರ ನಡೆಸಿದ್ದರು.
* ಪ್ರಸ್ತುತ ಸ್ಥಿತಿ (2026): ಇದೀಗ ಮೂರನೇ ಅವಧಿಯ ಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ಪಕ್ಷೇತರರಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಬಿಜೆಪಿಗೆ ಇನ್ನೂ 13 ಸೀಟುಗಳ ಕೊರತೆ ಇರುವುದರಿಂದ, ಹಳೆಯ ಇತಿಹಾಸದಂತೆ ಈ ಬಾರಿಯೂ ಪಕ್ಷೇತರರು ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರ ರಚಿಸುತ್ತಾರಾ ಅಥವಾ ಹೊಸ ಇತಿಹಾಸ ಸೃಷ್ಟಿಸುತ್ತಾರಾ ಎಂಬುದು ಸೆಪ್ಟೆಂಬರ್ 21ರ ಮೇಯರ್ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.














